ಭವಿಷ್ಯದಲ್ಲಿ ವಿಶ್ವದ ಹೊಸ ಶಕ್ತಿಯಾಗಿ ಉದಯಿಸಲಿದೆ ಭಾರತ: ಸಚಿವ ಜೋಶಿ

KannadaprabhaNewsNetwork | Updated : Feb 05 2024, 05:14 PM IST

ಸಾರಾಂಶ

ಭಾರತದಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಧಾರವಾಡ: ಮಹಿಳೆಯರ ಸಬಲೀಕರಣದಲ್ಲಿ ಮೂಂಚೂಣಿಯಲ್ಲಿರುವ ಭಾರತ ಭವಿಷ್ಯದ ಕೆಲವೇ ದಿನಗಳಲ್ಲಿ ವಿಶ್ವದ ಹೊಸ ಶಕ್ತಿಯಾಗಿ ಉದಯಿಸಲಿದ್ದು, ಆಗ ಹಿರಿಯಣ್ಣನಂತೆ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಇಲ್ಲಿಯ ವನಿತಾ ಸೇವಾ ಸಮಾಜದ ರೂವಾರಿ ಭಾಗೀರಥಿಬಾಯಿ ಪುರಾಣಿಕ ಅವರ ಬದುಕಿನ ಕುರಿತು ಬೆಳಕು ಚೆಲ್ಲುವ ಮೂರು ಕೃತಿಗಳ ಲೋಕಾರ್ಪಣೆ ಹಾಗೂ ಸಂಸ್ಥೆಯ 96ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

ದೇಶದ ರಾಜಧಾನಿಯಲ್ಲಿ ಕಳೆದ ತಿಂಗಳು 26ರಂದು ನಡೆದ ಗಣರಾಜ್ಯೋತ್ಸವದದಲ್ಲಿ ನಾರಿಶಕ್ತಿ ಅನಾವರಣಗೊಂಡಿದ್ದು, ಅದನ್ನು ಕಂಡು ಸ್ವತಃ ಫ್ರಾನ್ಸ್ ಅಧ್ಯಕ್ಷರೇ ಚಕಿತರಾಗಿದ್ದಾರೆ. 

ಅಷ್ಟರಮಟ್ಟಿಗೆ ಭಾರತದಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. 1920ರಲ್ಲಿ ಇಂದಿನಂತೆ ಯಾವುದೇ ರೀತಿಯ ಅವಕಾಶಗಳು ಇಲ್ಲದೇ ಇರುವಾಗ ಜನ್ಮವೆತ್ತಿದ್ದ ಮಹಾತಾಯಿ ಭಾಗೀರಥಿಬಾಯಿ ಅವರ ಜೀವನಕಥೆ ಓದಿದಾಗ ಆರಂಭದಲ್ಲಿ ಕಣ್ಣಲ್ಲಿ ನೀರು ಜಿನುಗಿದರೆ ನಂತರದ ಭಾಗದಲ್ಲಿ ಸ್ಫೂರ್ತಿಯ ಸೆಲೆಯಾಗುತ್ತಾರೆ ಎಂದರು.

ಭಾಗೀರಥಿಬಾಯಿ ಸಾವಿರಾರು ಮಹಿಳೆಯರಿಗೆ ದಾರಿದೀಪವಾಗುವ ಮೂಲಕ ಹೊಸ ಮನ್ವಂತರಕ್ಕೆ ಕಾರಣೀಭೂತರಾಗಿದ್ದಾರೆ. ಆದರೆ ಈ ಸ್ಫೂರ್ತಿದಾಯಕ ಕಥೆ ಜನ ಸಾಮಾನ್ಯರಿಗೆ ತಲುಪದೆ ಇರುವುದು ದುರಂತ. ಈಗ ಸಂಸ್ಥೆ ಅವರ ಜೀವನ ಕಥೆಯನ್ನು ಗ್ರಂಥರೂಪಕ್ಕೆ ಇಳಿಸಿರುವುದು ಹಾಗೂ ಅದನ್ನು ಆಂಗ್ಲಭಾಷೆಗೂ ತರ್ಜುಮೆ ಮಾಡಿರುವುದು ಸಂತಸ ಮೂಡಿಸಿದೆ. ಅವರ ಜೀವನ ನಿಜಕ್ಕೂ ನಮಗೆ ಅನುಕರಣಿಯವಾಗಿದೆ ಎಂದರು.

ಪುಸ್ತಕ ಲೋಕಾರ್ಪಣೆ ಮಾಡಿದ ಶಾಸಕ ಅರವಿಂದ ಬೆಲ್ಲದ, ಮಹನೀಯರ ಸಾಧನೆ ಕುರಿತು ಮಾತನಾಡಿದರೆ ಸಾಲದು. ಬದಲಾಗಿ, ಅವರಂತೆ ನಾವು ಸಹ ಯಾವ ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎನ್ನುವುದನ್ನು ಚಿಂತಿಸಬೇಕಿದೆ. 

ಪುಸ್ತಕಗಳನ್ನು ಓದಿ ಸುಮ್ಮನಾದರೆ ಅದರಿಂದ ಆಗುವ ಲಾಭವೇನು ಇಲ್ಲ. ಬದಲಾಗಿ ಅವರಂತೆ ನಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿತು ಆ ಕಡೆ ಹೆಜ್ಜೆಗಳನ್ನು ಹಾಕಬೇಕಿದೆ. 

ಭಾಗೀರಥಿಬಾಯಿ ಪುರಾಣಿಕರು ಮಾಡಿರುವ ಕೆಲಸದಿಂದ ಪ್ರೇರೆಪಣೆಗೊಂಡು ನಾವುಗಳು ಸಹ ತನುಮನಧನದಿಂದ ದಮನಿತರ ಧ್ವನಿಯಾದಾಗ ಮಾತ್ರವೇ ಈ ರೀತಿಯ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ ಎಂದರು.

ಸಾನಿಧ್ಯವನ್ನು ಗದಗ ಶಿವಾನಂದ ಮಠದ ಸದಾಶಿವಾನಂದ ಸ್ವಾಮಿಗಳು ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಟಿ.ಎಸ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಗ್ರಂಥ ರಚನೆಕಾರರಾದ ಸಿ.ಯು. 

ಬೆಳ್ಳಕ್ಕಿ, ಡಾ. ಆನಂದ ಪಾಟೀಲ, ಮಾಯಿ ಪುಸ್ತಕದ ಆಂಗ್ಲ ಭಾಷೆಯ ಅನುವಾದಕರಾದ ಅರುಣಕುಮಾರ ಹಬ್ಬು, ಡಾ. ವಿಎಸ್‌ವಿ ಪ್ರಸಾದ್, ರಾಧಿಕಾ ಕುಲಕರ್ಣಿ, ರವಿ ಎಲಿಗಾರ, ಅಶೋಕನಾಯಕ, ಅರುಣ ಶಹಾಪುರ, ಡಾ. ಶರಣಮ್ಮ ಗೋರೆಬಾಳ, ದಾನಪ್ಪ ಕಬ್ಬೇರ, ಸುನಂದಾ ಹೆಗಡೆ, ಪರಿಮಳ ಶೆಟ್ಟಿ, ರಾಜೇಶ್ವರಿ ಅಳಗವಾಡಿ ಇದ್ದರು.

Share this article