ಮೈಸೂರು: ಸರ್ವಜನ ಹಿತವನ್ನು ಬಯಸುವುದರೊಂದಿಗೆ ಎಲ್ಲರೂ ನಮ್ಮವರು ಎಂದು ಅಪ್ಪಿಕೊಳ್ಳುವುದೇ ಭಾರತೀಯ ಸಂಸ್ಕೃತಿ ಎಂದು ಚಿಂತಕ, ಕನ್ನಡ ಪೂಜಾರಿ ಶ್ರೀ ಹಿರೇಮಗಳೂರು ಕಣ್ಣನ್ ಹೇಳಿದರು.
ಪರಂಪರೆ ಮತ್ತು ಸಂಪ್ರದಾಯಗಳನ್ನು ಅನುಸರಿಸಿಕೊಂಡು ಮುನ್ನಡೆಯಬೇಕು. ಸಂಸಾರದಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸಬೇಕು. ಸಂಸ್ಕೃತಿ ಮತ್ತು ಸಂಸಾರಕ್ಕೆ ಅವಿನಾಭಾವ ಸಂಬಂಧವಿದೆ. ಎರಡು ಪೂರಕವಾದವು. ಒಂದನ್ನು ಬಿಟ್ಟು ಇನ್ನೊಂದು ಇರಲಾರದು. ತಂದೆ-ತಾಯಿ, ಗುರುಹಿರಿಯರುಗಳನ್ನು ಶ್ರದ್ಧೆ, ಭಕ್ತಿ, ಗೌರವದಿಂದ ಕಾಣುವುದೇ ಸಂಸ್ಕೃತಿ ಎಂದು ಅವರು ಹೇಳಿದರು.
ಅಧ್ಯಾಪಕಿ ನಾಗಶ್ರೀ ತ್ಯಾಗರಾಜ್ ಅವರು ಮುದ್ದುರಾಮನ ಚೌಪದಿಗಳನ್ನು ಹಾಡಿದರು.ಪಶುವೈದ್ಯರಾದ ಡಾ. ಬಸವರಾಜ ಬೆಣ್ಣಿ ಅವರು ನಗು ಜೀವನಕ್ಕೆಅತಿ ಮುಖ್ಯವಾದದು. ಉತ್ತಮ ಆರೋಗ್ಯಕ್ಕೆ ನಗು ಅವಶ್ಯಕವಾಗಿ ಬೇಕು. ಸಕಾರಾತ್ಮಕ ಚಿಂತನೆಗಳಿಂದ ಮನಸ್ಸು ಯಾವಾಗಲೂ ಉಲ್ಲಾಸದಿಂದ ಕೂಡಿರುತ್ತದೆ. ನಗು ಒಂದು ಔಷಧಿ, ಕಾರಣವಿಲ್ಲದೆ ನಕ್ಕರೆ ಔಷಧಿ ಬೇಕು. ಜೀವನದಲ್ಲಿ ಎಷ್ಟೇ ಕಷ್ಟ ದುಃಖವಿದ್ದರೂ ಮುಖದ ಮೇಲೆ ಯಾವಾಗಲೂ ನಗು ಇರಬೇಕು. ನಗು ಸಹಜವಾಗಿ ವ್ಯಕ್ತಿಯ ಮನಸ್ಸನ್ನು ಹಗುರಗೊಳಿಸುತ್ತದೆ. ಇತರರ ಜೊತೆ ಒಳ್ಳೆಯ ಸಂಬಂಧ ಬೆಳೆಸಲು ಸಹಾಯ ಮಾಡುತ್ತದೆ. ನಗು ತಣಿವಿನ ಹಾರ್ಮೋನನ್ನು ಬಿಡುಗಡೆ ಮಾಡುತ್ತದೆ. ಆದ್ದರಿಂದ ನಗು ಹಂಚಿಕೊಳ್ಳೋಣ ಸಂತೋಷ ಹರಡೋಣ ಎಂದು ಹೇಳಿದರು.
ಶಿಬಿರದಲ್ಲಿ ಬೆಳಗಿನ ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ, ಧ್ಯಾನ ಹಾಗೂ ಸಂಜೆ ದೇಸಿ ಆಟಗಳಲ್ಲಿ ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಂಜೆ ಪ್ರಾರ್ಥನೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.