ವಿಶ್ವಕರ್ಮ ಮಹಾಸಭಾ ಪ್ರಮುಖರು, ಉತ್ತರ ಕನ್ನಡ ಮೂಲದ ಸ್ವಾಮೀಜಿಗಳ ಸಹಯೋಗ
ಪುತ್ತೂರು: ಇಬ್ಬರ ನಡುವೆ ನಡೆದಿರುವ ಪ್ರೀತಿ ಮುಂದುವರಿದು ವಿದ್ಯಾರ್ಥಿನಿ ಗರ್ಭಿಣಿಯಾಗಿದ್ದಾರೆ. ಇದರಲ್ಲಿ ತಪ್ಪು ಯಾರದ್ದು ಎಂದು ಹುಡುಕಾಡುವ ಬದಲು ಅವರಿಬ್ಬರನ್ನು ಒಂದು ಮಾಡುವ ಪ್ರಯತ್ನಗಳಾಗಬೇಕು. ಯುವಕನ ಕುಟುಂಬ ಮಾತನಾಡುವುದಕ್ಕೆ ಅವಕಾಶ ನೀಡಿದರೆ ಖುದ್ದು ನಾನೇ ಬಂದು ಮಾತನಾಡುತ್ತೇನೆ ಈ ವಿಚಾರದಲ್ಲಿ ಹಠ ಬೇಡ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದ್ದಾರೆ.ವಿಶ್ವಕರ್ಮ ಸಮುದಾಯದ ಯುವತಿಗೆ ಸಹಪಾಠಿಯಿಂದ ನಡೆದಿದೆ ಎಂಬ ಅನ್ಯಾಯದ ಆರೋಪದ ಹಿನ್ನೆಲೆಯಲ್ಲಿ ಮಾತುಕತೆ ನಡೆಸುವ ನಿಟ್ಟಿನಲ್ಲಿ ಶುಕ್ರವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಪ್ರಮುಖರು ಹಾಗೂ ಉತ್ತರ ಕರ್ನಾಟಕ ಮೂಲದ ಸ್ವಾಮೀಜಿಗಳ ಜೊತೆ ಅವರು ಸಂತ್ರಸ್ತೆ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕಲಬುರ್ಗಿ ಮೂರು ಜಾವದೀಶ್ವರ ಮಠದ ಶ್ರೀ ಪ್ರಣವ ನಿರಂಜನ ಸ್ವಾಮೀಜಿ, ಕೊಪ್ಪಳದ ಸರಸ್ವತಿ ಅಮ್ಮನವರ ಆಸ್ಥಾನದ ಶ್ರೀ ಗಣೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೈಸೂರು ವಿಶ್ವಕರ್ಮ ಜಿಲ್ಲಾ ಸಂಘದ ಅಧ್ಯಕ್ಷ ರಿಷಿ ಆಚಾರ್ಯ, ಪುತ್ತೂರು ಪುರಸಭೆ ಮಾಜಿ ಸದಸ್ಯ ಸುರೇಂದ್ರ ಆಚಾರ್ಯ ಮತ್ತಿತ್ತರರು ಇದ್ದರು.ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ವಿಶ್ವಕರ್ಮ, ರಾಜಿ ಮೂಲಕ ಇತ್ಯರ್ಥ ಮಾಡಲು ಮಧ್ಯಸ್ಥಿಕೆ ವಹಿಸುವ ನಿಟ್ಟಿನಲ್ಲಿ ಮುಖಂಡರನ್ನು ಕೇಳಿಕೊಳ್ಳಲಾಗಿದೆ. ಅವರಿಬ್ಬರು ಮದುವೆ ಆಗಬೇಕು ಎಂಬುದು ನಮ್ಮ ಆಗ್ರಹ. ಈ ಬಗ್ಗೆ ಎಸ್ಪಿ ಜೊತೆಗೂ ಮಾತುಕತೆ ನಡೆಸಿದ್ದೇವೆ. ಆದರೆ ಯುವಕನ ಕುಟುಂಬದವರು ಒಪ್ಪುವುದಿಲ್ಲ. ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧ. ಅದಕ್ಕೆ ವ್ಯವಸ್ಥೆ ಕಲ್ಪಿಸುವಂತೆ ಕಲ್ಲಡ್ಕ ಪ್ರಭಾಕರ ಭಟ್ ಅವರೊಂದಿಗೆ ನಾನು ಮಾತುಕತೆ ಮಾಡಲಿದ್ದೇನೆ ಎಂದರು. ಕಲಬುರ್ಗಿ ಮಿಶ್ವಕರ್ಮ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಮಾತನಾಡಿ, ಎರಡೂ ಕುಟುಂಬಗಳು ಒಂದಾಗಬೇಕು. ಅವರು ಹಿಂದಿನಂತೆ ಅನ್ಯೋನ್ಯತೆಯಿಂದ ಇರಬೇಕು. ಹುಟ್ಟಿದ ಮಗುವಿಗೆ ನ್ಯಾಯ ಸಿಗಬೇಕೆಂಬ ದೃಷ್ಟಿಯಿಂದ ಸಮಾಜದ ಜೊತೆಗೆ ಹಾಗೂ ಈ ಕುಟುಂಬದ ಜತೆಗೆ ಸ್ವಾಮೀಜಿಗಳು ನಿಂತಿದ್ದೇವೆ ಎಂದರು.