ಕನ್ನಡಪ್ರಭ ವಾರ್ತೆ ಶಿರಾ ರಾಜ್ಯದ ಬಲಿಷ್ಠ ಒಕ್ಕಲಿಗ ಮತ್ತು ವೀರಶೈವ ಸಮುದಾಯಗಳನ್ನು ಕೇಂದ್ರ ಓಬಿಸಿ ಮೀಸಲಾತಿಯಿಂದ ಕೈ ಬಿಡಿಸಬೇಕು ಎಂಬ ಹುನ್ನಾರ ನಡೆಯುತ್ತಿದ್ದು, ಅನಗತ್ಯವಾಗಿ ಮೀಸಲಾತಿ ವಿಚಾರಕ್ಕೆ ಕೈ ಹಾಕಿದರೆ ಉಗ್ರ ಪ್ರತಿರೋಧ ವ್ಯಕ್ತಪಡಿಸಬೇಕಾಗುತ್ತದೆ ಎಂದು ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಗಳು ತಿಳಿಸಿದರು. ಅವರು ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮದಲ್ಲಿ ಶುಕ್ರವಾರ ನಡೆದ ಶ್ರೀ ಮಹಾಲಕ್ಷ್ಮಿ ಅಮ್ಮನವರ ನೂತನ ದೇವಸ್ಥಾನದ ಸಂಪ್ರೋಕ್ಷಣ ಹಾಗೂ ಗೋಪುರ ಕಳಸ ಪ್ರತಿಷ್ಠಾಪನ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಹಳೆ ಮೈಸೂರು ಭಾಗದ ೧೭ ಜಿಲ್ಲೆಗಳಲ್ಲಿ ಒಕ್ಕಲಿಗ ಸಮುದಾಯ ಬಲಿಷ್ಠವಾಗಿದ್ದು, ಒಕ್ಕಲಿಗ ಸಮುದಾಯದಲ್ಲೂ ಕೂಡ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಸಾಕಷ್ಟುವೆ. ಅದೇ ರೀತಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ವೀರಶೈವ ಸಮುದಾಯ ಕೂಡ ಹೆಚ್ಚಾಗಿದ್ದು ಆ ಸಮುದಾಯದಲ್ಲೂ ಕೂಡ ಬಡತನ ರೇಖೆಗಿಂತ ಕೆಳಗಿರುವ ಸಾಕಷ್ಟು ಕುಟುಂಬಗಳು ಆರ್ಥಿಕ ಮತ್ತು ಸಾಮಾಜಿಕ ಶೈಕ್ಷಣಿಕವಾಗಿ ಹಿಂದುಳಿದಿವೆ. ಆದ್ದರಿಂದ ಮೀಸಲಾತಿಯಲ್ಲಿ ತಾರತಮ್ಯ ಮಾಡಿದರೆ ಸಮುದಾಯದ ಪರ ಶ್ರೀಮಠ ಹೋರಾಟ ಮಾಡಲಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜಾತಿ ಜನಗಣತಿ ಆಧಾರದ ಮೇಲೆ ಶೀಘ್ರದಲ್ಲಿಯೇ ರಾಜ್ಯ ಸರ್ಕಾರ ಮೀಸಲಾತಿ ಕಲ್ಪಿಸಲು ಮುಂದಾಗಿದ್ದು, ೩ಎ ಮೀಸಲಾತಿಯಲ್ಲಿ ಶೇಕಡ ೪ರಷ್ಟು ಮೀಸಲು ಒಕ್ಕಲಿಗ ಸಮುದಾಯ ಪಡೆಯುತ್ತಿದೆ, ಈ ಮೀಸಲಾತಿಯನ್ನು ಶೇ ೬ಕ್ಕೆ ಏರಿಕೆ ಮಾಡಬೇಕು. ಒಂದು ವೇಳೆ ಒಕ್ಕಲಿಗ ಮೀಸಲಾತಿಯಲ್ಲಿ ಏರುಪೇರು ಕಂಡರೆ ಸಮುದಾಯದ ಪರ ದೊಡ್ಡ ಹೋರಾಟವೇ ನಡೆಯಲಿದೆ. ಈಗಾಗಲೇ ಕುಂಚಿಟಿಗ ಸಮುದಾಯವನ್ನು ಕೇಂದ್ರ ಓಬಿಸಿ ಮೀಸಲಿಗೆ ಸೇರಿಸಬೇಕೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ ಎಂದ ಅವರು, ಗ್ರಾಮೀಣ ಪ್ರದೇಶದ ಜಾತ್ರೆ, ದೇವತಾ ಉತ್ಸವಗಳು ಪರಸ್ಪರ ಬಾಂಧವ್ಯವನ್ನು ಬೆಸೆಯುವಲ್ಲಿ ಸಹಕಾರಿಯಾಗುತ್ತವೆ. ಆದಿಶಕ್ತಿ ಶ್ರೀಮಹಾಲಕ್ಷ್ಮಿ ದೇವಿ ನಾಡಿಗೆ ಸುಭಿಕ್ಷೆ ಕರುಣಿಸಲಿ ಎಂದರು.