ಕನ್ನಡಪ್ರಭ ವಾರ್ತೆ ಭಾರತೀನಗರ
ಹೊರಗಿನ ಕನ್ನಡಿಗಿಂತ ಅಂತರಂಗದ ಕನ್ನಡಿ ಚೆನ್ನಾಗಿದ್ದರೆ ಮಾತ್ರ ಸಮಾಜ ಸುಭೀಕ್ಷವಾಗಿರಲು ಸಾಧ್ಯ ಎಂದು ಹಿರಿಯ ಸಾಹಿತಿ ಡಾ.ಪ್ರದೀಪ್ ಕುಮಾರ್ ಹೆಬ್ರಿ ತಿಳಿಸಿದರು.ಭಾರತೀ ಕಾಲೇಜಿನ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರ ಕನ್ನಡ ವಿಭಾಗದ ಪ್ರಥಮ ಎಂ.ಎ.ವಿದ್ಯಾರ್ಥಿಗಳು ಆಯೋಜಿಸಿದ್ದ ದ್ವಿತೀಯ ಎಂ.ಎ.ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಗೊಂಬೆ ಒಂದೇ ತರಹ ಇದ್ದರೂ ಅದರ ಬೆಲೆ ನಾನಾ ರೀತಿ ಇರುತ್ತದೆ. ಹಾಗೆ ನಾವು ಹೆಚ್ಚು ಬೆಲೆ ಬಾಳುವ ತರಹ ಇರಬೇಕು. ಬದುಕಿನಲ್ಲಿ ಧ್ಯೇಯ ಇಟ್ಟುಕೊಂಡು ಸವಾಲುಗಳನ್ನು ಸ್ವೀಕರಿಸಬೇಕು. ಆಗ ಮಾತ್ರ ಗುರಿಮುಟ್ಟಲು ಸಾಧ್ಯ ಎಂದರು.ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ನುಡಿಯಂತೆ ಓದುವಾಗಲೇ ಆದರ್ಶ ಚಿಂತನೆ ಸ್ವೀಕರಿಸಬೇಕು. ಇದರಿಂದ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ. ಜೊತೆಗೆ ಯಶಸ್ಸನ್ನು ಕೂಡ ಸಾಧಿಸಬಹುದು ಎಂದರು.
ಯಕ್ಷಗಾನಕ್ಕೆ ತಳಪಾಯ ಮಂಡ್ಯ. ಇಂದು ಕರಾವಳಿಯಲ್ಲಿ ಯಕ್ಷಗಾನ ಮಗು ನಾಲ್ಕನೇ ವರ್ಷದಲ್ಲಿ ಇದ್ದಾಗಲೇ ಕಲಿಯುತ್ತದೆ. ಆದರೆ, ಯಕ್ಷಗಾನದ ತವರೂರಾದ ಮಂಡ್ಯದಲ್ಲಿ ಒಂದು ಲಕ್ಷಕ್ಕೆ ಒಬ್ಬ ಯಕ್ಷಗಾನ ಅಭಿಮಾನಿಗಳು ಇಲ್ಲವೆಂದು ವಿಷಾದಿಸಿದರು.ಭಾರತೀ ಕಾಲೇಜಿನ ಪ್ರಾಂಶುಪಾಲ ಎಂ.ಎಸ್.ಮಹದೇವಸ್ವಾಮಿ ಮಾತನಾಡಿ, ಭಾಷ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಂದ ಐಚ್ಛಿಕ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಬಹಳಷ್ಟು ಭಿನ್ನತೆಯನ್ನು ಕಾಣಬಹುದು. ನೀವು ಹೊಸ ಪುಸ್ತಕಗಳ ಬಿಡುಗಡೆ ಸಂಗ್ರಹಿಸಿ ವಸ್ತು ವಿಷಯ ಆಲೋಚಿಸಿ ನೀವೇ ವಿಮರ್ಶೆ ಮಾಡಬೇಕು, ವಿದ್ಯಾರ್ಥಿಗಳ ದೆಸೆ ಇದ್ದಾಗಲೇ ಹಲವು ವಿಷಯ ಸಂಗ್ರಹ ಮಾಡಿಕೊಂಡಾಗ ಮಾತ್ರ ಜ್ಞಾನಾರ್ಜನೆ ಬೆಳೆಯುತ್ತದೆ ಎಂದು ಸಲಹೆ ನೀಡಿದರು.
ಭಾರತೀ ಸ್ನಾತಕೋತ್ತರ ಮತ್ತು ಸಂಶೋಧನೆ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನಾಗರಾಜ್ ಮಾತನಾಡಿದರು. ದ್ವಿತೀಯ ಎಂ.ಎ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ನಂತರ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.ಇದೇ ವೇಳೆ ಡಾ.ಎಚ್.ಎಂ.ನಾಗೇಶ ರಚಿಸಿರುವ ರಾಗೌ ಅವರ ಜಾನಪದ ಕೃತಿಗಳು, ಕ್ಷೇತ್ರ ಕಾರ್ಯ ಮತ್ತು ತಾತ್ವಿಕ ವಿಶ್ಲೇಷಣೆ ಕೃತಿಯನ್ನು ಬಿಡುಗಡೆ ಮಾಡಿದರು. ಪ್ರೊ.ಎಸ್ ನಾಗರಾಜ್, ಡಾ.ಎಚ್.ಎಂ.ನಾಗೇಶ, ಡಾ. ಸಿ.ಮರಯ್ಯ, ಡಾ.ಜಿ.ಎಂ.ಲಕ್ಷ್ಮಿ, ಡಿ.ಎಲ್.ಸರೀತಾ, ಹರೀಶ್ಕುಮಾರ್, ಗುರುಪ್ರಸಾದ್, ಬಿ.ಡಿ,ಮಹೇಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.