ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜಿಲ್ಲೆಯಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಲ್ಲಿ ಮೃತರ ಸಂಖ್ಯೆ 300ಕ್ಕೂ ಅಧಿಕ. ಅದರಲ್ಲಿ ಬೈಕ್ ಸವಾರರೇ ಹೆಚ್ಚು. ಇದರಿಂದ ಸಾವಿರಾರು ಕುಟುಂಬಗಳ ಕಣ್ಣೀರಲ್ಲಿ ಕೈತೊಳೆಯುತ್ತಿವೆ. ಇದೀಗ ರಸ್ತೆ ಅಪಘಾತ ನಿಯಂತ್ರಿಸಲು ಪೊಲೀಸರು ಹೆಲ್ಮೆಟ್ ಜಾಗೃತಿ ಕಾರ್ಯಕ್ರಮ ಕೈಗೊಂಡಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಮುಂಜಾನೆ 9 ರಿಂದ 11 ರವರೆಗೆ ಮತ್ತು ಸಂಜೆ 5 ರಿಂದ 7 ರವರೆಗೆ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.
ವೇಷಧಾರಿಗಳಿಂದ ರೂಪಕ ಪ್ರದರ್ಶನಚಿಕ್ಕಬಳ್ಳಾಪುರ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ಶುಕ್ರವಾರ ನಗರದ ಬಿಬಿ ರಸ್ತೆ, ಜ್ಯೂನಿಯರ್ ಕಾಲೇಜು ಮತ್ತು ಅಂಬೇಡ್ಕರ್ ವೃತ್ತಗಳಲ್ಲಿ ಯಮ, ಮತ್ತು ಚಿತ್ರಗುಪ್ತ ವೇಷಧಾರಿಗಳ ಮೂಲಕ ಬೈಕ್ ಸವಾರರಿಗೆ ಹೆಲ್ಮೆಟ್ ಜಾಗೃತಿ ಮೂಡಿಸಿದರು. ರಸ್ತೆಯಲ್ಲಿ ನಿಲ್ಲುವ ಯಮರಾಯ ವೇಷದಾರಿ ಸೋ.ಸು.ನಾಂಗ್ರೇಂದ್ರನಾಥ್ ಮತ್ತು ಚಿತ್ರಗುಪ್ತ ವೇಶದಾರಿ ಕಾಮಶೆಟ್ಟಿಹಳ್ಳಿಯ ಶ್ರೀನಿವಾಸ್ ಹೆಲ್ಮೆಟ್ ಇಲ್ಲದ ಬೈಕ್ ಸವಾರರ ಕೊರಳಿಗೆ ನೇಣುಹಾಕಿ ಕರೆದೊಯ್ಯುವ ರೂಪಕದ ಮೂಲಕ ಹೆಲ್ಮೆಟ್ ಜಾಗೃತಿ ಮೂಡಿಸುತ್ತಿದ್ದಾರೆ.ಈ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಇನ್ಸ್ಪೆಕ್ಟರ್ ಮಂಜುನಾಥ್, ಸಂಚಾರಿ ಪೋಲಿಸ್ ಠಾಣೆಯ ಪಿಎಸ್ಐ ಎಸ್.ಆರ್. ಮಂಜುಳಾ, ಪಿಎಸ್ಐಗಳಾದ ಅಮರ್ ಮೊಗಳೆ, ಹರೀಶ್ ಮತ್ತು ಇತರೆ ಸಿಬ್ಬಂದಿ ಇದ್ದರು.