ನವಲಿಯಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

KannadaprabhaNewsNetwork |  
Published : Jul 25, 2024, 01:16 AM IST
೨೪ಕೆಎನ್‌ಕೆ-೧                                                                             ಕನಕಗಿರಿ ತಾಲೂಕಿನ ನವಲಿಯಲ್ಲಿ ಪತ್ತೆಯಾಗಿರುವ ವಿಜಯನಗರ ಅರಸರ ಕಾಲದ ಶಾಸನ.  | Kannada Prabha

ಸಾರಾಂಶ

ತಾಲೂಕಿನ ನವಲಿ ಗ್ರಾಮದ ಪುರಾತನ ಕಪಿಲೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾದಾಗ ವಿಜಯನಗರ ಅರಸರ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದೆ.

ಕಪಿಲೇಶ್ವರ ದೇವಸ್ಥಾನ ಜೀರ್ಣೋದ್ಧಾರದ ವೇಳೆ ಸಿಕ್ಕ ಶಾಸನ

೨೦ ಇಂಚು ಅಗಲ, ೪೮ ಇಂಚು ಉದ್ದ, ೧೬ ಸಾಲುಗಳನ್ನು ಒಳಗೊಂಡ ಶಾಸನ

ಎಂ. ಪ್ರಹ್ಲಾದ್

ಕನ್ನಡಪ್ರಭ ವಾರ್ತೆ ಕನಕಗಿರಿ

ತಾಲೂಕಿನ ನವಲಿ ಗ್ರಾಮದ ಪುರಾತನ ಕಪಿಲೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾದಾಗ ವಿಜಯನಗರ ಅರಸರ ಕಾಲದ ಶಿಲಾ ಶಾಸನವೊಂದು ಪತ್ತೆಯಾಗಿದೆ.

ಗ್ರಾಮದ ಮಧ್ಯ ಭಾಗದಲ್ಲಿರುವ ಈ ದೇವಸ್ಥಾನ ಹಲವು ವರ್ಷಗಳಿಂದ ಪಾಳು ಬಿದ್ದಿದ್ದರಿಂದ ಇಲ್ಲಿ ಯಾರೂ ಹೋಗುತ್ತಿರಲಿಲ್ಲ. ಇದೀಗ ಮುಸ್ಲಿಂ ಕುಟುಂಬವೊದು ಜೀರ್ಣೋದ್ಧಾರಕ್ಕೆ ಮುಂದಾದ ವೇಳೆ ಕಪ್ಪು ಶಿಲಾ ಶಾಸನ ಪತ್ತೆಯಾಗಿದೆ. ೨೦ ಇಂಚು ಅಗಲ, ೪೮ ಇಂಚು ಉದ್ದದ ವಿನ್ಯಾಸವನ್ನು ಹೊಂದಿದೆ. ೧೬ ಸಾಲುಗಳನ್ನು ಒಳಗೊಂಡಿರುವ ಈ ಶಾಸನ ಕನ್ನಡ ಭಾಷೆಯಲ್ಲಿದೆ.

ಈ ಶಾಸನದಲ್ಲಿ ವಿಜಯನಗರ ಕಾಲದ ವೀರಣ್ಣವೊಡೆಯ ಹಾಗೂ ಅಮರನಾಯಕರಿಗೆ ತೆರಿಗೆಯಿಂದ ವಿನಾಯಿತಿ ನೀಡಿದ ಬಗ್ಗೆ ಉಲ್ಲೇಖವಿದೆ. ಶಾಸನದ ಕೊನೆಯಲ್ಲಿ ಶಾಪಶಯ ಭಾಗ ತುಂಬಾ ಅಶ್ಲೀಲವಾಗಿ ಕಂಡರಿಸಿರುವುದರ ಬಗ್ಗೆ ಮಾಹಿತಿ ಉಲ್ಲೇಖವೂ ಇದೆ. ಸಂಶೋಧನಾರ್ಥಿ ಡಿ. ವೀರೇಶ ಶಾಸನದ ಕುರಿತು ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ. ಸಂಶೋಧಕ ಶಶಿಕುಮಾರ ನಾಯ್ಕ್ ಶಾಸನದ ಪಾಠ ಅರ್ಥೈಸಿದರೆ, ಗ್ರಾಮದ ಶಿವಯ್ಯಸ್ವಾಮಿ, ಸಂಶೋಧಕ ಡಾ. ಯಮನೂರಪ್ಪ ನಂದಾಪೂರ, ಲಕ್ಷ್ಮಣ ಶಾಸ್ತ್ರಿ ವಡಕಿ ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ್ದಾರೆ.

ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯ ರಚನೆಗೆ ನೆರವಾಗುವ ಆಕರ ಸಾಮಗ್ರಿಗಳಲ್ಲಿ ಶಾಸನಗಳಿಗಿಂತ ಪ್ರಮುಖ ಸಾಧನ ಮತ್ತೊಂದಿಲ್ಲ. ಪ್ರಾಚೀನ ಕಾಲದ ಸಮೃದ್ಧ ಚಿತ್ರಣವನ್ನು ಕೊಡಲು ಶಾಸನಗಳಿಂದ ಮಾತ್ರ ಸಾಧ್ಯ. ಅವುಗಳ ಸಂಗ್ರಹ, ವಿಶ್ಲೇಷಣೆ, ಅಧ್ಯಯನಗಳಿಂದ ನಮ್ಮ ಇತಿಹಾಸವನ್ನು ಅರಿಯುವುದು ಸಾಧ್ಯವಾಗಿದೆ. ಈ ಶಾಸನ ವಿಜಯನಗರ ಮನೆತನದ ಮೇಲೆ ಮತ್ತಷ್ಟು ಬೆಳಕು ಚೆಲ್ಲಿದೆ ಎನ್ನುತ್ತಾರೆ ಕನ್ನಡ ವಿವಿಯ ಶಾಸನಶಾಸ್ತ್ರ ವಿಭಾಗದ ಡಾ. ಅಮರೇಶ ಯತಗಲ್.

ವಿಜಯನಗರ ಕಾಲದ ಪ್ರಾರಂಭದ ಶಾಸನದಲ್ಲಿ ಶಾಪಶಯ ಭಾಗದಲ್ಲಿ ಸೌಮ್ಯ ರಚನೆ ಇತ್ತು. ನಂತರದ ಕಾಲದಲ್ಲಿ ಅಶ್ಲೀಲ ಶಬ್ದಗಳ ಬಳಕೆ, ಪ್ರಾಣಿಗಳ ಗುಪ್ತಾಂಗ, ಸಂಭೋಗ ದೃಶ್ಯದ ಕೆತ್ತನೆಗಳು ನಡೆದಿದ್ದವು. ಇದು ಹೆಚ್ಚಾದಂತೆಲ್ಲ ಶಾಸನದ ಕುರಿತು ಗೌರವ ಕಡಿಮೆಯಾಯಿತು. ಆದರೆ ಶಾಸನಗಳನ್ನು ಅಪಹರಿಸುವ ಮತ್ತು ಹಾಳು ಮಾಡುವ ಕೃತ್ಯಗಳು ಹೆಚ್ಚಾದಂತೆ ಅವುಗಳ ರಕ್ಷಣೆಗೆ ಶಾಪಾಶಯವನ್ನು ಅಶ್ಲೀಲವಾಗಿ ಚಿತ್ರಿಸಲಾಗಿರಬಹುದು ಎಂದು ಹಂಪಿ ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಶಿವಮೂರ್ತಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ