ದಾವಣಗೆರೆ: ನೂರಾರು ವರ್ಷದಿಂದಲೂ ಜೀವನೋಪಾಯಕ್ಕೆ ಸಾಗುವಳಿ ಮಾಡಿಕೊಂಡು ಬಂದ ಭೂ ರಹಿತ ಬಗರ್ ಹುಕುಂ ಹಾಗೂ ಅರಣ್ಯ ಅವಲಂಭಿತ ರೈತರಿಗೆ ತಕ್ಷಣ ಸಾಗುವಳಿ ಚೀಟಿ, ಅರಣ್ಯ ಹಕ್ಕಿನ ಮಾನ್ಯತೆ ಪತ್ರ ನೀಡುವಂತೆ ಅರಣ್ಯ ಹಕ್ಕು ಸಮಿತಿ ಜಿಲ್ಲಾಧ್ಯಕ್ಷ ಆರ್.ಮಂಜುನಾಥ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ಮತ್ತು ಅರಣ್ಯ ಅವಲಂಭಿತ ರೈತರಿಗೆ ಅರಣ್ಯ ಹಕ್ಕಿನ ಮಾನ್ಯತೆ ಪತ್ರ ನೀಡುವಂತೆ ಜಿಲ್ಲಾ ಭೂ ಹಕ್ಕುದಾರರ ವೇದಿಕೆ, ಶಾಸಕರು, ತಹಸೀಲ್ದಾರರು, ಜಿಲ್ಲಾ ಮಟ್ಟದ ಅರಣ್ಯ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ದಾವಣಗೆರೆ ಜಿಲ್ಲೆಯಲ್ಲೇ ಸಾವಿರಾರು ಬಗರ್ ಹುಕುಂ ಹಾಗೂ ಅರಣ್ಯ ಅವಲಂಭಿತ ರೈತರು, ಸಾಗುವಳಿ ಚೀಟಿ ಹಾಗೂ ಅರಣ್ಯ ಹಕ್ಕಿನ ಮಾನ್ಯತೆ ಪತ್ರಕ್ಕಾಗಿ ಚಾತಕ ಪಕ್ಷಿಯಂತೆ ನೂರಾರು ವರ್ಷದಿಂದ ಕಾಯುತ್ತಿದ್ದಾರೆ. ಶಾಸಕರು, ಸಂಸದರು ಸಾಗುವಳಿ ಚೀಟಿ, ಅರಣ್ಯ ಹಕ್ಕಿನ ಮಾನ್ಯತೆ ಪತ್ರ ಕೊಡಿಸುವ ಮೂಲಕ ಭೂ ರಹಿತರ ಬಗ್ಗೆ ತಮ್ಮ ಇಚ್ಛಾ ಶಕ್ತಿ, ಬದ್ಧತೆ ತೋರಿಸಬೇಕು ಎಂದರು. ವೇದಿಕೆ ರಾಜ್ಯ ಸಂಚಾಲಕ ಕೆ.ಬಿ.ರೂಪಾನಾಯ್ಕ ಮಾತನಾಡಿ, ಗ್ರಾಮೀಣರ ಪ್ರಥಮ ಅಗತ್ಯತೆಯೇ ಜಮೀನು ಆಗಿದೆ. ಅದು ಉತ್ಪಾದನೆಯ ಏಕೈಕ ಮಾರ್ಗವೂ ಆಗಿದೆ. ಭೂಮಿ ಮೇಲಿನ ಹಕ್ಕು ಅಂತಹವರಿಗೆ ಸಂವಿಧಾನಾತ್ಮಕ ಹಕ್ಕು ಆಗಿದೆ. ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲೂಕುಗಳ ಸುಮಾರು 39 ಗ್ರಾಮಗಳ ರೈತರು ಸ್ಥಳೀಯ ಶಾಸಕರು, ತಹಸೀಲ್ದಾರರು, ಉಪ ವಿಭಾಗ ಮಟ್ಟದ ಅರಣ್ಯ ಸಮಿತಿ ಅಧ್ಯಕ್ಷರಾದ ಉಪ ವಿಭಾಗಾಧಿಕಾರಿಗಳು, ಜಿಲ್ಲಾ ಮಟ್ಟದ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳಿಗೆ 9 ನಿರ್ಧಿಷ್ಟ ಬೇಡಿಕೆಯ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.ಬಗರ್ ಹುಕುಂ ಸಮಿತಿ ತಕ್ಷಣವೇ ಪುನಾರಚನೆಗೊಂಡು, ಅದರ ಅಧ್ಯಕ್ಷರಾದ ಶಾಸಕರು ನಿಯಮಿತವಾಗಿ ಸಭೆ ಕರೆದು, ಅರ್ಹ ಫಲಾನುಭವಿಗಳಿಗೆ ಜಮೀನು ಮಂಜೂರು ಮಾಡಬೇಕು. 1991-92, 1998-99 ಹಾಗೂ 2018-19ನೇ ಸಾಲಿನಲ್ಲಿ ಸಾಗುವಳಿ ಸಕ್ರಮೀಕರಣಕ್ಕಾಗಿ ಸಲ್ಲಿಸಿದ ತಿರಸ್ಕೃತಗೊಂಡ ಅರ್ಜಿಗಳನ್ನು ಮರು ಪರಿಶೀಲಿಸಿ, ಸಾಗುವಳಿ ಚೀಟಿ ವಿತರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಭೂ ಹಕ್ಕುದಾರರ ವೇದಿಕೆ ಅಧ್ಯಕ್ಷ ಷಣ್ಮುಖನಾಯ್ಕ, ಅರಣ್ಯ ಹಕ್ಕು ಸಮಿತಿ ಅಧ್ಯಕ್ಷ ಈಶ್ವರಪ್ಪ, ಕಾರ್ಯಕಾರಿ ಸದಸ್ಯ ಜಿತೇಂದ್ರ ಇದ್ದರು.ಚನ್ನಗಿರಿ ತಾಲ್ಲೂಕಿನಲ್ಲಿ ಭೂಮಿ ಹಕ್ಕು ಪತ್ರ ನೀಡಲು, ಗ್ರಾಪಂಗಳ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿ, ಮುಖ್ಯಮಂತ್ರಿಗಳಿಗೆ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ಡಿ.4, 5 ಹಾಗೂ 6ರಂದು ವೇದಿಕೆಯ ಮೂಲಕ ಹೋರಾಟ ಹಮ್ಮಿಕೊಂಡಿದ್ದೇವೆ. ಕೆ.ರೂಪಾ ನಾಯ್ಕರಾಜ್ಯ ಸಂಚಾಲಕ, ಜಿಲ್ಲಾ ಭೂ ಹಕ್ಕುದಾರರ ವೇದಿಕೆ