ಮಗನನ್ನು ಹೆತ್ತವರ ಮಡಿಲು ಸೇರಿಸಿದ ಪೊಲೀಸರು!

KannadaprabhaNewsNetwork |  
Published : Nov 26, 2024, 12:45 AM IST
ಖಾನಾಪುರ | Kannada Prabha

ಸಾರಾಂಶ

ಛತ್ತೀಸಗಡದ ಪಲಾರಿ ಜಿಲ್ಲೆಯ ದಾಮ್ಮಿ ಗ್ರಾಮದ ತನ್ನ ಹೆತ್ತವರಿಂದ ಕ್ಷುಲ್ಲಕ ಕಾರಣಕ್ಕಾಗಿ ದೂರವಾಗಿ ದಾರಿಯಲ್ಲಿ ಸಿಕ್ಕ, ಸಿಕ್ಕ ರೈಲನ್ನೇರಿ ಖಾನಾಪುರಕ್ಕೆ ಬಂದಿಳಿದು ಅಲ್ಲಿ, ಇಲ್ಲಿ ಅಲೆಯುತ್ತಿದ್ದ 10 ವರ್ಷದ ಬಾಲಕನನ್ನು ಖಾನಾಪುರ ಪೊಲೀಸರು ರಕ್ಷಣೆ ಮಾಡಿ ಹೆತ್ತರ ಮಡಿಲು ಸೇರಿಸಿದ್ದಾರೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಬಾಲಕನ ಹೆತ್ತವರನ್ನು ಸಂಪರ್ಕಿಸಿ ಅವರಿಗೆ ಬಾಲಕನನ್ನು ಸುರಕ್ಷಿತವಾಗಿ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಖಾನಾಪುರ

ಛತ್ತೀಸಗಡದ ಪಲಾರಿ ಜಿಲ್ಲೆಯ ದಾಮ್ಮಿ ಗ್ರಾಮದ ತನ್ನ ಹೆತ್ತವರಿಂದ ಕ್ಷುಲ್ಲಕ ಕಾರಣಕ್ಕಾಗಿ ದೂರವಾಗಿ ದಾರಿಯಲ್ಲಿ ಸಿಕ್ಕ, ಸಿಕ್ಕ ರೈಲನ್ನೇರಿ ಖಾನಾಪುರಕ್ಕೆ ಬಂದಿಳಿದು ಅಲ್ಲಿ, ಇಲ್ಲಿ ಅಲೆಯುತ್ತಿದ್ದ 10 ವರ್ಷದ ಬಾಲಕನನ್ನು ಖಾನಾಪುರ ಪೊಲೀಸರು ರಕ್ಷಣೆ ಮಾಡಿ ಹೆತ್ತರ ಮಡಿಲು ಸೇರಿಸಿದ್ದಾರೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಬಾಲಕನ ಹೆತ್ತವರನ್ನು ಸಂಪರ್ಕಿಸಿ ಅವರಿಗೆ ಬಾಲಕನನ್ನು ಸುರಕ್ಷಿತವಾಗಿ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಆಗಿದ್ದೇನು?:

ಶನಿವಾರ ರಾತ್ರಿ ಪೊಲೀಸ್ ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿದ ನಾಗರಿಕರೊಬ್ಬರು ಅಪರಿಚಿತ ಬಾಲಕನೊಬ್ಬ ಏಕಾಂಗಿಯಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿರುವ ಮಾಹಿತಿಯನ್ನು ಖಾನಾಪುರ ಪೊಲೀಸರಿಗೆ ನೀಡಿದ್ದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ಖಾನಾಪುರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಪೊಲೀಸರು ಕೇಳಿದ ಪ್ರಶ್ನೆಗಳು ಬಾಲಕನಿಗೆ ಅರ್ಥವಾಗಲಿಲ್ಲ. ಬಾಲಕನ ಮಾತುಗಳು ಪೊಲೀಸರಿಗೆ ತಿಳಿಯಲಿಲ್ಲ. ಆದರೆ, ಹಲವು ಸಮಯದ ತನಿಖೆ ಬಳಿಕ ಆತನ ಹೆಸರು ವಿಕ್ರಮ ಮತ್ತು ಆತನ ಊರು ದಾಮ್ಮಿ ಎಂದಷ್ಟೇ ಮಾಹಿತಿ ಸಿಕ್ಕಿತ್ತು. ಬಾಲಕನ ಭಾಷೆ ಅರಿಯದೇ ಸಂವಹನ ಸಮಸ್ಯೆ ಎದುರಿಸುತ್ತಿದ್ದ ಪೊಲೀಸರು ಕೊನೆಗೆ ಆತನಿಗೆ ಗೂಗಲ್ ಮ್ಯಾಪ್ ಮೂಲಕ ದಾಮ್ಮಿ ಎಂಬ ಹೆಸರಿನ ವಿವಿಧ ಊರುಗಳನ್ನು ತೋರಿಸಿದಾಗ ಛತ್ತೀಸಗಡ ರಾಜ್ಯದಲ್ಲಿರುವ ಊರೇ ನನ್ನೂರು ಎಂದು ಗುರುತು ಹಿಡಿಯುತ್ತಾನೆ. ಮ್ಯಾಪ್‌ನಲ್ಲಿ ಆತನ ಊರಿನ ಬೀದಿಗಳನ್ನು ಪರಿಚಯಿಸಿದಾಗ ಆತನ ತಂದೆಯ ಪರಿಚಯದ ಪಂಚರ್ ಅಂಗಡಿ ಒಂದನ್ನು ಗುರುತಿಸುತ್ತಾನೆ. ಆ ಅಂಗಡಿಯ ನಾಮಫಲಕದಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಪೊಲೀಸರು ಬಾಲಕನ ಜೊತೆ ಅಂಗಡಿಯವನನ್ನು ಆತನ ಭಾಷೆಯಲ್ಲಿ ಮಾತನಾಡಿಸುತ್ತಾರೆ. ಅಂಗಡಿಯವನಿಂದ ಬಾಲಕನ ತಂದೆಯ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ. ತನ್ನ ಮಗ ಕರ್ನಾಟಕದ ಖಾನಾಪುರ ಪೊಲೀಸ್ ಠಾಣೆಯಲ್ಲಿರುವ ವಿಷಯವನ್ನು ಪೊಲೀಸರಿಂದ ಅರಿತ ಬಾಲಕನ ತಂದೆ ಕನ್ಹಯ್ಯಾ ಚವಾಣ ಸೋಮವಾರ ಛತ್ತೀಸಗಡದಿಂದ ಖಾನಾಪುರ ಠಾಣೆಗೆ ಬಂದು ಮಗನನ್ನು ಪೊಲೀಸರಿಂದ ಪಡೆದು ತಮ್ಮೂರಿಗೆ ಕರೆದುಕೊಂಡು ಹೋಗಿದ್ದಾನೆ. ತಂದೆ-ಮಗನ ಮಿಲನಕ್ಕೆ ಖಾನಾಪುರ ಠಾಣೆಯ ಪಿಐ ಮಂಜುನಾಥ ನಾಯ್ಕ, ಜಗದೀಶ ಹುಬ್ಬಳ್ಳಿ, ಗಿರೀಶ.ಎಂ, ಜಯರಾಮ ಹಮ್ಮಣ್ಣವರ, ಗುರುರಾಜ ತಮದಡ್ಡಿ, ಕುತುಬುದ್ದೀನ್‌ ಸನದಿ ಸೇರಿದಂತೆ ಖಾನಾಪುರ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಕ್ಷಿಯಾಗಿದ್ದಾರೆ.

ಖಾನಾಪುರದ ರಸ್ತೆಗಳಲ್ಲಿ ಅಲೆಯುತ್ತಿದ್ದ ಛತ್ತೀಸಗಡ ಮೂಲದ ಬಾಲಕ ವಿಕ್ರಮನನ್ನು ನಮ್ಮ ಪೊಲೀಸರು ಠಾಣೆಗೆ ಕರೆತಂದು ಆತನ ವಿಚಾರಣೆ ಮಾಡಿದ್ದಾರೆ. ಆತನ ಭಾವನೆಗಳನ್ನು ಅರಿತು ತಂತ್ರಜ್ಞಾನದ ಸಹಾಯದಿಂದ ಆತನ ಹೆತ್ತವರನ್ನು ಸಂಪರ್ಕಿಸಿದ್ದಾರೆ. ವಿಕ್ರಮ ತಂದೆ-ತಾಯಿಯನ್ನು ಠಾಣೆಗೆ ಕರೆಯಿಸಿ ಅವರಿಗೆ ವಿಕ್ರಮನನ್ನು ಒಪ್ಪಿಸಲಾಗಿದೆ.

-ಮಂಜುನಾಥ ನಾಯ್ಕ,

ಪೊಲೀಸ್ ಇನ್ಸಪೆಕ್ಟರ್, ಖಾನಾಪುರ ಠಾಣೆ.

ನನ್ನ ಮಗ ಕೆಲ ದಿನಗಳಿಂದ ನಾಪತ್ತೆಯಾಗಿದ್ದ. ಆತನನ್ನು ನಾವು ಹುಡುಕುತ್ತಿದ್ದೆವು. ನಮ್ಮೂರಿನಿಂದ ರೈಲು ಹತ್ತಿ ಬಂದಿದ್ದ ಆತ ಖಾನಾಪುರ ಠಾಣೆಯಲ್ಲಿ ರೈಲು ಇಳಿದು ಮುಂದೇನು ಮಾಡಬೇಕು ಎಂಬುವುದನ್ನು ಅರಿಯದೇ ಊರಿನಲ್ಲಿ ಸುತ್ತಾಡುತ್ತಿದ್ದ. ಪೊಲೀಸರ ಸಹಕಾರದಿಂದ ನನಗೆ ನನ್ನ ಮಗ ಸಿಕ್ಕಿದ್ದು, ಖಾನಾಪುರ ಪೊಲೀಸರಿಗೆ ಧನ್ಯವಾದ ಅರ್ಪಿಸುತ್ತೇನೆ.

-ಕನ್ಹಯ್ಯಾ ಚವಾಣ,
ವಿಕ್ರಮ ತಂದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಚ್ಛೆಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ
ಕೆಎಲ್‌ಇಗೆ ಅಮಿತ ಕೋರೆ ನೂತನ ಕಾರ್ಯಾಧ್ಯಕ್ಷ