ಹೊಸಪೇಟೆ: ಹರಪನಹಳ್ಳಿ ತಾಲೂಕು ತೌಡೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಸದಸ್ಯರು ಹಾಗೂ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನಿಂದ ರೈತರಿಗೆ ನೋಟಿಸ್ ನೀಡಲಾಗುತ್ತಿದೆ. ರೈತರ ಪಹಣಿಗಳಲ್ಲಿ ಸಾಲ ಪಡೆಯಲಾಗಿದೆ. ಈಗ ರೈತರು ಕಂಗಾಲಾಗಿದ್ದಾರೆ. ರೈತರಿಗೆ ಮೋಸ ಮಾಡಿ ಪರಾರಿಯಾದ ಪರಮೇಶಪ್ಪ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನಿಂಗಮ್ಮ ತೌಡೂರು ಎಂಬ ಕೃಷಿ ಮಹಿಳೆ 2019ರ ಅಕ್ಟೋಬರ್ ಮೃತಪಟ್ಟಿದ್ದಾರೆ. 2020-21ನೇ ಸಾಲಿನಲ್ಲಿ ಅವರು ಮರಣ ಹೊಂದಿದ ನಂತರ ಸಾಲ ಮಂಜೂರು ಮಾಡಲಾಗಿದೆ. ರೈತ ಬಸವರಾಜಗೌಡರ ಜಮೀನಿನ ಪಹಣಿ ಪಡೆದು, ಅವರ ಹೆಸರಿನಲ್ಲಿ ಸಾಲ ಪಡೆದಿದ್ದಾರೆ. ಇನ್ನೂ ಮಹಿಳಾ ಸಂಘಗಳ ಸದಸ್ಯೆಯರ ಉಳಿತಾಯ ಹಣ ಕಟ್ಟಿಸಿಕೊಳ್ಳಲಾಗಿದೆ. ಅವರು ಈಗ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರು ಹಾಗೂ ಮಹಿಳಾ ಸಂಘದ ಸದಸ್ಯೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.ರೈತರಿಗೆ ಸಾಲದ ಹಣ ನೀಡದೇ ವಂಚನೆ ಮಾಡಿದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಮುಖ್ಯ ಕಾರ್ಯನಿರ್ವಣಾಧಿಕಾರಿ ಪರಮೇಶ್ವರಪ್ಪ ಅವರನ್ನು ಬಂಧಿಸಿ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ರೈತರ ಸಾಲದ ಹಣ, ಮಹಿಳಾ ಸ್ವಸಹಾಯ ಸಂಘದ ಉಳಿತಾಯದ ಹಣ, ಸಣ್ಣ ವ್ಯಾಪಾರಸ್ಥರ ಠೇವಣಿ ಹಣ ಮತ್ತು ಬಾಂಡ್ ಹಣವನ್ನು ವಾಪಸ್ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಗುಡಿಹಳ್ಳಿ ಹಾಲೇಶ, ಪಿ. ಸಿದ್ದನಗೌಡ, ಶಂಭುಲಿಂಗನಗೌಡ, ಎಂ. ಹೆಗ್ಗಪ್ಪ ವೈ. ಕೊಟ್ರೇಶ್, ಆನಂದಗೌಡ್ರು, ಎಂ. ಮೈಲಪ್ಪ, ಚೌಡಪ್ಪ, ಎಸ್. ನಾಗರಾಜ, ಎ.ಎಂ. ಶಿವಯೋಗಯ್ಯ, ಬಿ. ಕೊಟ್ರೇಶ್, ಟಿ. ಪ್ರಕಾಶ್, ಪಿ. ಆನಂದಗೌಡ, ಎಂ. ಬಸವರಾಜಗೌಡ, ಟಿ.ಎಸ್. ನಾಗಭೂಷಣ, ಟಿ.ಎಂ. ನಾಗಭೂಷಣ, ಕೆ. ವಾಗೀಶ. ಟಿ.ಎಸ್. ವಾಗೀಶ, ಎ. ನಾಗರಾಜ, ಎಂ. ಮಂಜಪ್ಪ, ಎಸ್. ಮಂಜುನಾಥ, ವೆಂಕಟೇಶ ನಾಯ್ಕ, ಮರಿಯಪ್ಪ, ಡಿ.ಕೆ. ಆನಂದ ಮತ್ತಿತರರಿದ್ದರು.