ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಜನರಲ್ ಮೆನೇಜರ್ ಮುಕುಲ್ ಶರಣ್ ಮಥುರ್ ಪರಿಶೀಲನಾ ವಿಶೇಷ ರೈಲಿನ ಮೂಲಕ ಮಂಗಳವಾರ ಅಪರಾಹ್ನ 12ರ ವೇಳೆಗೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ರೈಲಿನಿಂದ ಇಳಿದ ಅವರು ಎರಡನೇ ಪ್ಲಾಟ್ ಫಾರ್ಮ್ ನಲ್ಲಿ ಸ್ವಲ್ಪ ಹೊತ್ತು ಪರಿಶೀಲನೆ ನಡೆಸಿದರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ರೈಲು ನಿಲ್ದಾಣದಿಂದ ಇಲಾಖಾ ವಾಹನದಲ್ಲಿ ಕೆಲ ಅಧಿಕಾರಿಗಳ ಜೊತೆ ಹೊರಗೆ ತೆರಳಿದರು.
ಬಳಿಕ ಸುಮಾರು ಗಂಟೆ 1.15ರ ವೇಳೆಗೆ ಮತ್ತೆ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಆಗಮಿಸಿ ರೈಲು ನಿಲ್ದಾಣದ ಪಾರ್ಕಿಂಗ್ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳಿಂದ ಕೆಲ ಮಾಹಿತಿ ಪಡೆದರು. ಬಳಿಕ ಅವರು ಅಧಿಕಾರಿಗಳ ಜೊತೆಗೆ ಪಾದಚಾರಿ ಮೇಲ್ಸೇತುವೆ ಮೂಲಕ ಎರಡನೇ ಪ್ಲಾಟ್ ಫಾರಂಗೆ ತೆರಳಿ ತಾವು ಆಗಮಿಸಿದ್ದ ರೈಲಿನ ಒಳಗೆ ಹೋಗಿದ್ದಾರೆ. ಬಳಿಕ ರೈಲಿನಲ್ಲೇ ವಿವಿಧ ಅಧಿಕಾರಿಗಳ ಜೊತೆಗಿದ್ದರು. ಅಪರಾಹ್ನ ಸುಮಾರು 2.30ರ ವೇಳೆ ರೈಲು ಸಕಲೇಶಪುರ ಕಡೆಗೆ ತೆರಳಿದೆ.ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದ ಜನರಲ್ ಮೆನೇಜರ್ ಅವರಲ್ಲಿ ಮಾಧ್ಯಮದವರು ಪ್ರತಿಕ್ರಿಯೆಗಾಗಿ ಮಾತನಾಡಿಸಿದ ವೇಳೆ, ನಾನು ಹೊಸದಾಗಿ ಬಂದಿದ್ದೇನೆ. ಕಾಮಗಾರಿ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡುತ್ತೇನೆ ಎಂದಿದ್ದರು.
ಸಾರ್ವಜನಿಕರ ಅಸಮಾಧಾನ;
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿರು.
ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಅಭಿವೃದ್ಧಿ ಕೆಲಸಗಳು ನಿಧಾನವಾಗಿ, ಅವ್ಯವಸ್ಥಿತವಾಗಿ ನಡೆಯುತ್ತಿದ್ದು, ಅಧಿಕಾರಿಗಳು ಭೇಟಿ ನೀಡುವ ಹಿಂದಿನ ದಿನ ಕಾಮಗಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸ ಇಲ್ಲಿ ನಡೆಯುತ್ತಿದೆ. ಉನ್ನತ ಅಧಿಕಾರಿಗಳು ಬಂದರೂ ಅವರು ಸಮರ್ಪಕವಾಗಿ ಕಾಮಗಾರಿ ಪರಿಶೀಲನೆ ನಡೆಸದೆ, ಸಾರ್ವಜನಿಕರ ಅಹವಾಲು ಆಲಿಸದೇ ತೆರಳುತ್ತಿರುವುದು ಬೇಸರದ ಸಂಗತಿ ಎಂದು ಸಾರ್ವಜನಿಕರು ತಿಳಿಸಿದ್ದಾರೆ.