ಗದಗ: ಕಲಿಯುಗದ ಕಾಮಧೇನು ಕಲ್ಪವೃಕ್ಷರೆಂದು ಖ್ಯಾತಿ ಪಡೆದ ರಾಘವೇಂದ್ರ ರಾಯರ ಮೃತ್ತಿಕಾ ಬೃಂದಾವನದ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಮೇ 29ರಿಂದ 3 ದಿನಗಳ ಕಾಲ ಗದಗ ನಗರದ ಕಳಸಾಪುರ ರಸ್ತೆಯಲ್ಲಿನ ಶಾಖಾ ಮಠದಲ್ಲಿ ನೆರವೇರಲಿವೆ ಎಂದು ಮಾಜಿ ಶಾಸಕ ಹಾಗೂ ಕಟ್ಟಡ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.
ಮೇ 29ರಂದು ಬೆಳಗ್ಗೆ 8ರಿಂದ ಸಂಜೆ 5.30ರ ವರೆಗೆ ಪ್ರಾರ್ಥನೆ, ಕಲಶ ಸ್ಥಾಪನೆ, ಹೋಮ, ಪೂರ್ಣಾಹುತಿ, ಮಂದಿರ ಪ್ರವೇಶ. ಮೇ 30ರಂದು ಬೆಳಗ್ಗೆ 8ಕ್ಕೆ ಪ್ರತಿಷ್ಠಾಲಿಂಗ ಕಲಶ ಸ್ಥಾಪನೆ, ಮುಖ್ಯ ಪ್ರಾಣದೇವರ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರಗಳ ಜಪ ಪಾರಾಯಣ, ಹೋಮ, ಕಲಶಗಳ ಅಭಿಷೇಕ ಫಲ ಸಮರ್ಪಣೆ ಮಂಗಳಾರತಿ ನಡೆಯಲಿದೆ. 10ಕ್ಕೆ ಭೂ, ರಜತ ರಥ, ಪಲ್ಲಕ್ಕಿ, ಪೂಜಾ ಸಾಮಗ್ರಿ, ಹಸ್ತೋದಕ ಸಾಮಗ್ರಿ, ಪ್ರಸಾದ ದಿನಸಿ ಹಾಗೂ ಇತರೆ ದಾನಿಗಳಿಂದ ಸಂಕಲ್ಪ, ಸಂಜೆ 4.30ಕ್ಕೆ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರನ್ನು ಗದಗ ನಗರದ ಕುಷ್ಟಗಿ ಚಾಳದಿಂದ ಕಳಸಾಪುರ ಗ್ರಾಮದ ವರೆಗೆ ಬೈಕ್ ರ್ಯಾಲಿ ಮೂಲಕ ಕರೆತರಲಾಗುವುದು, ಸಂಜೆ 5ಕ್ಕೆ ಕಳಸಾಪುರ ಗ್ರಾಮದಿಂದ ಭವ್ಯ ಶೋಭಾಯಾತ್ರೆ ಮೂಲಕ ಶ್ರೀಗಳನ್ನು ಶ್ರೀಮಠಕ್ಕೆ ಕರೆತರಲಾಗುವುದು. ಅದೇ ದಿನ ಸಂಜೆ 7ಕ್ಕೆ ದತ್ತಾವಧೂತ ಶ್ರೀಗಳ ಸಾನ್ನಿಧ್ಯದಲ್ಲಿ ಸ್ವಾಗತ ಸಮಾರಂಭ ನಡೆಯಲಿದೆ. ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಧಾರವಾಡ ಪೇಢಾದ ತುಲಾಭಾರ ನೆರವೇರಲಿದೆ ಎಂದರು.
ಮೇ 31ರಂದು ಬೆಳಗ್ಗೆ 8ಕ್ಕೆ ಸಾಮೂಹಿಕ ಪಾದಪೂಜೆ, ಮುದ್ರಾಧಾರಣೆ, ಮಂತ್ರಾಕ್ಷತೆ ಪ್ರದಾನ, 10ಕ್ಕೆ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಂದ ಕಳಸಗಳಿಗಗೆ ಪಂಚೋಪಚಾರ ಪೂಜೆ, ಪ್ರತಿಮೆಗಳಿಗೆ ಹಾಗೂ ಬೃಂದಾವನಕ್ಕೆ ಕಲಶಾಭಿಷೇಕ, ಸಾಲಿಗ್ರಾಮ ಸ್ಥಾಪನೆ, ಮಹಾಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5ಕ್ಕೆ ಗುರುವಂದನಾ ಕಾರ್ಯಕ್ರಮ ನಡೆಯಲಿದ್ದು, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ .ಕೆ. ಪಾಟೀಲ, ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಬಸವರಾಜ ಬೊಮ್ಮಾಯಿ ಭಾಗಿಯಾಗಲಿದ್ದಾರೆ. ಈ ಮೂರು ದಿನದ ಕಾರ್ಯಕ್ರಮಕ್ಕೆ ಗೋಪಾಲ ಅಗರವಾಲ ಅವರು ಪ್ರಸಾದ ಸೇವೆಯ ಮಾಡಿದ್ದಾರೆ ಎಂದರು.ತಾಲೂಕಿನ ಕಿರಟಗೇರಿ ಗುರುರಾಯರು ಪವಾಡ ಮಾಡಿದ ಪುಣ್ಯ ತಾಣ. ಅದಕ್ಕೆ ಸಮೀಪದಲ್ಲಿರುವ ಕಳಸಾಪುರ ಗ್ರಾಮದಲ್ಲಿ ರಾಯರ ಶಾಖಾ ಮಠ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಕಿರಟಗೇರಿ, ಕಳಸಾಪುರ ಮತ್ತು ಗದಗ-ಬೆಟಗೇರಿಯಲ್ಲಿ ಮಂತ್ರಾಲಯ ಮಠದಿಂದ ಅನೇಕ ಧಾರ್ಮಿಕ, ಶೈಕ್ಷಣಿಕ ಕಾರ್ಯಗಳು ನೆರವೇರಲಿವೆ ಎಂದು ಡಿ.ಆರ್ . ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಕಾಲವಾಡ, ಜೆ.ಕೆ. ಜಮಾದಾರ, ಶರತ್ ಹುಯಿಲಗೋಳ, ಕಳಸಾಪುರ ಗ್ರಾಪಂ ಅಧ್ಯಕ್ಷೆ ಅನುಸೂಯಾ ಬಡಿಗೇರ, ಗುರಣ್ಣ ಹೆಬಸೂರ, ಮಲ್ಲಿಕಾರ್ಜುನ ಬೆಟದೂರ, ಮೋಹನ ಬೆಂಗಳೂರು, ಪ್ರವೀಣ ವಾರಕರ, ಪಕ್ಕಣ್ಣ ಬೇಲೇರಿ, ಪ್ರಕಾಶ ಬೇಲೆರಿ, ಪ್ರಕಾಶಸೆಟ್ಟಿ ರೇಷ್ಮಿ, ವೆಂಕಟೇಶ ಮುಂಡರಗಿ, ಚನ್ನಯ್ಯ ಹಿರೇಮಠ, ಮಾರುತಿ ಸುರೇಬಾನ, ಗೋಪಾಲ ಅಗರವಾಲ ಉಪಸ್ಥಿತರಿದ್ದರು.