ಗದಗ: ಸನ್ಯಾಸಿಗಳನ್ನು ನಮ್ಮ ಸಮಾಜ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತದೆ. ಈ ವಿಷಯದಲ್ಲಿ ನೂತನ ಸ್ವಾಮಿಗಳು ಗಮನ ಕೊಡಬೇಕು, ಆದರ್ಶ ಶ್ರೀಗಳಾಗಿ ಗದಗ ಪರಿಸರದಲ್ಲಿ ಭಕ್ತರಿಗೆ ಆಧ್ಯಾತ್ಮಿಕ ವ್ಯವಸ್ಥೆಯನ್ನು ಮತ್ತಷ್ಟು ಇಂಬುಗೊಳಿಸಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.ಅವರು ಮಂಗಳವಾರ ಗದಗ ನಗರದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ಶಿವಪ್ರಿಯಾನಂದ ಸ್ವಾಮಿಗಳವರು ಸನ್ಯಾಸ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಗದಗ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪುರಪ್ರವೇಶ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸನ್ಯಾಸ ಸ್ವೀಕಾರ ಮಾಡಿದ ನಂತರ ಮೊದಲ ಬಾರಿಗೆ ಗದಗ ನಗರಕ್ಕೆ ಆಗಮಿಸಿದ್ದೀರಿ, ನಿಮ್ಮ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ನೀವು ಎಚ್ಚರಿಕೆಯಿಂದ ನಿಮ್ಮ ಪ್ರಾರಂಭದ ದಿನಗಳನ್ನು ಕಳೆಯಬೇಕಿದೆ. ಪ್ರತಿ ಹಂತದಲ್ಲಿಯೂ ಜಾಗರೂಕರಾಗಿರಬೇಕು. ಗದಗ ಜಿಲ್ಲೆಯ ವ್ಯಾಪ್ತಿಯಲ್ಲಿ ಹಲವಾರು ಶ್ರೀಗಳು ಬಾಳಿ ಬದುಕಿದ್ದು ಈ ನೆಲವನ್ನು ಸಾಕಷ್ಟು ಶ್ರೀಮಂತಗೊಳಿಸಿದ್ದಾರೆ, ಅವರೆಲ್ಲಾ ನಿಮಗೆ ಮಾರ್ಗದರ್ಶಕರಾಗಿದ್ದಾರೆ. ನೀವು ಅಧ್ಯಾತ್ಮ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮತ್ತು ವಿದ್ವತ್ ಪೂರ್ಣವಾದ ಮಾತುಗಳ ಮೂಲಕ ಸಮಾಜದಲ್ಲಿನ ಜನರ ಮನಸ್ಸಿನಲ್ಲಿ ಬೆಳಕು ಚೆಲ್ಲಬೇಕು, ಆ ಮೂಲಕ ನೀವು ಕೂಡಾ ಬೆಳೆಯಬೇಕು. ನೀವು ಎಷ್ಟು ಎತ್ತರಕ್ಕೆ ಬೆಳೆಯುತ್ತೀರಿ ಅಷ್ಟು ಎತ್ತರಕ್ಕೆ ನಿಮ್ಮ ಗುರುಗಳನ್ನು ಬೆಳೆಸುತ್ತೀರಿ ಎಂದರು.
ಬ್ರಹ್ಮಚರ್ಯ ಆಚರಣೆ ಮಾಡವುದು ಅತ್ಯಂತ ಕಠಿಣದ ಮತ್ತು ಸವಾಲಿನ ಕೆಲಸವಾಗಿದೆ. ಅದನ್ನು ನೀವು ಪಾಲನೆ ಮಾಡಲು ಮುಂದಾಗಿರುವುದು ಒಂದು ಹೊಸ ಅಧ್ಯಾತ್ಮದ ಬೆಳಕನ್ನು ಈ ಭಾಗದ ಜನರು ಪಡೆದಂತಾಗಿದೆ. ಗದಗ ಭಾಗದಲ್ಲಿ ಆಧ್ಯಾತ್ಮಿಕ ಕ್ಷೇತ್ರ ಮತ್ತಷ್ಟು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗಲಿದೆ ಎಂದರು.ಸನ್ಯಾಸಿಗಳಾದವರು ಆಸ್ತಿ, ಅಂತಸ್ತು, ದೊಡ್ಡ ಮಠ ಹೀಗೆ ಯಾವುದರ ಬಗ್ಗೆಯೂ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಳ್ಳಬಾರದು. ಕೇವಲ ಧರ್ಮೋಪದೇಶ ಮಾಡಬೇಕು, ಆ ಮೂಲಕ ಸಮಾಜವನ್ನು ಶ್ರೀಮಂತಗೊಳಿಸಬೇಕು. ಆ ಕಾರ್ಯವನ್ನು ನೂತನ ಶ್ರೀಗಳು ಮುಂದುವರಿಸಿಕೊಂಡು ಹೋಗಲಿ ಎಂದು ಎಂದು ಆಶಯ ವ್ಯಕ್ತಪಡಿಸಿದರು.
ಗದಗ ಸೇವೆ ಅನನ್ಯ:ಸೇವಾ ಕ್ಷೇತ್ರದಲ್ಲಿ ವೀರೇಶ್ವರ ಪುಣ್ಯಾಶ್ರಮ ನಾಡಿನಲ್ಲಿ ಬಹು ದೊಡ್ಡ ಕೆಲಸ ಮಾಡಿದೆ, ಅದನ್ನು ಪ್ರತಿಯೊಬ್ಬರು ಗಮನಿಸಬೇಕು. ಇಂದು ಅಂಗವಿಕಲರು, ಕಣ್ಣಿಲ್ಲದವರ ಸೇವೆ ಮಾಡಲು ಸಾಕಷ್ಟು ಸಂಸ್ಥೆಗಳಿವೆ. ಸರ್ಕಾರ ಮುಂದೆ ಬರುತ್ತಿದೆ. ಆದರೆ ಈ ಹಿಂದೆ ಏನೂ ಇಲ್ಲದ ವೇಳೆಯಲ್ಲಿ, ಯಾವ ಕಾಲದಲ್ಲಿ ಕುರುಡರು ಎಂದರೆ ನಿರುಪಯುಕ್ತರು ಎನ್ನುವ ಭಾವನೆ ಇದ್ದ ಸಂದರ್ಭದಲ್ಲಿ ಗದುಗಿನ ವೀರೇಶ್ವರ ಪುಣ್ಯಾಶ್ರಮ ಅವರನ್ನು ಕರೆ ತಂದು ಸಾಕಿ ಸಲುಹಿ ಅವರಿಗೆ ಸಂಗೀತ ಶಿಕ್ಷಣ ನೀಡಿ ವೈಯಕ್ತಿಕ ಅವರ ಬದುಕು ಕಟ್ಟಿಕೊಟ್ಟಿದ್ದಲ್ಲದೇ ಅಂಧರನ್ನು ಕೂಡಾ ದೇಶದ ಶಕ್ತಿಯನ್ನಾಗಿ ರೂಪಿಸಿದ ಬಹುದೊಡ್ಡ ಮಾನವ ಸಂಪನ್ಮೂಲ ಅಭಿವೃದ್ಧಿ ಪಡಿಸಿದ ಕೇಂದ್ರ ಎಂದರೆ ಅದು ಗದುಗಿನ ವೀರೇಶ್ವರ ಪುಣ್ಯಾಶ್ರಮ. ಇದರೊಟ್ಟಿಗೆ ಸಾಹಿತ್ಯ, ಪುಸ್ತಕ ಪ್ರಕಾಶನದಲ್ಲಿ ತೋಂಟದಾರ್ಯ ಮಠವೂ ಮಾಡಿದ ಕಾರ್ಯವೂ ಕೂಡಾ ಅಷ್ಟೇ ಅನನ್ಯವಾದದ್ದು ಎಂದು ಸಚಿವ ಎಚ್.ಕೆ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರುಅಧ್ಯಕ್ಷತೆ ವಹಿಸಿದ್ದ ಬಿ.ಆರ್. ಯಾವಗಲ್ಲ ಮಾತನಾಡಿ, ರಚನಾತ್ಮಕ ಕೆಲಸದ ಮೂಲಕ ಗದಗ ಪರಿಸರದ ಹೊಸ ಆಧ್ಯಾತ್ಮಿಕ ಅನುಭಾವವನ್ನು ಬೆಳೆಸುವಲ್ಲಿ ಶ್ರೀಗಳು ಅಣಿಯಾಗಲಿ. ಸಾಮಾಜಿಕ ಕ್ಷೇತ್ರವಾಗಲಿ, ಧಾರ್ಮಿಕ ಕ್ಷೇತ್ರವಾಗಲಿ ಇಲ್ಲಿಯವರನ್ನು ಅದರಲ್ಲಿಯೂ ಸ್ವಾಮೀಜಿಗಳನ್ನು ನಮ್ಮ ಸಮಾಜ ಅತ್ಯಂತ ಪೂಜ್ಯನೀಯ ಭಾವನೆಯಿಂದ ಪೂಜಿಸುತ್ತದೆ, ಆರಾಧಿಸುತ್ತದೆ. ಅದಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ನಿಮ್ಮ ಸನ್ಯಾಸದ ಬದುಕು ಬಹಳಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಒಬ್ಬ ವ್ಯಕ್ತಿ ಸನ್ಯಾಸಿ ಆಗುವುದರಿಂದ ಸಮಾಜಕ್ಕೆ ಏನು ಉಪಯೋಗವಾಗುತ್ತದೆ ಎನ್ನುವುದರ ಬಗ್ಗೆ ಸಮಾಜ ತಿಳಿದುಕೊಳ್ಳಬೇಕು. ಅದರಿಂದ ಸಾಕಷ್ಟು ಅನುಕೂಲಗಳಿದ್ದು, ಸದ್ಯ ನಾವು ನೀವೆಲ್ಲಾ ಓದಿರುವ, ಓದುತ್ತಿರುವ ಇತಿಹಾಸ ಪಾಶ್ಚಾತ್ಯರು ಬರೆದಿರುವುದಾಗಿ, ಅವರು ಹೇಳುವ ಇತಿಹಾಸ ಮತ್ತು ವಿಜ್ಞಾನ ಪೂರ್ಣ ಸತ್ಯವಲ್ಲ, ಅಲ್ಲಿಂದಲೇ ನಮ್ಮ ಪತನ ಪ್ರಾರಂಭವಾಗಿದೆ. ನಾವು ತಪ್ಪು ತಪ್ಪು ಇತಿಹಾಸ ಓದುತ್ತಿದ್ದೇವೆ ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಹೇಳಿದರು.ಅಂಧ ಶ್ರದ್ಧೆಯಿಂದ ಜನರನ್ನು ದೂರ ಮಾಡಿ, ವಿವೇಕಾನಂದರ ತತ್ವ ಆದರ್ಶಗಳನ್ನು ಇಂದಿನ ಯುವಕರಿಗೆ ತಿಳಿಸುವ ಮೂಲಕ, ಸಮ ಸಮಾಜ ನಿರ್ಮಾಣ ಮಾಡುವಲ್ಲಿ, ನವ ಯುವಕರಿಗೆ ಮಾದರಿಯಾಗುವ ರೀತಿಯ ಸನ್ಯಾಸ ಜೀವನ ನಿಮ್ಮದಾಗಲಿ, ಸಮಾಜ ನಿಮ್ಮನ್ನು ಎಚ್ಚರಿಕೆ ಕಣ್ಣಿನಿಂದ ನೋಡುತ್ತದೆ ಎನ್ನುವ ಎಚ್ಚರಿಕೆಯ ಬದುಕು ನಿಮ್ಮದಾಗಲಿ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.ಸನ್ಯಾಸಿ ಮೇಲೆ ಸರ್ವರ ಕಣ್ಣು ಎನ್ನುವ ಗಾದೆ ಮಾತು ಗ್ರಾಮೀಣ ಭಾಗದಲ್ಲಿ ಇಂದಿಗೂ ಇದೆ, ಕಾವಿ ಹಾಕಿದವರೆಲ್ಲಾ ಸನ್ಯಾಸಿಗಳಲ್ಲ, ''''ನಿಂತ್ರ ನೀರು ಕೆಡತ್, ಕುಂತ್ರ ಸ್ವಾಮಿ ಕೆಡುತ್ತಾನೆ'''' ಎನ್ನುವ ಗುರುಗಳಾದ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ಮಾತು ಅಕ್ಷರಶಃ ಸತ್ಯವಾಗಿದ್ದು, ಸ್ವಾಮಿಗಳಾದವರು ನಿರಂತರ ಓಡಾಟ ಮಾಡುತ್ತಾ ಸಮಾಜ ಕಟ್ಟುವ ಕೆಲಸ ಮಾಡಬೇಕು ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು ಹೇಳಿದರು.