ಕನ್ನಡಪ್ರಭ ವಾರ್ತೆ ಯಾದಗಿರಿ
ಇಂದು ಪ್ರಪಂಚದಲ್ಲಿ ಬಹುತೇಕ ದೇಶಗಳು ಕಲಿಕೆ, ಜ್ಞಾನ ಮತ್ತು ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿವೆ. ಅದರಂತೆ ಭಾರತ ದೇಶವು ಕೂಡ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಮುನ್ನುಗ್ಗುತ್ತಿದೆ. ಕಾರಣ ಈ ಭಾಗದ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ತಮ್ಮ ಬದುಕಿನಲ್ಲಿ ಶ್ರದ್ಧೆಯಿಂದ ಕಲಿಕಾ ಆಸಕ್ತಿ ಬೆಳೆಸಿಕೊಂಡು ಬೌದ್ಧಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಭೌತಶಾಸ್ತ್ರಜ್ಞ ಪ್ರೊ. ಎಚ್.ಸಿ. ವರ್ಮಾ ಸಲಹೆ ನೀಡಿದರು.ನಗರದ ಹೊರವಲಯದಲ್ಲಿರುವ ಆರ್ಯಭಟ್ಟ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಭೌತ ಮತ್ತು ಜೀವ ವಿಜ್ಞಾನ ವಿಷಯದ ಕುರಿತು ಮೂರು ದಿನಗಳ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
ಯಾವುದೇ ವಿಷಯದಲ್ಲಾಗಲಿ ಮೊದಲು ಮಕ್ಕಳಲ್ಲಿ ಕಲಿಕಾ ಉತ್ಸಾಹ, ಏಕಾಗ್ರತೆ, ಛಲ ಇರುತ್ತದೆ. ಅವರಿಗೆ ಈ ಜಗತ್ತಿನಲ್ಲಿ ಯಾವುದೇ ವಿಷಯವಾಗಲಿ ಕಠಿಣವಾಗುವುದಿಲ್ಲ. ಈ ನಿಟ್ಟಿನಲ್ಲಿ ಸಮಯಪ್ರಜ್ಞೆಯೊಂದಿಗೆ ಪರಿಶ್ರಮ ಪಟ್ಟರೆ ಸಾಧನೆ ನಿಶ್ಚಿತ ಎಂದು ಅವರು ಹೇಳಿದರು.ಶಿಕ್ಷಕರು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಮಾಡುವ ಮುನ್ನ, ಪ್ರಸಕ್ತ ದಿನಗಳಲ್ಲಿ ದೇಶದಲ್ಲಿ ಹಾಗೂ ಮುಂದುವರಿದ ರಾಷ್ಟ್ರಗಳಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಹೊರ ಬರುತ್ತಿರುವ ಹೊಸ ವಿಷಯಗಳು, ಸಂಶೋಧನೆಗಳನ್ನು ತಿಳಿದುಕೊಂಡು ಹೆಚ್ಚಿನ ವಿಷಯ ಬೋಧನೆ ಮಾಡಬೇಕು. ಅಂದಾಗ ಮಾತ್ರ ಅವರಲ್ಲಿ ಇನ್ನೂ ಹೆಚ್ಚಿನ ಕಲಿಕಾ ಆಸಕ್ತಿ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕಲಬುರಗಿಯ ವಿಕಾಸ ಅಕಾಡೆಮಿಯ ಸಂಯೋಜಕ ಡಾ. ಬಸವರಾಜ ಪಾಟೀಲ್ ಸೇಡಂ, ವಿಜ್ಞಾನ ಕ್ಷೇತ್ರದಲ್ಲಿ ಜ್ಞಾನದ ಮುಕುಟವಾಗಿರುವ ಪ್ರೊ. ಎಚ್.ಸಿ. ಶರ್ಮಾ ಅವರು ಇಲ್ಲಿಗೆ ಆಗಮಿಸಿ, ತಮ್ಮ ಅಪಾರ ಜ್ಞಾನವನ್ನು ಎಲ್ಲರಿಗೂ ನೀಡುತ್ತಿರುವುದು ನಮ್ಮೆಲ್ಲರ ಭಾಗ್ಯ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿ, ವಿಷಯ ಅರಿತುಕೊಂಡು ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ದೂರ ಮಾಡಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಅಕಾಡೆಮಿಯ ಅಧ್ಯಕ್ಷ ಸುಧಾಕರರಡ್ಡಿ ಮಾಲಿ ಪಾಟೀಲ್ ಅನಪೂರ ಮಾತನಾಡಿದರು. ವೇದಿಕೆ ಮೇಲೆ ಹಿರಿಯ ಭೌತಶಾಸ್ತ್ರಜ್ಞರಾದ ಶರ್ಮಿಷ್ಠಾ ಬೆಂಗಳೂರು, ಪ್ರಾಂಶುಪಾಲರಾದ ಪಿ. ಅರವಿಂಧಾಕ್ಷಣ ಇದ್ದರು. ಪ್ರಾಂಶುಪಾಲರಾದ ಮಂಜುನಾಥ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಶಾಲೆಗಳ ವಿಜ್ಞಾನ ಶಿಕ್ಷಕರು ಪಾಲ್ಗೊಂಡಿದ್ದರು.