ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಪ.ಜಾತಿ, ವರ್ಗದ ಕುಂದು ಕೊರತೆ ಸಭೆ
ತಾಲೂಕು ಕಚೇರಿಯಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಜಮೀನು ಮಂಜೂರು ಮಾಡುವ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಯಿತು.ಗುರುವಾರ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ನೂರುಲ್ ಹುದಾ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಕುಂದು ಕೊರತೆ ಸಭೆಯಲ್ಲಿ ಶೃಂಗೇರಿ ಕ್ಷೇತ್ರದ ವಾಲ್ಮೀಕಿ ಸಂಘದ ಅಧ್ಯಕ್ಷ ವಾಲ್ಮೀಕಿ ಶ್ರೀನಿವಾಸ್ ಮಾತನಾಡಿ, ಬನ್ನೂರು ಗ್ರಾಪಂ ಸ.ನಂ 95 ರಲ್ಲಿ 18 ಜನಕ್ಕೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ಆಗದ ಕಾರಣ ಅರಣ್ಯ ಹಕ್ಕುಪತ್ರ ದೊರೆತಿಲ್ಲ ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ.ನೂರಲ್ ಹುದಾ ಎಸ್.ಐ.ಟಿ ಪರಿಶೀಲನೆ ನಡೆಯುತ್ತಿದ್ದು ವರದಿ ಬಂದ ನಂತರ ಕ್ರಮ ವಹಿಸಲಾಗುವುದು ಎಂದರು. ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ಹಿಂದಿನ ಸಭೆಯಲ್ಲಿ ನಾನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆ ಜಮೀನುಗಳನ್ನು ವಾಪಸ್ಸು ನೀಡಿದ್ದ ಬಗ್ಗೆ ಪ್ರಸ್ತಾಪಿಸಿದ್ದ ಬಗ್ಗೆ ಜಂಟಿ ಸರ್ವೆ ಮಾಡಿಸಿ ಕಂದಾಯ ಜಾಗವನ್ನು ಗುರುತಿಸಿ ಒತ್ತುವರಿ ಮಾಡಿದ ರೈತರಿಗೆ ಹಕ್ಕುಪತ್ರ ನೀಡಬೇಕೆಂದು ಮಾಡಿದ್ದ ಮನವಿ ವಿಚಾರ ಏನಾಗಿದೆ ಎಂದು ಪ್ರಶ್ನಿಸಿದರು.
ತಹಸೀಲ್ದಾರ್ ಉತ್ತರಿಸಿ, ಎಸ್.ಐ.ಟಿ ಪರಿಶೀಲನೆ, ಅರಣ್ಯ ಮತ್ತು ಕಂದಾಯ ಇಲಾಖೆ ಅಡಿ ಜಂಟಿ ಮೋಜಣಿ ಕಾರ್ಯ ಪ್ರಗತಿಯಲ್ಲಿದ್ದು ನಂತರ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಇದಕ್ಕೆ ತೃಪ್ತರಾಗದ ಮಂಜುನಾಥ್ ಎಸ್.ಐಟಿಗೂ, ಜಮೀನು ಮಂಜೂರಾತಿಗೂ ಯಾವುದೇ ಸಂಬಂಧವಿಲ್ಲ. ಅಕ್ರಮ, ಸಕ್ರಮದಡಿ ಸಲ್ಲಿಕೆಯಾದ ಅರ್ಜಿಗಳಿಗೆ ಕಾಯ್ದೆ 64 (ಎ) ಅಡಿ ಅರಣ್ಯ ಇಲಾಖೆ ಒಪ್ಪಿಗೆ ಪಡೆದು ಜಮೀನು ಮಂಜೂರು ಮಾಡಬೇಕೆಂದು ಸರ್ಕಾರ ಎಲ್ಲೂ ಸುತ್ತೋಲೆ ಹೊರಡಿಸಿಲ್ಲ. ಹೊರಡಿಸಿದ್ದರೆ ಸುತ್ತೋಲೆ ಪ್ರತಿ ನೀಡಲು ಆಗ್ರಹಿಸಿದರು.ಕಂದಾಯ, ಅರಣ್ಯ, ಪಂಚಾಯತ್ ರಾಜ್ ಇಲಾಖೆ ಸೇರಿ ಜಂಟಿ ಸರ್ವೆ ಮಾಡಲಾಗುತ್ತಿದೆ. ಅಲ್ಲದೆ ದಟ್ಟಾರಣ್ಯ, ಡಿಸಿ ಮೀಸಲು ಅರಣ್ಯ ಎಲ್ಲಾ ಸೇರಿ ಸಮೀಕ್ಷೆ ಮಾಡಲಾಗುತ್ತಿದೆ ಎಂದು ತಹಸೀಲ್ದಾರ್ ತಿಳಿಸಿದರು.