ಕಾರವಾರ: ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಒತ್ತುವರಿ ಸಮಸ್ಯೆ, ಮಳೆನೀರು ಹೂಳು ತೆಗೆಯುವಿಕೆ ಹಾಗೂ ಅನಧಿಕೃತ ಕಟ್ಟಡ ನಿರ್ಮಾಣಗಳ ಕುರಿತು ಸದಸ್ಯರ ನಡುವೆ ತೀವ್ರ ಚರ್ಚೆ ನಡೆಯಿತು.
ಹೂಳು ತೆಗೆಯುವ ಕಾರ್ಯದಲ್ಲಿ ವಿಳಂಬ, ಲೋಪ:
ಸಭೆಯಲ್ಲಿ ಸದಸ್ಯ ಸಂದೀಪ್ ತಳೇಕರ್, ನಗರದಲ್ಲಿ 65 ಕಿ.ಮೀ. ಉದ್ದದ ಚರಂಡಿ ಹೂಳು ತೆಗೆಯಲು ಟೆಂಡರ್ ಆಗಿದ್ದರೂ, ಕೇವಲ 35 ಕಿ.ಮೀ. ಮಾತ್ರ ಹೂಳು ತೆಗೆಯಲಾಗಿದೆ ಎಂದು ಆರೋಪಿಸಿದರು.ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ ಅವರು, ಇಬ್ಬರಿಗೆ ಮಾತ್ರ ಟೆಂಡರ್ ನೀಡುವ ಬಗ್ಗೆ ಪ್ರಶ್ನಿಸಿದರು. ನಗರದಲ್ಲಿ ಅಂಡರ್ಗ್ರೌಂಡ್ ಪಾರ್ಕಿಂಗ್ ಅಗತ್ಯವಿಲ್ಲ. ಅದರ ಬದಲು ಬೇರೆ ಯೋಜನೆಗಳ ಬಗ್ಗೆ ಕೆಡಿಎಗೆ ಠರಾವು ಮಾಡಿ ಸಲ್ಲಿಸುವಂತೆ ಆಗ್ರಹಿಸಿದರು.
ಟಿಡಿಆರ್ ವಿವಾದ: ಸದಸ್ಯರ ಆಕ್ರೋಶ
ಸಭೆಯಲ್ಲಿ ಸದಸ್ಯ ಮಕ್ಬುಲ್ ಶೇಖ್, ಟಿಡಿಆರ್ ವಿತರಣೆಯಾಗದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 9 ವರ್ಷಗಳ ಹಿಂದೆ ನಗರಸಭೆ ಟಿಡಿಆರ್ ನೀಡುವುದಾಗಿ ಹೇಳಿದ್ದರೂ ಇದುವರೆಗೂ ನೀಡಿಲ್ಲ ಎಂದು ಆರೋಪಿಸಿದರು. ನಮ್ಮ ಮೇಲೆ ವಿಶ್ವಾಸವಿಟ್ಟು ಕೆಲವು ಜನರು ಸ್ವಯಂ ಪ್ರೇರಿತವಾಗಿ ತಮ್ಮ ಜಾಗ ಬಿಟ್ಟುಕೊಟ್ಟಿದ್ದಾರೆ. ನನ್ನ ವಾರ್ಡ್ನಲ್ಲಿ ಜನರು ಲಕ್ಷಾಂತರ ರುಪಾಯಿ ವೆಚ್ಚ ಮಾಡಿದ ಕಂಪೌಂಡ್ಗಳನ್ನು ತೆರವುಗೊಳಿಸಿದ್ದಾರೆ ಎಂದರು.ಪೌರಾಯಕ್ತರು ಪ್ರತಿಕ್ರಿಯಿಸಿ ಕಳೆದ 9 ವರ್ಷಗಳಿಂದ ಈ ವಿಷಯ ಏಕೆ ಚರ್ಚೆಯಾಗಿಲ್ಲ? ಏಕೆ ಈ ವಿಷಯವನ್ನು ಬಿಟ್ಟುಬಿಡಲಾಗಿದೆ? ಇದು ಸರಿಯಲ್ಲ. ಕಾರವಾರ-ಕೋಡಿಭಾಗ ರಸ್ತೆ ವ್ಯಾಪ್ತಿಯಲ್ಲಿ ಒಟ್ಟು 202 ಜನರ ಪೈಕಿ, 2016ರ ನಂತರ ಕೇವಲ ಏಳು ಜನ ಮಾತ್ರ ಟಿಡಿಆರ್ ಲಾಭ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ಸದಸ್ಯ ಸಂದೀಪ ತಳೇಕರ್ ಅವರು ಟಿಡಿಆರ್ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ ಎಂದು ಹೇಳಿದರು. "ಟಿಡಿಆರ್ ಬಗ್ಗೆ ಜನರಿಗೆ ತಿಳಿಸಬೇಕು. ಟಿಡಿಆರ್ ಅನ್ನು ಮಾರಾಟ ಸಹ ಮಾಡಬಹುದು ಎಂಬುದರ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.ನಗರಸಭೆಯ ಆರ್ಥಿಕ ಸುಧಾರಣೆ ಮತ್ತು ಮಾಸ್ಟರ್ ಪ್ಲಾನ್ ಸಮರ್ಪಕ ಅನುಷ್ಠಾನದ ಜೊತೆಗೆ ಟಿಡಿಆರ್ ವಿತರಣೆಯ ವಿಳಂಬವು ಸಭೆಯಲ್ಲಿ ಪ್ರಮುಖ ಚರ್ಚಾ ವಿಷಯವಾಯಿತು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.