ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಬುಧವಾರ ಪಟ್ಟಣದ ಮಿನಿವಿಧಾನಸೌಧದ ಎದುರು ಹಲವು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯು ಬುಧವಾರ ತೀವ್ರ ಸ್ವರೂಪ ಪಡೆದುಕೊಂಡು, ಪ್ರತಿಭಟನಾನಿರತರು ತಹಸೀಲ್ದಾರ್ ಕಚೇರಿಗೆ ಬೀಗ ಹಾಕಲು ಹೊರಟರು. ನಂತರ ಪೊಲೀಸರು ತಡೆದು ಕೆಲಕಾಲ ಪ್ರತಿಭಟನಾನಿರತರ ಜೊತೆ ಮಾತಿನ ಚಕಮಕಿ ನಡೆದು ಕೆಲಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಯಿತು.
ಈ ವೇಳೆ ಸಿಐಟಿಯು ಮುಖ್ಯಸ್ಥ ಮಂಜುನಾಥ್ ಹಾಗೂ ರೈತ ಸಂಘದ ತಾಲೂಕು ಅಧ್ಯಕ್ಷ ಸಿ. ಜಿ. ರವಿ ಮಾತನಾಡಿ, ತಾಲೂಕಿನ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆಲ್ಲ ಕಾರಣ ರಾಜಕಾರಣಿಗಳು, ಅಧಿಕಾರಿಗಳನ್ನು ಬೆಂಬಲಿಸಿ ಜನಸಾಮಾನ್ಯರ ಕೆಲಸ ಮಾಡದೇ ಇರುವುದು. ತಹಸೀಲ್ದಾರ್ ಒಬ್ಬ ತಾಲೂಕಿನ ಜವಾಬ್ದಾರಿಯುತ ಅಧಿಕಾರಿಯಾಗಿದ್ದುಕೊಂಡು ಒಂದು ಸರ್ಕಾರವನ್ನು ಬೈದು 100 ಕೋಟಿ ರು. ಹಣ ಮಾಡಲು ಚನ್ನರಾಯಪಟ್ಟಣಕ್ಕೆ ಬಂದಿದ್ದೇನೆ ಎಂದಿರುವ ಆಡಿಯೋ ಹೊರಬಿದಿದ್ದರೂ ಕೂಡ ಮೇಲಧಿಕಾರಿಗಳು ಹಾಗೂ ಸರ್ಕಾರ ಅವರ ಪರವಾಗಿಯೇ ನಿಲ್ಲುತ್ತಿದೆ ಎಂದರು. ಎಷ್ಟು ಕೆಟ್ಟ ಆಡಳಿತ ನಮ್ಮ ರಾಜ್ಯದಲ್ಲಿ ಇದೆ ಎಂಬುದನ್ನು ತಿಳಿಯಬೇಕು. ಇಷ್ಟು ದಿನವಾದರೂ ಪ್ರತಿಭಟನಾ ಸ್ಥಳಕ್ಕೆ ಒಬ್ಬ ಅಧಿಕಾರಿ ಬಂದು ವಿಚಾರಿಸದೇ ನಮ್ಮನ್ನು ಬಂಧಿಸುವಂತೆ ಹೇಳಿರುವುದು ಖಂಡನೀಯ. ಆದ್ದರಿಂದ ಇಂದು ತಾಲೂಕು ಕಚೇರಿಗೆ ಬೀಗ ಹಾಕಲು ತೀರ್ಮಾನಿಸಿದ್ದೇವೆ ಎಂದರು.ಪ್ರತಿಭಟನೆಯಲ್ಲಿ ತೇಜಸ್ ಗೌಡ, ಶಂಕರ್ ಬರಗೂರು, ಉತ್ತೇನಹಳ್ಳಿ ಚಂದ್ರೇಗೌಡ, ಮಹೇಶ್, ಪ್ರಮೋದ್, ಬಾಬು, ಮಂಜೇಗೌಡ ಜೋಗಿಪುರ ಮತ್ತಿತರಿದ್ದರು.