ಕನ್ನಡಪ್ರಭ ವಾರ್ತೆ ಮೈಸೂರು
ಪ್ರಸ್ತುತ ದಿನಮಾನಗಳಲ್ಲಿ ಅಂತರ್ ಶಿಸ್ತೀಯ ಅಧ್ಯಯನ, ಸಂಶೋಧನೆ ಅತ್ಯಗತ್ಯ ಎಂದು ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಮಾಜಿ ನಿರ್ದೇಶಕ, ಹೈದ್ರಾಬಾದ್ ವಿವಿ ವಿಶ್ರಾಂತ ಕುಲಪತಿ, ಪದ್ಮಶ್ರೀ ಪ್ರೊ.ಗೋವರ್ಧನ್ ಮೆಹ್ತ ಪ್ರತಿಪಾದಿಸಿದರು.ಮೈಸೂರು ಹಾಗೂ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರ 70ನೇ ಜನ್ಮದಿನ ಅಂಗವಾಗಿ ರಸಾಯನಶಾಸ್ತ್ರ, ಸಾವಯವ ರಸಾಯನಶಾಸ್ತ್ರ ವಿಭಾಗ, ಸೊಸೈಟಿ ಆಫ್ ಕೆಮಿಕಲ್ ಬಯಾಲಜಿ ಆಫ್ ಇಂಡಿಯಾ ಹಾಗೂ ಹಿತೈಷಿಗಳು ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಿರುವ ‘ಮಾಲಿಕ್ಯೂಲರ್ ಮೆಡಿಸನ್ ಹೊಸ ಸವಾಲುಗಳು ಹಾಗೂ ನಾವೀನ್ಯತೆಗಳು’ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಸಾಯನಶಾಸ್ತ್ರಜ್ಞರು, ಜೀವಶಾಸ್ತ್ರಜ್ಞರು ಸಂಶೋಧನೆಯ ವಿಷಯದಲ್ಲಿ ಹಲವಾರು ಸವಾಲು, ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳನ್ನು ಕೇವಲ ಒಬ್ಬರಿಂದ ಬಗೆಹರಿಸಲು ಸಾಧ್ಯವಿಲ್ಲ. ಅಂತರ್ ಶಿಸ್ತೀಯ ಅಧ್ಯಯನ ಮಾತ್ರ ಪರಿಹಾರವಾಗಬಲ್ಲದು ಎಂದರು.ಅಂತರ್ ಶಿಸ್ತ್ರೀಯ ಅಧ್ಯಯನವು ಬೋಧನೆ, ಸಂಶೋಧನೆಯಲ್ಲಿ ಪ್ರತಿಬಿಂಬಿತವಾಗಬೇಕು. ಮೂಲದಲ್ಲಿಯೇ ಇದಕ್ಕೆಲ್ಲಾ ಸಿದ್ಧಗೆಗಳಾಗಬೇಕು. ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ಸಂವಹನ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಹಲವಾರು ವಿನೂತನ ಕಾರ್ಯಕ್ರಮಗಳನ್ನು ಜಾರಿ ಮಾಡಿರುವ ಮೈಸೂರು ವಿಶ್ವವಿದ್ಯಾನಿಲಯ ಈ ದಿಸೆಯಲ್ಲಿ ಗಮನಹರಿಸಬೇಕು ಎಂದು ಅವರು ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರಿಗೆ ಸಲಹೆ ಮಾಡಿದರು.ಮುಖ್ಯ ಅತಿಥಿಯಾಗಿದ್ದ ಏಮ್ಸ್ ಪ್ರಾಧ್ಯಾಪಕ ಡಾ.ತೇಜ್ ಪಾಲ್ ಸಿಂಗ್ ಮಾತನಾಡಿ, ರಸಾಯನಶಾಸ್ತ್ರವು ಎಲ್ಲಾ ವಿಜ್ಞಾನಿಗಳ ತಾಯಿ ಇದ್ದಂತೆ. ಔಷಧ ಸಂಶೋಧನೆ ಅತಿ ಮುಖ್ಯವಾದುದು ಎಂದರು.
ಸನ್ ಫಾರ್ಮಾ ಅಡ್ವಾನ್ಸಡ್ ರೀಸರ್ಚ್ ಕಂಪನಿಯ ಎನ್ಇಡಿ ಡಾ.ಟಿ. ರಾಜಮನ್ನಾರ್ ಮಾತನಾಡಿ, ಭಾರತವು ಔಷಧ ಕ್ಷೇತ್ರದಲ್ಲಿ ಸ್ವಾವಲಂಬಿ ಆಗುವುದರ ಜೊತೆಗೆ ವಿಶ್ವದ ಆರೋಗ್ಯ ಕ್ಷೇತ್ರಕ್ಕೆ ಶೇ.20 ರಷ್ಟು ಔಷಧವನ್ನು ಪೂರೈಸುತ್ತಿದೆ. 2047ರ ವೇಳೆಗೆ 400 ಬಿಲಿಯನ್ ಫಾರ್ಮಾ ವಹಿವಾಟು ನಡೆಯಬಹುದು ಎಂದರು.ಜೆನೆಟಿಕ್ ದೋಷಗಳು, ಜನರಿಕ್ ಡ್ರಗ್ಸ್ ಕಡೆ ಗಮನಹರಿಸಬೇಕು. ಮಾದರಿ ಮಾಲಿಕ್ಯೂಲರ್ ಮೆಡಿಸನ್ ತಯಾರಿಸಬೇಕು ಎಂದರು.
ಪ್ರೊ.ಕೆ.ಎಸ್. ರಂಗಪ್ಪ ಮಾತನಾಡಿ, ಪ್ರೊ.ಗೋವರ್ಧನ್ ಮೆಹ್ತ ಅವರು ಐಐಎಸ್ಸಿ ನಿರ್ದೇಶಕರಾಗಿದ್ದಾಗ ನೀಡಿದ 5 ಲಕ್ಷ ರು.ಗಳ ಒಂದು ಸಂಶೋಧನಾ ಕಾರ್ಯದಿಂದ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು. ಅಮೆರಿಕಾ, ರಷ್ಯಾ, ಜಪಾನ್, ಸಿಂಗಾಪೂರ್ ಸೇರಿದಂತೆ ಹಲವಾರು ಸಹವರ್ತಿ ಸಂಸ್ಥೆಗಳು ಕೂಡ ಸಾಕಷ್ಟು ನೆರವಾಗಿವೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಶೈಕ್ಷಣಿಕ ವಲಯ- ಉದ್ಯಮದ ನಡುವೆ ಪರಸ್ಪರ ಬಾಂಧವ್ಯ ಇರಬೇಕು. ಆಗ ಮಾತ್ರ ವಿಜ್ಞಾನಿಗಳು, ಸಂಶೋಧಕರು, ಸಹವರ್ತಿ ಸಂಸ್ಥೆಗಳಿಗೆ ಸಹಾಯವಾಗುತ್ತದೆ ಎಂರು.
ಕೇಂದ್ರೀಯ ಔಷಧ ಸಂಶೋಧನಾ ಸಂಸ್ಥೆಯ (ಸಿಡಿಆರ್ಐ) ವಿಶ್ರಾಂತ ನಿರ್ದೇಶಕ ಪ್ರೊ.ತಪಸ್ ಕುಮಾರ್ ಕುಂದು ಮಾತನಾಡಿದರು.ಮಾನಸ ಗಂಗೋತ್ರಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೆ.ಎನ್. ಮೋಹನ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಸಿ.ಡಿ. ಮೋಹನ್ ವಂದಿಸಿದರು. ಲಲಿತಕಲಾ ಕಾಲೇಜಿನ ರಶ್ಮಿ ಪ್ರಾರ್ಥಿಸಿದರು. ಸಾಹಿತಿ ಪ್ರೊ.ಸಿ. ನಾಗಣ್ಣ ಕಾರ್ಯಕ್ರಮ ನಿರೂಪಿಸಿದರು.
ಅಮೆರಿಕಾ, ರಷ್ಯಾ, ಜಪಾನ್, ಸಿಂಗಾಪುರ್, ಇಸ್ರೇಲ್ ಸೇರಿದಂತೆ ವಿವಿಧ ದೇಶಗಳ ವಿಜ್ಞಾನಿಗಳು, ದೇಶದ ವಿವಿಧ ರಾಜ್ಯಗಳ ವಿಜ್ಞಾನಿಗಳು, 300ಕ್ಕೂ ಹೆಚ್ಚು ಸಂಶೋಧಕರು, ವಿವಿಯ ವಿದ್ಯಾರ್ಥಿಗಳು ಈ ಎರಡು ದಿನಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.ವಿಜ್ಞಾನ ಕ್ಷೇತ್ರಕ್ಕೆ ಪ್ರೊ.ಕೆ.ಎಸ್.ರಂಗಪ್ಪ ಕೊಡುಗೆ: ಗಣ್ಯರ ಶ್ಲಾಘನೆಪ್ರೊ.ಕೆ.ಎಸ್. ರಂಗಪ್ಪ ಅವರು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗಣ್ಯರು ಶ್ಲಾಘಿಸಿದರು.
ವಿವಿಧ ಸಂಶೋಧನಾ ಸಂಸ್ಥೆಗಳನ್ನು ಸಹವರ್ತಿಗಳಾಗಿ ಮಾಡಿಕೊಳ್ಳುವಲ್ಲಿ ಪ್ರೊ.ರಂಗಪ್ಪ ಅವರು ಗಿನ್ನಿಸ್ ದಾಖಲೆ ನಿರ್ಮಿಸಬಹುದು. ಅಷ್ಟೊಂದು ಸಂಸ್ಥೆಗಳೊಂದಿಗೆ ಅವರ ಸಂಶೋಧನಾ ಒಡನಾಟ ಇದೆ ಎಂದು ಪ್ರೊ.ಗೋವರ್ಧನ್ ಮೆಹ್ತ ಪ್ರಶಂಸಿದರು.ಪ್ರೊ.ರಂಗಪ್ಪ ಅವರು ತಮ್ಮ ಈ ಸಂಶೋಧನಾ ಫ್ಯಾಷನ್ ಮುಂದುವರೆಸಬೇಕು ಎಂದು ಆಶಿಸಿದರು.
ವಿಜ್ಞಾನ ಕ್ಷೇತ್ರಕ್ಕೆ ಪೊ.ರಂಗಪ್ಪ ಅವರ ಕೊಡುಗೆ ಅದ್ಭುತವಾಗಿದೆ ಎಂದು ಪ್ರೊ.ಟಿ.ಪಿ. ಸಿಂಗ್ ಶ್ಲಾಘಿಸಿದರು. ಇದಕ್ಕೆ ಸಹವರ್ತಿ ಸಂಸ್ಥೆಗಳ ಕೊಡುಗೆಯೂ ಕಾರಣವಾಗಿದೆ ಎಂದರು.ಪ್ರೋಟಿನ್ ಸ್ಟ್ರಕ್ಚರ್ನಲ್ಲಿ ಮೈಸೂರು ವಿವಿ ಹಾಲಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಅವರ ಕೊಡುಗೆಯೂ ಇದೆ. ಕೃತಕ ಬುದ್ಧಿಮತ್ತೆ ಬಂದಿರುವ ಈಗ ಪರಿಣಾಮಕಾರಿಯಾದ ಡೇಟಾಬೇಸ್ ಮುಖ್ಯ ಎಂದರು,
ಪ್ರೊ.ತಪಸ್ ಕುಮಾರ್ ಕುಂದು, ಡಾ.ಟಿ.ರಾಜಮನ್ನಾರ್, ಪ್ರೊ.ಎನ್.ಕೆ. ಲೋಕನಾಥ್ ಅವರು ಕೂಡ ರಂಗಪ್ಪ ಅವರ ಕೊಡುಗೆಯನ್ನು ಹೊಗಳಿದರು.