ಕನ್ನಡಪ್ರಭ ವಾರ್ತೆ ವಿಧಾನಸಭೆ
ಬಜೆಟ್ ಮೇಲಿನ ಚರ್ಚೆಗೆ ಬುಧವಾರ ಉತ್ತರ ನೀಡಿದ ಮುಖ್ಯಮಂತ್ರಿ ಅವರು, ಸಂದರ್ಭೋಚಿತವಾಗಿ ತಾವು ಬಿಎಸ್ಸಿ ಓದುವ ವೇಳೆ ತಮ್ಮ ತಂದೆ ಬಾವಿವಿಂದ ನೀರು ಸೇದಿ ದನಕರುಗಳಿಗೆ ಮಧ್ಯಾಹ್ನ ನೀರು ಕುಡಿಸುವ ಕೆಲಸ ಹಚ್ಚಿದ್ದರು ಎಂದು ಪ್ರಸ್ತಾಪಿಸಿದರು. ಈ ಮಾತು ಕೇಳಿ ನಗಲಾರಂಭಿಸಿದ ಆರ್.ಅಶೋಕ್, ನಿಮ್ಮ ತಂದೆ ಬಹಳ ದೂರದೃಷ್ಟಿಯಿಂದಲೇ ನೀರು ಕುಡಿಸುವ ಕೆಲಸ ನಿಮಗೆ ಕೊಟ್ಟಿದ್ದರು ಎನಿಸುತ್ತದೆ. ಅದಕ್ಕೇ ಈಗ ನೀವು ನಿಮ್ಮ ಪಕ್ಕದಲ್ಲಿರುವವರಿಗೆ (ಡಿ.ಕೆ.ಶಿವಕುಮಾರ್), ನಿಮ್ಮೆ ಹಿಂದೆ, ಮುಂದೆ ಇರುವ ಎಲ್ಲರಿಗೂ ನೀರು ಕುಡಿಸಿ ಎಂಟು ವರ್ಷಗಳಿಂದ ನೀವೇ ಸಿಎಂ ಆಗಿದ್ದೀರಿ. ಕುಡಿಸೋದು ಕುಡಿಸುತ್ತೀರಿ ಸ್ವಲ್ಪ ಉಪ್ಪುಕಾರ ಹಾಕಿ ಕುಡಿಸಿ ಎಂದು ಕಿಚಾಯಿಸಿದರು.
ನೀನು ದನಾನ-ಸಿಎಂ ಟಾಂಗ್:ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅಶೋಕ್ ನಾನು ದನಕರುಗಳಿಗೆ ನೀರು ಕುಡಿಸುತ್ತಿದ್ದೆ ಅಂತ ಹೇಳಿದ್ದು. ನೀನು ನಮ್ಮೆಲ್ಲರಿಗೂ ನೀರು ಕುಡಿಸಿದ್ದೀರಿ ಅನ್ನುತ್ತಿದ್ದೀಯಲ್ವಾ, ನೀನೇನು ದನಾನ! ನಿಮಗೆ(ಪ್ರತಿಪಕ್ಷದವರಿಗೆ) ನಾನು ಕುಡಿಸಿರುವುದು ರಾಜಕೀಯ ನೀರು. ಡಿ.ಕೆ.ಶಿವಕುಮಾರ್ ಅವರು, ನನ್ನ ಸಂಪುಟ ಸಹೋದ್ಯೋಗಿ. ನಮ್ಮ ಪಕ್ಷದಲ್ಲಿ ಏನೇನು ನಡೆಯುತ್ತಿದೆ ಎಂದು ನೋಡಿಕೊಳ್ಳಲು ಹೈಕಮಾಂಡ್ ಇದೆ ಎಂದು ಡಿ.ಕೆ.ಶಿವಕುಮಾರ್ ಅವರ ಕಡೆ ನೋಡಿಕೊಂಡು ಹೇಳುತ್ತಿದ್ದರು. ಆಗ ಅಶೋಕ್, ಅದನ್ನು ನಮ್ಮನ್ನೂ ನೋಡಿಕೊಂಡು ಹೇಳಿ ಡಿ.ಕೆ.ಶಿವಕುಮಾರ್ ಅವರನ್ನು ನೋಡಿಕೊಂಡು ಏಕೆ ಹೇಳುತ್ತಿದ್ದೀರಿ ಎಂದು ಮತ್ತೆ ಕಾಲೆಳೆದರು.