ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಸ್ಥಳೀಯಾಡಳಿತ ಅಡ್ಡಿ: ಜಾಗರಣ ವೇದಿಕೆ, ಗಣೇಶೋತ್ಸವ ಸಮಿತಿಗಳ ಪ್ರತಿಭಟನೆ

KannadaprabhaNewsNetwork |  
Published : Sep 03, 2024, 01:32 AM IST
ಚಿತ್ರ : 2ಎಂಡಿಕೆ1 : ಹಿಂದೂಪರ ಸಂಘಟನೆಗಳಿಂದ ಮಡಿಕೇರಿ ನಗರಸಭಾ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  | Kannada Prabha

ಸಾರಾಂಶ

ಹಿಂದೂ ಜಾಗರಣ ವೇದಿಕೆ ಹಾಗೂ ವಿವಿಧ ಗಣೇಶೊತ್ಸವ ಸಮಿತಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹಿಂದೂ ವಿರೋಧಿ ಶಕ್ತಿಗಳು ನಡೆಸುತ್ತಿರುವ ದಾಳಿಯನ್ನು ಖಂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಂವಿಧಾನದತ್ತವಾಗಿ ನಮಗೆ ದಕ್ಕಿರುವ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಮಾಲೀನ್ಯಗಳ ನೆಪ ಹೇಳಿ ಸ್ಥಳೀಯ ಆಡಳಿತ ಅಡ್ಡಿಪಡುತ್ತಿದೆ ಎಂದು ಆರೋಪಿಸಿ ಹಿಂದು ಜಾಗರಣ ವೇದಿಕೆ ಹಾಗೂ ವಿವಿಧ ಗಣೇಶೋತ್ಸವ ಸಮಿತಿಗಳ ನೇತೃತ್ವದಲ್ಲಿ ಮಡಿಕೇರಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಯಿತು.

ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ಹಿಂದೂ ವಿರೋಧಿ ಶಕ್ತಿಗಳು ನಡೆಸುತ್ತಿರುವ ದಾಳಿಯನ್ನು ಒಕ್ಕೊರಲಿನಿಂದ ಖಂಡಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಹಿಂದು ಜಾಗರಣ ವೇದಿಕೆಯ ಪ್ರಾಂತ ಸಮಿತಿಯ ಪ್ರಮುಖರಾದ ಕೆ.ಟಿ. ಉಲ್ಲಾಸ್, ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಪರಿಸರ ಮಾಲಿನ್ಯ ಹಾಗೂ ಕಾನೂನಿನ ನೆಪ ಹೇಳಿ ಅಡ್ಡಿಪಡಿಸುತ್ತಿರುವುದನ್ನು ಬಲವಾಗಿ ಖಂಡಿಸುವುದಾಗಿ ಹೇಳಿದರು.

ಕಾನೂನು ಪಾಲನೆ ಕೇವಲ ಹಿಂದುಗಳಿಗಷ್ಟೇ ಸೀಮಿತ ಎನ್ನುವಂತ ಧೋರಣೆಯನ್ನು ಆಡಳಿತ ನಡೆಸುವವರು ಹಾಗೂ ಅಧಿಕಾರಿಗಳು ಕೈಬಿಡಬೇಕು ಎಂದು ಹಾಗೂ ನಾಡಿನ ಗಣೇಶೋತ್ಸವ ಸಮಿತಿಗಳಿಗೆ ಕಾನೂನಿನ ನೆಪದಲ್ಲಿ ಕಿರುಕುಳ ನೀಡಿದಲ್ಲಿ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಕೆ ನೀಡಿದರು.

ಗಣೇಶ ಉತ್ಸವ ಸಮಿತಿಗಳ ಪರವಾಗಿ ಮಾತನಾಡಿದ ಹಿಂದೂ ಯುವಶಕ್ತಿ ಮಂಡಳಿ ಪ್ರಮುಖರಾದ ಅರುಣ್ ಕುಮಾರ್, ಯಾವುದೇ ಕಾರಣಕ್ಕೂ ಹಿಂದುಗಳು ಮುಚ್ಚಳಿಕೆ ಬಾಂಡ್ ನೀಡಿ ಹಬ್ಬಹರಿದಿನಗಳನ್ನು ಆಚರಿಸುವ ದುಃಸ್ಥಿತಿಗೆ ತಲುಪಬಾರದು ಎಂದರು.

ಎಲ್ಲೂ ಇಲ್ಲದ ಕಾನೂನುಗಳ ಹೇರಿಕೆಯನ್ನು ನಗರಸಭೆ ವ್ಯಾಪ್ತಿಯಲ್ಲಿ ಜಾರಿಗೊಳಿಸಲು ನಗರಸಭಾ ಕಮೀಷನರ್ ಪತ್ರಿಕಾ ಪ್ರಕಟಣೆ ನೀಡಿರುವುದು ಖಂಡನೀಯ ಎಂದರು.

ಪ್ರತಿಭಟನೆಯಲ್ಲಿ ಹಿಂದು ಜಾಗರಣ ವೇದಿಕೆಯ ಪ್ರಾಂತ ಸಮಿತಿಯ ಸುಭಾಸ್ ತಿಮ್ಮಯ್ಯ, ಜಿಲ್ಲಾ ಸಂಯೋಜಕರಾದ ಕುಕ್ಕೇರ ಅಜಿತ್, ಜಿಲ್ಲಾ ಸಹ ಸಂಯೋಜಕರಾದ ಚೇತನ್ ಶಾಂತಿನಿಕೇತನ್, ಬೋಜೇಗೌಡ, ಯೋಗೇಶ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕುಮಾರ್ ಮೇಕೇರಿ, ಸುನಿಲ್ ಮಾದಾಪುರ, ಶಾಂತೆಯಂಡ ತಿಮ್ಮಯ್ಯ, ರಾಜೀವ, ಭವನ್ , ಉಮೇಶ್ , ಮಡಿಕೇರಿ ತಾಲೂಕು ಸಂಯೋಜಕ್ ದುರ್ಗೇಶ್ ,ಕುಶಾಲನಗರ ತಾಲೂಕು ಸಂಯೋಜಕರಾದ ದಿನೇಶ್, ಪೊನ್ನಂಪೇಟೆ ತಾಲೂಕು ಸಂಯೋಜಕರಾದ ಸುಖೇಶ್, ವಿಶ್ವ ಹಿಂದು ಪರಿಷತ್ ಪ್ರಮುಖರಾದ ಪುದಿಯೊಕ್ಕಡ ರಮೇಶ್ , ಸುರೇಶ್, ಬಜರಂಗದಳದ ನವೀನ್ ಪೂಜಾರಿ, ಜಿಲ್ಲಾ ಭಾ.ಜ.ಪಾ.ಅಧ್ಯಕ್ಷರಾದ ರವಿ ಕಾಳಪ್ಪ, ಪ್ರಮುಖರಾದ ರಾಬಿನ್ ದೇವಯ್ಯ, ಧನಂಜಯ್ ಅಗೋಳಿಕಜೆ, ಮಹೇಶ್ ಜೈನಿ, ಅನಿತಾ ಪೂವಯ್ಯ, ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷರಾದ ರವಿ ಮೊಗೇರ ಸೇರಿದಂತೆ ನಗರ ಸಭಾ ಸದಸ್ಯರು, ಮಹಿಳಾ ಮೋರ್ಚಾ ಪದಾಧಿಕಾರಿಗಳು ವಿವಿಧ ಗಣೇಶೋತ್ಸವ ಸಮಿತಿಗಳ ಮುಖಂಡರು ಹಾಗೂ ಸಾರ್ವಜನಿಕರು ಸುರಿವ ಮಳೆಯ ನಡುವೆಯೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ