ಒಳಮೀಸಲಾತಿ: 6ರಂದು ಮಾದಿಗರಿಂದ ದಾವಣಗೆರೆ ಬಂದ್‌

KannadaprabhaNewsNetwork |  
Published : Mar 02, 2026, 01:30 AM IST
1ಕೆಡಿವಿಜಿ3-ದಾವಣಗೆರೆ ಹಳೆ ಪ್ರವಾಸಿ ಮಂದಿರದ ಬಳಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಮಾದಿಗ ಸಮಾಜದ ಮುಖಂಡರು, ಸಮಾಜ ಬಾಂಧವರು ಘೇರಾವ್ ಮಾಡಿರುವುದು. ..............1ಕೆಡಿವಿಜಿ4, 5-ದಾವಣಗೆರೆ ಹಳೆ ಪ್ರವಾಸಿ ಮಂದಿರದಲ್ಲಿ ಮಾ.6ರಂದು ದಾವಣಗೆರೆ ಬಂದ್‌ ಹೋರಾಟದ ಬಗ್ಗೆ ನಿರ್ಣಯಿಸಿ, ಶಾಸಕ ಬಸವಂತಪ್ಪಗೆ ಮುತ್ತಿಗೆ ಹಾಕಲು ತೆರಳುತ್ತಿರುವ ಮಾದಿಗ ಸಮಾಜದ ಮುಖಂಡರು. ...............1ಕೆಡಿವಿಜಿ6-ದಾವಣಗೆರೆ ಹಳೆ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ವಿವಿಧ ಪಕ್ಷ, ಸಂಘಟನೆಗಳ ಮುಖಂಡರ ಸಭೆ. | Kannada Prabha

ಸಾರಾಂಶ

ಮಾದಿಗರ 35 ವರ್ಷಗಳ ನಿರಂತರ ಹೋರಾಟದ ಫಲವಾಗಿ ಲಭಿಸಿರುವ ಒಳ ಮೀಸಲಾತಿ ಅವಕಾಶವನ್ನೇ ನಾಶಪಡಿಸಲು ರಾಜ್ಯ ಸರ್ಕಾರದ ಕೆಲ ಸಚಿವರು ಮುಂದಾಗಿದ್ದಾರೆ. ಈ ನಡೆ ಖಂಡಿಸಿ ಹಾಗೂ 56432 ಸರ್ಕಾರಿ ಹುದ್ದೆಗೆ ಭರ್ತಿಗೆ ಒಳಮೀಸಲಾತಿ ಅಳ‍ವಡಿಸಲು ಒತ್ತಾಯಿಸಿ ಮಾ.6ರಂದು ಜಿಲ್ಲೆಯ ವಿವಿಧ ಮಾದಿಗರ ಪರ ಸಂಘಟನೆಗಳ ಒಕ್ಕೂಟದಿಂದ ಮಾ.6ರಂದು ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದೆ.

- ಒಳಮೀಸಲಾತಿ ತಪ್ಪಿಸಲು ಕೆಲ ಸಚಿವರ ಹುನ್ನಾರ: ಆಲೂರು ನಿಂಗರಾಜ ಆರೋಪ

- ಪ್ರವಾಸಿ ಮಂದಿರದಲ್ಲಿ ಸರ್ಕಾರದ ಕಿವಿ ಹಿಂಡಲು ಶಾಸಕ ಬಸವಂತಪ್ಪಗೂ ಘೇರಾವ್‌

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾದಿಗರ 35 ವರ್ಷಗಳ ನಿರಂತರ ಹೋರಾಟದ ಫಲವಾಗಿ ಲಭಿಸಿರುವ ಒಳ ಮೀಸಲಾತಿ ಅವಕಾಶವನ್ನೇ ನಾಶಪಡಿಸಲು ರಾಜ್ಯ ಸರ್ಕಾರದ ಕೆಲ ಸಚಿವರು ಮುಂದಾಗಿದ್ದಾರೆ. ಈ ನಡೆ ಖಂಡಿಸಿ ಹಾಗೂ 56432 ಸರ್ಕಾರಿ ಹುದ್ದೆಗೆ ಭರ್ತಿಗೆ ಒಳಮೀಸಲಾತಿ ಅಳ‍ವಡಿಸಲು ಒತ್ತಾಯಿಸಿ ಮಾ.6ರಂದು ಜಿಲ್ಲೆಯ ವಿವಿಧ ಮಾದಿಗರ ಪರ ಸಂಘಟನೆಗಳ ಒಕ್ಕೂಟದಿಂದ ಮಾ.6ರಂದು ದಾವಣಗೆರೆ ಬಂದ್‌ಗೆ ಕರೆ ನೀಡಲಾಗಿದೆ.

ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ಹಿರಿಯ ನಾಯಕರಾದ ಮಾಯಕೊಂಡದ ಆಲೂರು ನಿಂಗರಾಜ, ಹಿರಿಯ ವಿಚಾರವಾದಿ ಪ್ರೊ. ಎಚ್.ವಿಶ್ವನಾಥ, ಎಂ.ಹಾಲೇಶ, ಎಚ್.ಸಿ.ಗುಡ್ಡಪ್ಪ ಸೇರಿದಂತೆ ಅನೇಕ ಮುಖಂಡರ ನೇತೃತ್ವದಲ್ಲಿ ಸಭೆ ನಡೆಸಿ ಬಂದ್‌ ಬಗ್ಗೆ ನಿರ್ಧರಿಸಲಾಗಿದೆ. ಅಲ್ಲದೇ, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ, ಸದನದಲ್ಲಿ ಧ್ವನಿ ಎತ್ತಲು ಒತ್ತಾಯಿಸಿ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೂ ಘೇರಾವ್ ಮಾಡಿ, ಒತ್ತಾಯಿಸಲಾಯಿತು.

ಇದಕ್ಕೂ ಮುನ್ನ ಸಭೆಯಲ್ಲಿ ಮಾತನಾಡಿದ ಆಲೂರು ನಿಂಗರಾಜ, ಸುಪ್ರೀಂ ಕೋರ್ಟ್‌ ಆದೇಶದಂತೆ ರಾಜ್ಯ ಸರ್ಕಾರ ಒಳಮೀಸಲಾತಿ ಕಲ್ಪಿಸಬೇಕು. ಆನಂತರವೇ 56 ಸಾವಿರಕ್ಕೂ ಅಧಿಕ ಸರ್ಕಾರಿ ಹುದ್ದೆಗಳ ಭರ್ತಿಗೆ ಮುಂದಾಗಬೇಕು. ಒಳಮೀಸಲಾತಿಯನ್ನು ನಾಶಪಡಿಸಲು ಒಳಗೊಳಗೆ ಪ್ರಯತ್ನಿಸುತ್ತಿರುವ ಕಾಂಗ್ರೆಸ್ಸಿನ ಸಚಿವರು ತಮ್ಮ ವರ್ತನೆ ತಿದ್ದಿಕೊಳ್ಳಲಿ ಎಂದು ಎಚ್ಚರಿಸಿದರು.

ಒಳ ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸಲು ಒತ್ತಾಯಿಸಿ ಮಾ.6ರಂದು ಕರೆ ನೀಡಿರುವ ದಾವಣಗೆರೆ ಬಂದ್‌ಗೆ ನಗರ, ಜಿಲ್ಲೆಯ ವಿವಿಧ ತಾಲೂಕು, ಗ್ರಾಮಾಂತರ ಪ್ರದೇಶದಿಂದ ಮಾದಿಗ ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಳ್ಳಬೇಕು. ಎಲ್ಲ ಪಕ್ಷಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಬೇಕು, ದಾವಣಗೆರೆ ಬಂದ್‌ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಇಲ್ಲದೇ, ನೇಮಕಾತಿ ಮಾಡಬಾರದು. ನಮ್ಮ ಸಮುದಾಯದ ಸಚಿವರು, ಶಾಸಕರು ಸರ್ಕಾರದ ಮೇಲೆ ಈ ಬಗ್ಗೆ ಒತ್ತಡ ಹೇರುವ ಮೂಲಕ ಒಳ ಮೀಸಲಾತಿ ಜಾರಿಗೆ ಸಮಾಜದ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಒತ್ತಾಯಿಸಿದರು.

ಕೆ.ಎಸ್.ಬಸವಂತಪ್ಪಗೆ ಘೇರಾವ್‌:

ಸಭೆ ನಂತರ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಪ್ರವಾಸಿ ಮಂದಿರಕ್ಕೆ ಬಂದರು. ಈ ವಿಚಾರ ತಿಳಿದ ಸಮಾಜದ ಮುಖಂಡರು, ಸಮಾಜ ಬಾಂಧವರು ಬಸವಂತಪ್ಪ ಅವರಿಗೆ ಘೇರಾವ್ ಹಾಕಿ, ಮಾದಿಗ ಸಮಾಜದ ಪರವಾಗಿ ಒಳ ಮೀಸಲಾತಿಗಾಗಿ ಧ್ವನಿ ಎತ್ತುತ್ತಿಲ್ಲ ಎಂದು ಅಸಮಾಧಾನಗೊಂಡರು. ಸರ್ಕಾರ ಮತ್ತು ಸಚಿವರು ಹಾಗೂ ಶಾಸಕರ ವಿರುದ್ಧ ಮಾದಿಗ ಸಮುದಾಯದ ಮುಖಂಡರು, ಸಮಾಜ ಬಾಂಧವರು ಘೋಷಣೆ ಕೂಗುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.

ಪಾಲಿಕೆ ಮಾಜಿ ಸದಸ್ಯ ಎಂ.ಹಾಲೇಶ, ಸಮಾಜದ ಮುಖಂಡರಾದ ಹಿರಿಯ ವಿಚಾರವಾಗಿ ಡಾ. ಎಚ್‌.ವಿಶ್ವನಾಥ, ಮಾದಿಗ ದಂಡೋರ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ, ಕಡತಿ ಅಂಜಿನಪ್ಪ, ಹರಿಹಲ ಎಚ್.ಮಲ್ಲೇಶ, ಉಚ್ಚಂಗಿ ಪ್ರಸಾದ, ರಾಘವೇಂದ್ರ ಕಡೇಮನಿ, ನಿಂಗರಾಜ ಚಿಕ್ಕನಹಳ್ಳಿ , ಕುಂದುವಾಡ ಮಂಜುನಾಥ, ಕೆಟಿಜೆ ನಗರ ಎಂ.ರವಿಕುಮಾರ, ಟಿ.ರವಿಕುಮಾರ, ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಪ್ರಭಾಕರ, ಚನ್ನಗಿರಿ ಮೂರ್ತಿ, ಕೆಂಚಮ್ಮನಹಳ್ಳಿ ರುದ್ರೇಶ, ಗುಂಗುರು ಮಂಜುನಾಥ, ಗುನ್ನೂರ ಬಸವರಾಜ, ಮಹಾಂತೇಶ ಹಾಲವರ್ತಿ, ವಕೀಲರಾದ ಶಾಮ್, , ಮಂಜಪ್ಪ ಇತರರು ಇದ್ದರು.

- - -

(ಟಾಪ್‌ ಕೋಟ್‌) ಮಾದಿಗ ಸಮಾಜದ ಪ್ರತಿನಿಧಿಯಾಗಿ, ಶಾಸಕರಾಗಿ ಸದನದಲ್ಲಿ ನೀವು ಮಾತನಾಡದಿರುವುದನ್ನು ಖಂಡಿಸುತ್ತೇವೆ. ಒಳ ಮೀಸಲಾತಿ ಕಲ್ಪಿಸುವಂತೆ ಸರ್ಕಾರದ ಮೇಲೆ ನೀವು ಒತ್ತಡ ಹೇರಬೇಕಿತ್ತು. ಈ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕಿತ್ತು. ಇನ್ನೂ ಕಾಲ ಮಿಂಚಿಲ್ಲ, ಸರ್ಕಾರದ ಕಿವಿ ಹಿಂಡಿ, ಮಾದಿಗ ಸಮಾಜಕ್ಕೆ ಒಳ ಮೀಸಲಾತಿಯನ್ನು ಯಥಾವತ್ತಾಗಿ ಜಾರಿಗೊಳಿಸಿ, ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಿರಿ.

- ಆಲೂರು ನಿಂಗರಾಜ, ಹಿರಿಯ ಮುಖಂಡ, ಮಾದಿಗ ಸಮಾಜ.

- - -

-1ಕೆಡಿವಿಜಿ3.ಜೆಪಿಜಿ:

ದಾವಣಗೆರೆ ಹಳೆ ಪ್ರವಾಸಿ ಮಂದಿರದ ಬಳಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಮಾದಿಗ ಸಮಾಜದ ಮುಖಂಡರು, ಸಮಾಜ ಬಾಂಧವರು ಘೇರಾವ್ ಹಾಕಿ, ಒಳಮೀಸಲಾತಿ ಜಾರಿ ಕುರಿತು ಸರ್ಕಾರದ ಗಮನ ಸೆಳೆಯಲು ಒತ್ತಾಯಿಸಿದರು.

-1ಕೆಡಿವಿಜಿ6.ಜೆಪಿಜಿ: ದಾವಣಗೆರೆ ಹಳೆ ಪ್ರವಾಸಿ ಮಂದಿರದಲ್ಲಿ ಮಾದಿಗ ಸಮುದಾಯದ ವಿವಿಧ ಪಕ್ಷ, ಸಂಘಟನೆಗಳ ಮುಖಂಡರ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೌನ್ ಪ್ಲಾನಿಂಗ್ ಅಧಿಕಾರಿ ಸಹಿಯೇ ನಕಲಿ..!
ವೀರಶೈವ ಧರ್ಮ ವಿಶಾಲವಾದುದು: ಶಾಸಕ ಷಡಕ್ಷರಿ