ತರಳಬಾಳು ಹುಣ್ಣಿಮೆಗೆ ಅಂತರಾಷ್ಟ್ರೀಯ ಮೆರಗು

KannadaprabhaNewsNetwork | Published : Jan 25, 2025 1:03 AM

ಸಾರಾಂಶ

ಮಹಾಮಂಟಪ ನಿರ್ಮಾಣ ಕಾರ್ಯವನ್ನು ತರಳಬಾಳು ಶ್ರೀಗಳು ಭಕ್ತಾದಿಗಳೊಂದಿಗೆ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಈ ಬಾರಿ ಭರಮಸಾಗರದಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ದೇಶ ವಿದೇಶಗಳಿಂದ ಆಗಮಿಸುವ ವಿದ್ವಾಂಸರು, ರಾಜತಾಂತ್ರಿಕರು ಭಾಗವಹಿಸುತ್ತಿರುವುದರಿಂದ ಅದಕ್ಕೆ ಅಂತರರಾಷ್ಟ್ರೀಯ ಮೆರಗು ಬರಲಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಭರಮಸಾಗರ ಹೋಬಳಿ ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಆಯೋಜನೆಗೊಳ್ಳುತ್ತಿರುವ 9 ದಿನಗಳ ವೈಭವದ ಸಮಾರಂಭದ ಸಿದ್ಧತೆಗಳನ್ನು ವೀಕ್ಷಿಸಿ, ಕಾರ್ಯಕರ್ತರು ತನು ಮನ ಧನಗಳಿಂದ ಹುಣ್ಣಿಮೆ ಮಹೋತ್ಸವ ಯಶಸ್ಸಿಗೆ ದುಡಿಯುತ್ತಿರುವುದನ್ನು ಶ್ಲಾಘಿಸಿದರು.

ಮಂಟಪ ನಿರ್ಮಾಣಗೊಳ್ಳಲಿರುವ ಪ್ರದೇಶದಲ್ಲಿ ಸಜ್ಜುಗೊಳ್ಳುತ್ತಿರುವ ಕ್ರೀಡಾ ಅಂಕಗಳು, ಕುಸ್ತಿ ಅಖಾಡಗಳನ್ನೂ ವೀಕ್ಷಿಸಿದರು.ಹುಣ್ಣಿಮೆ ಮಹೋತ್ಸವ ಮಂಟಪ ನಿರ್ಮಾಣ ವೀಕ್ಷಿಸಲು ಈ ಹಿಂದೆಯೇ ಬರುವ ಆಲೋಚನೆ ಇದ್ದರೂ ಕಾರ್ಯದೊತ್ತಡದಿಂದ ಸಾಧ್ಯವಾಗಲಿಲ್ಲ. ʻಗುರುವಾದಡೋ ಕಾಯಕದಿಂದಲೇ ಜೀಮನ್ಮುಕ್ತಿʼ ಎಂಬ ಬಸವಣ್ಣನವರ ಮಾತುಗಳಲ್ಲಿ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದರು.

2023ರಲ್ಲಿ ಕೊಟ್ಟೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಸಂದರ್ಭದಲ್ಲಿ 2024ರ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ ನಡೆಯುವುದು ಎಂದು ಘೋಷಣೆ ಮಾಡಿದ್ದೆವು. ಅಂದುಕೊಂಡಂತೆ ಕಳೆದ ವರ್ಷವೇ ಇಲ್ಲಿ ಹುಣ್ಣಿಮೆ ಮಹೋತ್ಸವ ನಡೆದಿದ್ದರೆ ಅಷ್ಟು ಸಂಭ್ರಮ ಇರುತ್ತಿರಲಿಲ್ಲ. ಈಗ ಈ ಭಾಗದ ಕೆರೆಗಳೆಲ್ಲವೂ ತುಂಬಿ, ಜನರ ಕೃಷಿ ಚಟುವಟಿಕೆಗಳು ಇಮ್ಮಡಿಗೊಂಡಿರುವುದರಿಂದ ಸಹಜವಾಗಿಯೇ ಭಕ್ತರ ಉತ್ಸಾಹ ಇಮ್ಮಡಿಗೊಂಡಿದೆ ಎಂದರು.

ಈ ಬಾರಿಯ ತರಳಬಾಳು ಹುಣ್ಣಿಮೆ ಎಲ್ಲಾ ವಿಚಾರಗಳಲ್ಲಿಯೂ ವಿಭಿನ್ನವಾಗಿರಲಿದೆ. ಮಹಾಮಂಟಪದ ರಚನಾ ವಿನ್ಯಾಸವೂ ಅತ್ಯಂತ ಆಕರ್ಷಣೀಯವಾಗಿ ಪ್ರಶಸ್ತ ಸ್ಥಳದಲ್ಲಿ ನಿರ್ಮಾಣಗೊಳ್ಳುತ್ತಿದೆ. ಸಂಜೆಯ ಕಾರ್ಯಕ್ರಮದಲ್ಲಿಯೂ ಬದಲಾವಣೆ ಇರಲಿದ್ದು ಪ್ರತಿದಿನವೂ ಒಂದೊಂದು ನಿರ್ಧಿಷ್ಟ ವಿಷಯದ ಮೇಲೆ ಉಪನ್ಯಾಸಗಳು ನಡೆಯಲಿವೆ ಎಂದರು.

ತರಳಬಾಳು ಹುಣ್ಣಿಮೆ ಮಹಾಮಂಟಪಕ್ಕೆ ʻಬಿಚ್ಚುಗತ್ತಿ ಭರಮಣ್ಣನಾಯಕ ಮಹಾಮಂಟಪʼ ಮಹಾದ್ವಾರಕ್ಕೆ ಒನಕೆ ಓಬವ್ವ ಮಹಾದ್ವಾರ, ವೇದಿಕೆಗೆ ಚಿನ್ಮೂಲಾದ್ರಿ ರೇವಣಸಿದ್ದೇಶ್ವರ ವೇದಿಕೆ ಎಂದು ನಾಮಕರಣ ಮಾಡಲಾಗುವುದು ಎಂದು ಶ್ರೀಗಳು ಪ್ರಕಟಿಸಿದರು. ಈ ಮೂವರು ಪ್ರಾಥಃಸ್ಮರಣೀಯರು ಚಿತ್ರದುರ್ಗದ ಇತಿಹಾಸದಲ್ಲಿ ದಾಖಲಾಗಿದ್ದಾರೆ. ಅವರನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಶ್ರೀಗಳು ತಿಳಿಸಿದರು.

ದೇಶದ ಹಿತಕ್ಕಾಗಿ ಹೋರಾಡುತ್ತ ವೀರಮರಣ ಹೊಂದಿರುವ ಹತ್ತು ಜನ ಸೈನಿಕರ ಕುಟುಂಬಕ್ಕೆ 1ಲಕ್ಷ ರು.ನೆರವು ನೀಡಲಾಗುವುದು ಎಂದು ಶ್ರೀಗಳು ಪ್ರಕಟಿಸಿದರು.

ಈ ವೇಳೆ ಎಸ್.ಎಂ.ಎಲ್. ತಿಪ್ಪೇಸ್ವಾಮಿ, ಎಮ್ಮೆಹಟ್ಟಿ ಕೃಷ್ಣಮೂರ್ತಿ, ಚೌಲಿಹಳ್ಳಿ ಶಶಿ ಪಾಟೀಲ್‌, ಜಿ.ಬಿ. ತೀರ್ಥಪ್ಪ, ಶೈಲೇಶ್‌ ಕುಮಾರ್‌, ನಿರಂಜನಮೂರ್ತಿ, ಹಂಪನೂರು ಜಗದೀಶ್‌, ಕೋಡಿರಂಗವ್ವನಹಳ್ಳಿ ಹನುಂತಪ್ಪ, ಓಬವ್ವನಾಗತಿಹಳ್ಳಿ ಮಂಜುನಾಥ್‌, ದೊಡ್ಡಾಲಗಟ್ಟ ಗ್ರಾಪಂ ಅಧ್ಯಕ್ಷ ನಾಗರಾಜ್‌, ಸಿ.ಆರ್.‌ ನಾಗರಾಜ್‌ ಮುಂತಾದವರು ಭಾಗವಹಿಸಿದ್ದರು.

----

ಬಾಕ್ಸ್:

ಆಚರಣೆ ನಿಧಿಗೆ ಭಕ್ತಾದಿಗಳಿಂದ ಕಾಣಿಕೆ: ತರಳಬಾಳು ಶ್ರೀ ಹರ್ಷ

ಮಹೋತ್ಸವ ಆಚರಣೆ ನಿಧಿಗೆ ಭಕ್ತಾದಿಗಳು ಸಲ್ಲಿಸಿದ ಕಾಣಿಕೆ ನೋಡುವವರನ್ನು ಬೆರಗುಗೊಳಿಸಿತು. ಕಾರ್ಯಕರ್ತರು ಪ್ರಕಟಿಸುತ್ತಿದ್ದಂತೆ ನೂರಾರು ಭಕ್ತರು ವೇದಿಕೆಗೆ ದಾವಿಸಿ ತಮ್ಮ ಗ್ರಾಮಗಳಿಂದ ಸಂಗ್ರಹಿಸಿದ ನಿಧಿಯನ್ನು ಶ್ರೀಗಳಿಗೆ ನೀಡಿದರು.

ಈ ಹಿಂದಿನ ಎಲ್ಲಾ ತರಳಬಾಳು ಹುಣ್ಣಿಮೆಗಳಲ್ಲಿ ಸಂಗ್ರಹಿಸಿರುವ ನಿಧಿಗಿಂತ ಹೆಚ್ಚು ಮೊತ್ತವನ್ನು ಸಂಗ್ರಹಿಸುವ ಗುರಿ ತಮಗೆ ಇದೆಯೆಂದು ಕಾರ್ಯಕರ್ತರು ಹೇಳಿಕೊಳ್ಳುತ್ತಿದ್ದರು.

ಚೌಲಿಹಳ್ಳಿ ಶಶಿ ಪಾಟೀಲ್‌ ತಮ್ಮ ಪತ್ನಿಯ ಜೊತೆಗೂಡಿ ಶ್ರೀಗಳಿಗೆ 10 ಲಕ್ಷ ರು.ನಿಧಿ ಸಮರ್ಪಿಸಿದರು. ನಂತರ ಓಬವ್ವನಾಗತಿಹಳ್ಳಿ ಮಂಜುನಾಥ್‌ ಅವರು ತಮ್ಮ ದೇಣಿಗೆಯಾಗಿ 4 ಲಕ್ಷ ರು. ಮೊತ್ತವನ್ನು ಶ್ರೀಗಳಿಗೆ ಸಲ್ಲಿಸಿದ್ದಾರೆ.

ಸುತ್ತಲಿನ ಹಲವು ಹಳ್ಳಿಗಳ ಭಕ್ತಾದಿಗಳು ಸಹ ತಮ್ಮ ಗ್ರಾಮದಿಂದ ಸಂಗ್ರಹಿಸಿದ ವಂತಿಕೆಯನ್ನು ಶ್ರೀಗಳಿಗೆ ಸಮರ್ಪಿಸಿದರು. ಕೋಡಿರಂಗವ್ವನಹಳ್ಳಿ 5,00,930 ರು, ಚಿಕ್ಕಬೆನ್ನೂರು 4,47,500, ದೊಡ್ಡಾಲಗಟ್ಟ 4,18,622, ಹೆಗ್ಗೆರೆ 4,17,600, ಹಳವುದರ 3,72,720, ಕಾಲಗೆರೆ 3,57,900, ಇಸಾಮುದ್ರ 3,50,000 ಲಕ್ಷ್ಮೀಸಾಗರ 3,34,800 ರು. ಸಂಗ್ರಹವಾಗಿದೆ.

Share this article