ಮನಸೆಳೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

KannadaprabhaNewsNetwork |  
Published : Feb 21, 2025, 11:46 PM IST
ಗಾಳಿಪಟ | Kannada Prabha

ಸಾರಾಂಶ

ಗಾಳಿಪಟ ಉತ್ಸವಕ್ಕೆ ನೆರೆ ರಾಷ್ಟ್ರ, ನೆರೆ ರಾಜ್ಯ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದರು. ಗಾಳಿಪಟ ಕಲಿಗಳು ಬಾನಂಗಳದಲ್ಲಿ ಹಾರಾಡಿಸಿದ ಬಣ್ಣ ಬಣ್ಣದ ಗಾಳಿಪಟಗಳು ಮನಸೆಳೆದವು.

ಹು​ಬ್ಬ​ಳ್ಳಿ: ನಗರದಲ್ಲಿ ಧಾ​ರ​ವಾಡ ಸಂಸ​ದ ಸಾಂಸ್ಕೃ​ತಿಕ ಮತ್ತು ಕ್ರೀಡಾ ಮ​ಹೋ​ತ್ಸ​ವ ಅಂಗ​ವಾಗಿ ಎ​ರಡು ದಿ​ನ​ಗಳ ಕಾಲ ನ​ಡೆದ ಅಂತಾರಾಷ್ಟ್ರೀಯ ಗಾ​ಳಿ​ಪಟ ಉ​ತ್ಸವ ಹಾಗೂ ಸಾಂಸ್ಕೃ​ತಿಕ ಕಾ​ರ್ಯ​ಕ್ರ​ಮ ಹು​ಬ್ಬ​ಳ್ಳಿಗರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಯಿತು. ಶು​ಕ್ರವಾರ ರಾತ್ರಿ ಸಂಪ​ನ್ನ​ಗೊಂಡಿತು.

ಗಾಳಿಪಟ ಉ​ತ್ಸ​ವ​ಕ್ಕೆ ನೆರೆ ರಾಷ್ಟ್ರ, ನೆರೆ ರಾಜ್ಯ ಹಾಗೂ ರಾ​ಜ್ಯದ ವಿ​ವಿ​ಧೆ​ಡೆ​ಯಿಂದ ಆಗಮಿಸಿದ್ದರು. ಗಾ​ಳಿ​ಪಟ ಕ​ಲಿ​ಗಳು ಬಾನಂಗಳದಲ್ಲಿ ಹಾ​ರಾ​ಡಿಸಿದ ಬಣ್ಣ ಬಣ್ಣದ ಗಾಳಿಪಟಗಳು ಮನಸೆಳೆದವು. ಎ​ರಡು ದಿ​ನ​ಗಳ ಕಾ​ಲವೂ ಮುಗಿಲೆತ್ತರದಲ್ಲಿ ರಾ​ರಾ​ಜಿ​ಸಿದ ಕ​ಲ​ರ್‌​ಫುಲ್‌ ಗಾ​ಳಿ​ಪ​ಟ​ಗಳು ಕಣ್ಮನ ಸೆ​ಳೆಯು​ವಲ್ಲಿ ಯ​ಶ​ಸ್ವಿ​ಯಾ​ದವು. ಅಮೆರಿಕಾ, ಸಿಂಗಾಪುರ, ಟರ್ಕಿ, ಆಸ್ಪ್ರೇಲಿಯಾ ಸೇರಿದಂತೆ ದೇ​ಶದ ನಾನಾ ಭಾ​ಗದ ಗಾ​ಳಿ​ಪ​ಟ​ ಕ​ಲಿ​ಗಳು ಪಾ​ಲ್ಗೊಂಡಿದ್ದು ವಿ​ಶೇ​ಷ​ವಾ​ಗಿತ್ತು.ನಗರದ ಅನೇಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಾ ಮುಂದು, ತಾ ಮುಂದು ಎನ್ನುತ್ತ ಭಿನ್ನ, ಭಿನ್ನ ಗಾಳಿಪಟಗಳನ್ನು ಹಾರಿಸುತ್ತ ವಿದೇಶಿಗರೊಂದಿಗೆ ಸ್ಪರ್ಧೆಯೊಡ್ಡಿ ಖುಷಿಪಟ್ಟರು. ಯುವಕರು, ಯುವತಿಯರು ಎನ್ನದೇ, ಪುಟಾಣಿ ಮಕ್ಕಳಾದಿಯಾಗಿ ಗಾಳಿಪಟ ತೇಲಿಬಿಟ್ಟು ಶಿಳ್ಳೆ, ಚಪ್ಪಾಳೆ ಹೊಡೆಯುತ್ತ, ಸೆಲ್ಫಿ ತೆಗೆದುಕೊಳ್ಳುತ್ತಾ ಸಂಭ್ರಮಿಸಿದ ದೃ​ಶ್ಯ​ಗಳು ಸಾ​ಮಾ​ನ್ಯ​ವಾ​ಗಿದ್ದ​ವು.

ಅ​ದ​ರಲ್ಲೂ ಶು​ಕ್ರ​ವಾರ ಬೆಳಗ್ಗೆ ನ​ಡೆದ ದೇಸಿ ಕ್ರೀಡೆ ಮಲ್ಲಗಂಬದಲ್ಲಿ ಮಕ್ಕಳು ಅದ್ಭುತ ಪ್ರದರ್ಶನ ನೀಡಿದರು. ಕುಸ್ತಿಯಲ್ಲಿ ಚಿಕ್ಕಮಕ್ಕಳಿಂದ ಹಿಡಿದು ವಿಶ್ವ ವಿದ್ಯಾಲಯದ ಹಂತದ ಪ್ರಶಸ್ತಿ ಪುರಸ್ಕೃತ ಕುಸ್ತಿಪಟುಗಳು ಮತ್ತು ರಾಜ್ಯ, ಅಂತಾರಾಜ್ಯ ಮಟ್ಟದ ಪ್ರಸಿದ್ಧ ಕುಸ್ತಿಪಟುಗಳ ಕಾದಾಟ ಕ್ರೀಡಾ ಪ್ರೇಕ್ಷಕರ ಮೈನವಿರೇಳಿಸುವಂತಿತ್ತು.

ರಂಜಿಸಿದ ಸಂಗೀತ

ಧಾ​ರ​ವಾಡ ಸಂಸದ ಸಾಂಸ್ಕೃ​ತಿಕ ಮತ್ತು ಕ್ರೀಡಾ ಮ​ಹೋ​ತ್ಸ​ವದಲ್ಲಿ ಶು​ಕ್ರ​ವಾ​ರ ನ​ಡೆದ ಸಾಂಸ್ಕೃತಿಕ ಕಾ​ರ್ಯ​ಕ್ರ​ಮ​ದಲ್ಲಿ ಖ್ಯಾತ ಗಾ​ಯಕ ರ​ಘು​ ದೀ​ಕ್ಷಿ​ತ್‌, ಬಿ​ಗ್‌​ಬಾಸ್‌ 11ರ ವಿ​ನ್ನರ್‌ ಹ​ನು​ಮಂತ ಲ​ಮಾಣಿ ಆ​ಕ​ರ್ಷ​ಣಿಯ ಕೇಂದ್ರ​ಬಿಂದು ಆ​ಗಿ​ದ್ದರು. ಹ​ನು​ಮಂತ ಲ​ಮಾಣಿ ಜಾ​ನ​ಪದ ಸೊ​ಡ​ಗಿ​ನ ​ಹಾಡು, ಹಾ​ಸ್ಯ​ಭ​ರಿತ ಮಾ​ತು​ಗ​ಳಿಗೆ ಜ​ನರು ಕೇಕೆ, ಶಿ​ಳ್ಳೆ, ಚ​ಪ್ಪಾಳೆ ತಟ್ಟಿ ಸಂಭ್ರ​ಮಿ​ಸಿ​ದರೆ, ರಘು ದೀ​ಕ್ಷಿತ್‌ ಅ​ವರ ಹಾ​ಡಿಗೆ ಜ​ನರು ಕು​ಣಿದು ಕು​ಪ್ಪ​ಳಿ​ಸಿ​ದ​ರು. ನಂತರ ನ​ಡೆದ ಸ​ಮಾ​ರೋಪ ಸ​ಮಾ​ರ​ಭ​ದಲ್ಲಿ ಕೇಂದ್ರ ಸ​ಚಿವ ಪ್ರಹ್ಲಾದ ಜೋಶಿ, ಶಾ​ಸಕ ಮ​ಹೇಶ ಟೆಂಗಿ​ನಕಾಯಿ ಸೇ​ರಿ​ದಂತೆ ಅ​ನೇಕ ಗ​ಣ್ಯರು ಉ​ಪ​ಸ್ಥಿ​ತ​ರಿ​ದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ