ಗದಗ: ಮಾ. 11ರಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಗರದ ಎಪಿಎಂಸಿ ಯಾರ್ಡ್ನಲ್ಲಿರುವ ಕೆ. ಎಚ್. ಪಾಟೀಲ್ ಸಭಾಭವನದಲ್ಲಿ ಅದ್ಧೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಸುವರ್ಣ ಮದರಿಮಠ ಹೇಳಿದರು. ಅವರು ಶನಿವಾರ ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ತೋಂಟದಾರ್ಯ ಮಠದ ಡಾ. ಸಿದ್ದರಾಮ ಮಹಾಸ್ವಾಮೀಜಿಗಳು ವಹಿಸುವರು. ಕಾರ್ಯಕ್ರಮವನ್ನು ಹೈಟೆಕ್ ಮ್ಯಾಗನೇಟಿಕ್ ಎಲೆಕ್ಟ್ರಾನಿಕ್ ಪ್ರೈ. ಲಿಂ. ವ್ಯವಸ್ಥಾಪಕ ನಿರ್ದೇಶಕಿ ಉಮಾ ರೆಡ್ಡಿ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ವೈಶಾಲಿ ಎಂ. ಎಲ್. ಆಗಮಿಸಲಿದ್ದಾರೆ ಎಂದು ಹೇಳಿದರು. ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಗೌರವ ಸನ್ಮಾನ ಜರುಗಲಿದೆ, ಹುಬ್ಬಳ್ಳಿಯ ಮಜೇಥಿಯಾ ಫೌಂಡೇಶನ್ ರಮಿಲಾ ಮೆಜೇಥಿಯಾ, ಸುವಿಜಯ ಅಗ್ರಿವೆಂಚರ್ ಗದುಗಿನ ಜಯಶ್ರೀ ಹುಬ್ಬಳ್ಳಿ ಹಾಗೂ ಅಭಿಯಾನ ಟ್ರೇಡಿಂಗ್ ಕಂಪನಿಯ ಮಂಗಳಾ ಯಳಮಲಿ ಅವರಿಗೆ ಜಿಲ್ಲಾ ವಾಣಿಜ್ಯೋದ್ಯಮ ಮಹಿಳಾ ಘಟಕದಿಂದ ಸನ್ಮಾನಿಸಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ನಗರದ ವಿವಿಧ ಸಂಘಟನೆಯ ಸುಮಾರು 500 ರಿಂದ 600 ಮಹಿಳೆಯರು ಭಾಗವಹಿಸುವ ನೀರಿಕ್ಷೆಯಿದೆ ಎಂದು ತಿಳಿಸಿದರು. 2025ಕ್ಕೆ ವಾಣಿಜ್ಯೋದ್ಯಮ ಸಂಸ್ಥೆ 50ನೇ ವರ್ಷಾಚರಣೆ ಆಚರಿಸಿಕೊಳ್ಳಲಿದ್ದು, ಅತ್ಯಂತ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಅದೇ ರೀತಿ ಪ್ರತಿ ತಿಂಗಳು ಸಂಸ್ಥೆಯ ಸಭೆ ನಡೆಸಲಾಗುವುದು, ಜೊತೆಗೆ ವರ್ಷಕ್ಕೊಮ್ಮೆ ಸಾಧಾರಣ ಸಭೆ ನಡೆಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಹಿಂದಿನ ವರ್ಷದ ಲೆಕ್ಕ ನೀಡುವುದು ಸಭೆಯ ಉದ್ದೇಶ ಎಂದರು. ಸುದ್ದಿಗೋಷ್ಠಿಯಲ್ಲಿ ಜಯಶ್ರೀ ಪಾಟೀಲ, ಜಯಶ್ರೀ ಹುಬ್ಬಳ್ಳಿ, ವೀಣಾ ಪೊತ್ನಿಸ್, ಜ್ಯೋತಿ ದಾನಪ್ಪಗೌಡರ, ಜಯಶ್ರೀ, ಸುಜಾತಾ ಗುಡಿಮನಿ, ಭಾಗ್ಯಶ್ರೀ ಕುರಡಗಿ, ಸುಷ್ಮಾ ಜಾಲಿ, ಮೇಘಾ ಮಲ್ಲಾಡದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.