ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಮದ್ದೂರು ಪುರಸಭೆಯಲ್ಲಿನ ಹಗರಣ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಕೆ: ಅಮಿತ್ ತಾರದಾಳೆ

KannadaprabhaNewsNetwork | Published : Dec 5, 2024 12:32 AM

ಹಗರಣಗಳ ಬಗ್ಗೆ ಒಂದೇ ದಿನದಲ್ಲಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಬೆಳಗಾವಿ ಅಧಿವೇಶನದ ನಂತರ ಮತ್ತೊಮ್ಮೆ ಪುರಸಭೆಗೆ ಭೇಟಿ ನೀಡಿ ಕಡತಗಳ ಕುರಿತು ಆಳವಾಗಿ ಪರಿಶೀಲನೆ ಮಾಡಿದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

ಕನ್ನಡಪ್ರಭ ವಾರ್ತೆ ಮದ್ದೂರು

ಪುರಸಭೆಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಪೌರಾಡಳಿತ ನಿರ್ದೇಶನಾಲಯದ ಅಭಿವೃದ್ಧಿ ಸಹಾಯಕ ನಿರ್ದೇಶಕ ಅಮಿತ್ ತಾರದಾಳೆ ಹೇಳಿದರು.

ಪಟ್ಟಣದ ಪುರಸಭೆ ಕಂದಾಯ ವಿಭಾಗದಲ್ಲಿ ಕೃಷಿ ಭೂಮಿಗೆ ಅಕ್ರಮವಾಗಿ ಇ-ಸ್ವತ್ತು ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಎಲ್ಲಾ ಹಗರಣಗಳ ಕುರಿತ ಕಡತಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.

ಹಗರಣಗಳ ಬಗ್ಗೆ ಒಂದೇ ದಿನದಲ್ಲಿ ತನಿಖೆ ನಡೆಸಲು ಸಾಧ್ಯವಾಗುವುದಿಲ್ಲ. ಬೆಳಗಾವಿ ಅಧಿವೇಶನದ ನಂತರ ಮತ್ತೊಮ್ಮೆ ಪುರಸಭೆಗೆ ಭೇಟಿ ನೀಡಿ ಕಡತಗಳ ಕುರಿತು ಆಳವಾಗಿ ಪರಿಶೀಲನೆ ಮಾಡಿದ ಬಳಿಕ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅಧಿಕಾರಿ ಅಮಿತ್ ತಾರದಾಳೆ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಇ-ಸ್ವತ್ತು ಹಗರಣದ ಬಗ್ಗೆ ಮುಖ್ಯಾಧಿಕಾರಿ ಮೀನಾಕ್ಷಿ ಹೆಸರು ಉಲ್ಲೇಖ: ಜೆಡಿಎಸ್ ಸದಸ್ಯರಿಗೆ ತರಾಟೆ

ಕನ್ನಡಪ್ರಭ ವಾರ್ತೆ ಮದ್ದೂರು

ಪುರಸಭೆಯಲ್ಲಿನ ಹಗರಣದ ಬಗ್ಗೆ ಪೌರಾಡಳಿತ ನಿರ್ದೇಶನಲಯದ ತನಿಖಾಧಿಕಾರಿಗಳ ತಂಡಕ್ಕೆ ದೂರು ನೀಡುವಾಗ ತಮ್ಮ ಹೆಸರನ್ನು ಉಲ್ಲೇಖ ಮಾಡಿರುವ ಬಗ್ಗೆ ಮುಖ್ಯಾಧಿಕಾರಿ ಮೀನಾಕ್ಷಿ ಜೆಡಿಎಸ್ ಸದಸ್ಯರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ನಡೆಯಿತು.

ಅಕ್ರಮ ಇ-ಸ್ವತ್ತು ಹಗರಣ ಬಗ್ಗೆ ತನಿಖೆ ನಡೆಸಲು ಪುರಸಭೆಗೆ ಆಗಮಿಸಿದ್ದ ಅಧಿಕಾರಿಗಳಿಗೆ ಪುರಸಭೆ ಉಪಾಧ್ಯಕ್ಷ ಟಿ.ಆರ್. ಪ್ರಸನ್ನ ಕುಮಾರ್ ಮದ್ದೂರಿನ ಸರ್ವೇ ನಂಬರ್ 332, 2ರಲ್ಲಿನ ಜಮೀನಿನಲ್ಲಿ ಪ್ರಾಧಿಕಾರದಿಂದ ಭೂ ಪರಿವರ್ತನೆ ಮಾಡಿಸದೆ ಹಾಗೂ ನಕ್ಷೆ ವಿನ್ಯಾಸ ಅನುಮೋದನೆ ಸಹ ಪಡೆಯದೆ ಹಾಗೂ ಕಟ್ಟಡ ಪರವಾನಿಗೆ ತೆಗೆದುಕೊಳ್ಳದೆ ಅನಧಿಕೃತವಾಗಿ ಕಟ್ಟಡ ನಿರ್ಮಿಸಿರುವ ವಿಚಾರದಲ್ಲಿ ತನಿಖಾಧಿಕಾರಿಗಳಿಗೆ ದೂರು ನೀಡುವಾಗ ತಮ್ಮ ಹೆಸರನ್ನು ಪ್ರಸ್ತಾಪ ಮಾಡಿರುವ ಬಗ್ಗೆ ಮೀನಾಕ್ಷಿ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ಜೆಡಿಎಸ್ ಸದಸ್ಯರು ಹಾಗೂ ಮುಖ್ಯಾಧಿಕಾರಿ ಮೀನಾಕ್ಷಿ ನಡುವೆ ಮಾತಿನ ಚಕಮಕಿ ನಡೆಯಿತು. ಹಗರಣ ನಡೆದ ವೇಳೆ ನಾನು ಪುರಸಭೆ ಮುಖ್ಯಾಧಿಕಾರಿಯಾಗಿಲಿಲ್ಲ. ಆದರೂ ಸಹ ಪ್ರಸನ್ನಕುಮಾರ್ ಅವರ ಖಾತೆಗೆ ಸಂಬಂಧಿಸಿದಂತೆ ದಾಖಲೆ ನಾಶಪಡಿಸಲಾಗಿದೆ ಎಂದು ತಮ್ಮ ವಿರುದ್ಧ ದೂರು ನೀಡಿರುವ ಬಗ್ಗೆ ಮೀನಾಕ್ಷಿ ತನಿಖಾಧಿಕಾರಿಗಳ ಎದುರೇ ಜೆಡಿಎಸ್ ಸದಸ್ಯರಾದ ಮಹೇಶ್, ಪ್ರಿಯಾಂಕಾ, ಮನೋಜ್ ಕುಮಾರ್ ಹಾಗೂ ನಂದೀಶ್ ವಿರುದ್ಧ ಹರಿಹಾಯ್ದರು.

ನಂತರ ಮಧ್ಯಪ್ರವೇಶ ಮಾಡಿದ ತನಿಖಾಧಿಕಾರಿಗಳು ಹಗರಣದ ಬಗ್ಗೆ ತನಿಖೆ ನಡೆಸಲಾಗುವುದು. ಮೀನಾಕ್ಷಿ ಅವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ ಅವರ ವಿರುದ್ಧವು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ದೂರಿನಲ್ಲಿದ್ದ ಮೀನಾಕ್ಷಿ ಅವರ ಹೆಸರನ್ನು ಕೈ ಬಿಡಲಾಯಿತು.