ಕನ್ನಡಪ್ರಭ ವಾರ್ತೆ ಪಾವಗಡಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿಕ್ಷಣ ಇಲಾಖೆಯ ನಿಯಮಗಳನ್ನೇ ಗಾಳಿಗೆ ತೂರಿದ ಮುಖ್ಯ ಶಿಕ್ಷಕರೊಬ್ಬರು ಪಿಎಸ್ಟಿ (ಡಿಇಡಿ)ವೃಂದ, ಶಿಕ್ಷಕರ ನೇಮಕಾತಿ ಸ್ಥಳಕ್ಕೆ ಜಿಪಿಟಿ (ಬಿಇಡಿ) ತರಬೇತಿ ಪಡೆದ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ ಅರ್ಹತೆ ಹೊಂದಿದ ಇಬ್ಬರು ಡಿಇಡಿ ತರಬೇತಿಯ ಅಭ್ಯರ್ಥಿಗಳಿಗೆ ಅನ್ಯಾಯವೆಸಗಿರುವ ಘಟನೆ ತಾಲೂಕಿನ ಓಬಳಾಪುರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬೆಳಕಿಗೆ ಬಂದಿದೆ.ತಾಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ವ್ಯಾಪ್ತಿಯ ಕೋಟಗುಡ್ಡ ಕ್ಲಸ್ಟರ್ ಓಬಳಾಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 150ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಖಾಯಂ ಶಿಕ್ಷಕರ ಸಂಖ್ಯೆ ಕಡಿಮೆ ಇರುವ ಕಾರಣ ಪ್ರಸಕ್ತ ಸಾಲಿಗೆ ಇದೇ ಓಬಳಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಪಾಠಶಾಲೆಗೆ ನಿಯಮನುಸಾರ ಡಿಇಡಿ ತರಬೇತಿ ಪಡೆದ ಇಬ್ಬರು ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುವಂತೆ ಶಿಕ್ಷಣ ಇಲಾಖೆ ಅದೇಶ ಜಾರಿಪಡಿಸಿದೆ.
ತಾಲೂಕಿನ ಓಬಳಾಪುರ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಡಿಇಡಿ ತರಬೇತಿ ಪಡೆದ ಇಬ್ಬರು ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆಯಿಂದ ಆದೇಶ ಜಾರಿಪಡಿಸಿದೆ. ಇದರ ಅನ್ವಯ ಮೀಸಲಿರುವ ಎರಡು ಅತಿಥಿ ಶಿಕ್ಷಕರ ಹುದ್ದೆ ನೇಮಕಾತಿಗೆ ಡಿಇಡಿ ಇಬ್ಬರು ಹಾಗೂ ಬಿಇಡಿ ತರಬೇತಿ ಪಡೆದ ಇಬ್ಬರು ಸೇರಿ ಒಟ್ಟು ನಾಲ್ಕು ಮಂದಿ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ಶಿಕ್ಷಕರು ಡಿಇಡಿ ಆದವರನ್ನು ಕೈಬಿಡುವ ಮೂಲಕ ಬಿಇಡಿ ತರಬೇತಿ ಪಡೆದ ಇಬ್ಬರನ್ನು ನೇಮಕಾತಿಗೊಳಿಸಿ ನಿಯಮ ಉಲ್ಲಂಘಿಸಿದ್ದಾರೆ. ಇದರಿಂದ ನನ್ನಗೆ ಅನ್ಯಾಯವಾಗಿದೆ. ಶಿಕ್ಷಣ ಇಲಾಖೆಯ ನಿಯಮನುಸಾರ ಎಲ್ಲ ಅರ್ಹತೆ ಇದ್ದರೂ ಅನ್ಯಾಯವೆಸಗಿದ್ದಾರೆ. ನಮಗೆ ನ್ಯಾಯ ಕಲ್ಪಿಸಲು ಶಾಸಕರು, ಬಿಇಒ ಹಾಗೂ ಡಿಡಿಪಿಐ ಕಚೇರಿಗೆ ದೂರು ಸಲ್ಲಿಸಲಾಗಿದೆ ಎಂದು ವಂಚಿತ ಡಿಇಡಿ ತರಬೇತಿಯ ಅಭ್ಯರ್ಥಿಗಳಾದ ಮನುಪ್ರಸಾದ್ ಹಾಗೂ ನಾಗಶ್ರೀ ಅಳಲು ತೋಡಿಕೊಂಡಿದ್ದಾರೆ.
ಫೋಟೋ 1ಪಿವಿಡಿ2ಓಬಳಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ