- ಕಾಲೇಜು, ಗ್ರಾಮೀಣ ಯುವತಿಯರೇ ದಂಧೆಕೋರರ ಟಾರ್ಗೆಟ್
ವೇಶ್ಯಾವಾಟಿಕೆ, ಗ್ರಾಮೀಣ ಯುವತಿಯರೇ ಟಾರ್ಗೆಟ್, ಸಲೂನ್, ಸ್ಪಾ
ವೇಶ್ಯಾವಾಟಿಕೆ, ಗ್ರಾಮೀಣ ಯುವತಿಯರೇ ಟಾರ್ಗೆಟ್, ಸಲೂನ್, ಸ್ಪಾ, ಮಂಡ್ಯಮಂಡ್ಯ ವೇಶ್ಯಾವಾಟಿಕೆ ಅಡ್ಡವಾಗುತ್ತಿರುವಂತೆ ಕಂಡುಬರುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಕಾಲೇಜು ವಿದ್ಯಾರ್ಥಿನಿಯರು ಹಾಗೂ ಗ್ರಾಮೀಣ ಯುವತಿಯರನ್ನೇ ದಂಧೆ ನಡೆಸುತ್ತಿರುವವರು ಟಾರ್ಗೆಟ್ ಮಾಡಿಕೊಂಡಿರುವುದು ಆಘಾತಕಾರಿಯೂ ಆಗಿದೆ.ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಕ್ಲೌಡ್-೧೧ ಹೆಸರಿನ ಸಲೂನ್-ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಒಡನಾಡಿ ಸಂಸ್ಥೆ ಹಾಗೂ ಪಶ್ಚಿಮ ಠಾಣೆ ಪೊಲೀಸರು ನಡೆಸಿದ ದಾಳಿಯಿಂದ ಬೆಳಕಿಗೆ ಬಂದಿದೆ. ಇದರ ಹಿಂದಿನ ಮತ್ತೊಂದು ಸತ್ಯಸಂಗತಿ ಎಂದರೆ ಸಲೂನ್ನ ಮಾಲಕಿ ಮೈಸೂರಿನ ಪ್ರತಿಷ್ಠಿತ ಹೋಟೆಲ್ನಲ್ಲಿ ಇದೇ ದಂಧೆಯನ್ನು ನಡೆಸಿ ಜೈಲು ವಾಸ ಅನುಭವಿಸಿದ್ದಳು.
ತದನಂತರದಲ್ಲಿ ಮೈಸೂರನ್ನು ಬಿಟ್ಟು ಮಂಡ್ಯವನ್ನು ಕೇಂದ್ರಸ್ಥಾನವಾಗಿಸಿಕೊಂಡು ಮತ್ತೆ ಅದೇ ದಂಧೆಯನ್ನು ಶುರು ಮಾಡಿದ್ದಳು. ಕಳೆದ ಆರು ತಿಂಗಳ ಹಿಂದಷ್ಟೇ ಸಲೂನ್ ಮೇಲೆ ದಾಳಿ ನಡೆದಾಗಲೂ ವೇಶ್ಯಾವಾಟಿಕೆ ನಡೆಯುತ್ತಿರುವುದು ಬಯಲಾಗಿತ್ತು. ಆದರೂ ಕಾನೂನಿನ ಭಯವಿಲ್ಲದೆ ಮತ್ತೆ ವಿಕೃತ ದಂಧೆಯನ್ನು ಮುಂದುವರೆಸಿದ್ದಾರೆ.
ವಿದ್ಯಾರ್ಥಿನಿಯರು, ಹಳ್ಳಿ ಯುವತಿಯರು ಟಾರ್ಗೆಟ್:
ಈ ಆಕರ್ಷಣೆಗೆ ಒಳಗಾದವರಲ್ಲಿ ಕೆಲವು ಯುವತಿಯರು ಕೊನೆಯ ಹಂತದಲ್ಲಿ ಎಚ್ಚೆತ್ತುಕೊಳ್ಳುವರೆಂಬುದು ಕಂಡುಬಂದರೆ ಅವರ ನಗ್ನ, ಅರೆನಗ್ನ ಫೋಟೋ, ವೀಡಿಯೋಗಳನ್ನು ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡುವುದಾಗಿ ಹೆದರಿಸಿ ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡುವಂತಹ ಪ್ರಯತ್ನಗಳೂ ನಡೆಯುತ್ತಿರುವುದಾಗಿ ತಿಳಿದುಬಂದಿದೆ.
ಸಲೂನ್, ಸ್ಪಾ ಎನ್ನುವುದು ಹೆಸರಿಗಷ್ಟೇ:
ಕ್ಲೌಡ್-೧೧ ಸಲೂನ್ ಎಂದಿದ್ದರೂ ಒಳಗೆ ಸಲೂನ್ ನಡೆಯುತ್ತಲೇ ಇರಲಿಲ್ಲ. ಕಳೆದೊಂದು ವಾರದಿಂದ ಸಲೂನ್ ಕಾರ್ಯಚಟುವಟಿಕೆಗಳ ಮೇಲೆ ಒಡನಾಡಿ ಸಂಸ್ಥೆ ಹದ್ದಿನ ಕಣ್ಣಿಟ್ಟಿತ್ತು. ಅಲ್ಲಿಗೆ ಬರುವವರೆಲ್ಲಾ ವಿಟಪುರುಷರೇ ಆಗಿದ್ದರು. ಹೆಣ್ಣು ಮಕ್ಕಳು ಒಳಗೆ ಹೋಗುವುದು, ಬರುವುದು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಅಮಾಯಕ ಹೆಣ್ಣು ಮಕ್ಕಳನ್ನು ಯಾವ ರೀತಿ ಆಕರ್ಷಿಸಿ ದಂಧೆಯಲ್ಲಿ ತೊಡಗಿಸಲಾಗುತ್ತಿದೆ ಎಂಬುದನ್ನು ಅರಿತು ದಾಳಿ ನಡೆಸಲಾಗಿದೆ.
ಅಮಾಯಕರಾಗಿರುವ ಮಂಡ್ಯದ ಜನರು ತಮ್ಮ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈಗಲೇ ಎಚ್ಚರಗೊಳ್ಳಬೇಕಿದೆ. ಇಂತಹ ದಂಧೆಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಅವರ ಚಲನ-ವಲನಗಳ ಮೇಲೆ ನಿಗಾ ಇಡಬೇಕು. ಇಂತಹ ವಿಕೃತ, ಮೋಸದ ಜಾಲಕ್ಕೆ ಸಿಲುಕದಂತೆ ರಕ್ಷಣೆ ಮಾಡುವುದಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ.--------------------------------
ಜವಾಬ್ದಾರಿ ಮರೆತ ಸಂಸ್ಥೆಗಳುವಿದ್ಯಾರ್ಥಿಗಳು ಕಲಿಯಲು ಬರುವ ಸ್ಥಳದ ಮೂಗಿನ ಕೆಳಗೇ ಇಂತಹ ವಿಕೃತಿಗಳು ನಡೆಯುತ್ತಿವೆ ಎಂದಾದರೆ ನಗರಸಭೆ, ಮಾನವ ಹಕ್ಕುಗಳ ಆಯೋಗ, ಮಕ್ಕಳ ಕಲ್ಯಾಣ ಸಮಿತಿ ಯಾವ ಜವಾಬ್ದಾರಿ ನಿರ್ವಹಿಸುತ್ತಿವೆ ಎಂಬುದು ಪ್ರಶ್ನೆಯಾಗಿದೆ.
ವಾಣಿಜ್ಯ ತೆರಿಗೆಯನ್ನು ಸಂಗ್ರಹಿಸುವ ನಗರಸಭೆ ಸಲೂನ್, ಸ್ಪಾಗೆ ಪರವಾನಗಿ ಪಡೆದಿವೆಯೇ, ಇಲ್ಲವೇ, ಪರವಾನಗಿಯನ್ನು ನವೀಕರಿಸಲಾಗಿದೆಯೇ ಎಂಬ ಬಗ್ಗೆ ಗಮನಹರಿಸಬೇಕು. ಯಾವುದೇ ಅನುಮತಿಯನ್ನು ಪಡೆಯದೆ ಸಲೂನ್, ಸ್ಪಾ ನಡೆಯಲು ಅವಕಾಶ ನೀಡಿರುವುದೇಕೆ. ಪರವಾನಗಿ ನೀಡುವುದಷ್ಟೇ ನಗರಸಭೆ ಕೆಲಸವೇ. ಒಳಗಡೆ ಏನು ಬೇಕಾದರೂ ನಡೆಸುವುದಕ್ಕೆ ಅವಕಾಶವಿದೆಯೇ ಎನ್ನುವುದು ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ನಗರಸಭೆ ಅಧಿಕಾರಿಗಳು ಸಾಮಾಜಿಕ ಜವಾಬ್ದಾರಿ, ಬದ್ಧತೆ, ಕಾಳಜಿ ಮರೆತಿರುವುದು ಸ್ಪಷ್ಟವಾಗಿ ಕಂಡುಬಂದಿದೆ.ಮಾನವ ಹಕ್ಕುಗಳ ಆಯೋಗ ವೇಶ್ಯಾವಾಟಿಕೆ ದಂಧೆಗೆ ಸ್ಥಳಾವಕಾಶ ಒದಗಿಸುವಂತಹ ಬಾಡಿಗೆಯ ಕ್ಷೇತ್ರವನ್ನು ಜಪ್ತಿಗೊಳಿಸುವ ಅಧಿಕಾರವನ್ನು ನೀಡಲಾಗಿದೆ. ಎಲ್ಲಾ ಜಿಲ್ಲೆಗಳಿಗೂ ಆದೇಶವನ್ನು ತಲುಪಿಸಲಾಗಿದೆ. ಮಾನವ ಹಕ್ಕುಗಳ ಆಯೋಗವೂ ಇಂತಹ ಕೇಂದ್ರಗಳು ಹಾಗೂ ಅವುಗಳ ಕಾರ್ಯಚಟುವಟಿಕೆಗಳ ಮೇಲೆ ನಿಗಾ ವಹಿಸಿ ಕ್ರಮ ಜರುಗಿಸಬೇಕಿದೆ.
ಮಕ್ಕಳು ಶಿಕ್ಷಣ ಕಲಿಯುವ ಸ್ಥಳದ ಕೆಳಭಾಗದಲ್ಲೇ ಇಂತಹ ವಿಕೃತಿ ನಡೆಯುತ್ತಿರುವ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯವರು ನಗರಸಭೆಯವರಿಗೆ ನೋಟೀಸ್ ನೀಡಿ ಪರವಾನಗಿ ನೀಡಿರುವ ಕ್ರಮವನ್ನು ಪ್ರಶ್ನಿಸಬೇಕಿದೆ. ಇಲ್ಲಿ ಯಾರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದಿರುವುದರಿಂದಲೇ ವೇಶ್ಯಾವಾಟಿಕೆ ದಂಧೆ ನಿರಾತಂಕವಾಗಿ ಶಿಕ್ಷಣ ಸಂಸ್ಥೆಗಳ ಆಸು-ಪಾಸಿನಲ್ಲೇ ನಡೆಯುವುದಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವುದು ಸ್ಪಷ್ಟವಾಗಿದೆ.--------------------------------
ವೇಶ್ಯಾವಾಟಿಕೆಗೆ ಮಂಡ್ಯ ಈಗ ಅಡ್ಡ. ಮೈಸೂರಿಗಿಂತ ಮಂಡ್ಯವನ್ನು ಅಡ್ಡ ಮಾಡಿಕೊಳ್ಳುತ್ತಿರುವ ಮಾಹಿತಿ ಬಂದಿದೆ. ಮಂಡ್ಯದ ಜನರು ಅಮಾಯಕರು. ಇಂತಹ ಅವಮಾನಗಳನ್ನು ಸಹಿಸುವ ಸ್ಥಿತಿಯಲ್ಲಿಲ್ಲ. ಮಕ್ಕಳು ಕಲಿಯುವ ಜಾಗದಲ್ಲಿ ಇಂತಹ ವಂಚಕ ಜಾಲ ನಡೆಯುವುದರಿಂದ ಅದು ಹೆಣ್ಣು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಅದರಿಂದ ಅವರು ಹತಾಶೆಗೊಳಗಾಗುತ್ತಾರೆ. ಇಂತಹ ಜಾಲಗಳಿಗೆ ಸಿಲುಕುತ್ತಾರೆ. ನಾವೂ ಕೂಡ ಇಂತಹ ದಂಧೆಗಳ ವಿರುದ್ಧ ಹೋರಾಡುತ್ತಲೇ ಇದ್ದೇವೆ. ಜನರೂ ಜಾಗೃತಗೊಂಡು ಈ ದಂಧೆಯನ್ನು ಶಾಶ್ವತವಾಗಿ ಕೊನೆಗಾಣಿಸಬೇಕು.- ಸ್ಟ್ಯಾನ್ಲಿ, ಒಡನಾಡಿ ಸಂಸ್ಥೆ