ಉರುಳು ಸುತ್ತಿಕೊಂಡ ಹುಲಿ ಓಡಅಡುತ್ತಿದೆಯೇ? ಮೂಡಿದೆ ಅನುಮಾನ

KannadaprabhaNewsNetwork |  
Published : Jun 14, 2026, 01:15 AM IST
ಸಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಪಂಡರವಳ್ಳಿ ಭಾಗ ಹುಲಿಗಳ ಆವಾಸಸ್ಥಾನದಲ್ಲಿ ಉರುಳು ಸುತ್ತಿಕೊಂಡು ಹುಲಿಯೊಂದು ಓಡಾಡುತ್ತಿರುವ ಅನುಮಾನ ಮೂಡಿದೆ.

ಕ್ಯಾಮೆರಾದಲ್ಲಿ ಹುಲಿ ಉರುಳಿಗೆ ಸಿಕ್ಕಿದೆ ಎನ್ನುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ಪಂಡರವಳ್ಳಿ ಭಾಗ ಹುಲಿಗಳ ಆವಾಸಸ್ಥಾನದಲ್ಲಿ ಉರುಳು ಸುತ್ತಿಕೊಂಡು ಹುಲಿಯೊಂದು ಓಡಾಡುತ್ತಿರುವ ಅನುಮಾನ ಮೂಡಿದೆ.

ಮುತ್ತೋಡಿ ವನ್ಯಜೀವಿ ವಿಭಾಗ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹುಲಿಗಳ ಸಂಚಾರ ಸರ್ವೇ ಸಾಮಾನ್ಯ. ಹೀಗಿರುವಾಗ ಇದೇ ಪ್ರದೇಶದಲ್ಲಿ ಹುಲಿಗೆ ಉರುಳು ಹಾಕಿದ್ದರೆ ಅದು ಅಕ್ಷಮ್ಯ ಅಪರಾಧವಾಗಿದೆ. ಮಾಹಿತಿ ಪ್ರಕಾರ ಹುಲಿಯೊಂದು ಉರುಳಿಗೆ ಸಿಲುಕಿ ತಪ್ಪಿಸಿಕೊಂಡಿದ್ದರೂ ಆ ಉರುಳು ಹುಲಿಗೆ ಸಿಕ್ಕಿಕೊಂಡಿದೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಅರಣ್ಯ ಇಲಾಖೆ ಹುಲಿ ಕಾಣಿಸಿಕೊಂಡ ಪ್ರದೇಶದಲ್ಲಿ ಕ್ಯಾಮರಾ ಅಳವಡಿಸಿದೆ. ಆದರೆ, ಅರಣ್ಯ ಇಲಾಖೆ ಕ್ಯಾಮೆರಾದಲ್ಲಿ ಈವರೆಗೆ ಹುಲಿಕಾಣಿಸಿಕೊಂಡಿಲ್ಲ.

ಇದರ ಹೊರತಾಗಿ ಅದೇ ಭಾಗದಲ್ಲಿ ಹುಲಿ, ಕಡವೆ ಒಂದನ್ನು ಬೇಟೆಯಾಡಿ ತಿಂದಿರುವ ಕಳೇಬರ ಸಿಕ್ಕಿದೆ. ಹೀಗಿರುವಾಗ ಉರುಳು ಸುತ್ತಿಕೊಂಡಿರುವ ಹುಲಿ, ಬೇಟೆಯಾಡಿದೆಯೇ ಎಂಬ ಅನುಮಾನವೂ ಇದೆ. ಸ್ಥಳೀಯ ಮೂಲಗಳ ಪ್ರಕಾರ ಗಂಡು ಮತ್ತು ಹೆಣ್ಣು ಹುಲಿ ಒಟ್ಟಿಗೆ ಸಂಚಾರ ನಡೆಸುತ್ತಿವೆ. ಈ ಮಧ್ಯೆ ಗಂಡು ಹುಲಿ ಉರುಳಿಗೆ ಸಿಲುಕಿರಬಹುದು. ಉರುಳಿನಿಂದ ಹೊರಬಂದರೂ ಉರುಳಿನ ತಂತಿಗಳು ಹುಲಿ ದೇಹದೊಳಗೆ ಹಾಗೇ ಇರಬಹುದು. ಹೀಗಾಗಿಯೇ ಪಂಡರವಳ್ಳಿ ಭಾಗದಲ್ಲಿ ಹುಲಿ ಘರ್ಜನೆ ಹೆಚ್ಚಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದರ ಮಧ್ಯೆ ಪಂಡರವಳ್ಳಿ ಭಾಗದ ತೋಟವೊಂದರಲ್ಲಿ ಅಳವಡಿಸಿರುವ ಕ್ಯಾಮೆರಾದಲ್ಲಿ ಹುಲಿ ಉರುಳಿಗೆ ಸಿಕ್ಕಿದೆ ಎನ್ನುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಜೊತೆಗೆ ಹುಲಿ ಗಾಯಗೊಂಡಿರುವುದು ಆ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.

ಈ ರೀತಿ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಜಾಗೃತರಾಗಿದ್ದಾರೆ. ನಿರಂತರ ವಾಗಿ ಗಸ್ತು ಮಾಡುವುದು ಮಾತ್ರವಲ್ಲದೆ, ಜನರಲ್ಲಿಯೂ ಹುಲಿ ಬಗ್ಗೆ ಎಚ್ಚರಿಕೆ ನೀಡಲಾರಂಭಿಸಿದ್ದಾರೆ.

20 ಕಡೆ ಕ್ಯಾಮೆರಾ ಅಳವಡಿಕೆ:

ಪಂಡರವಳ್ಳಿ ಭಾಗದಲ್ಲಿ ಹುಲಿ ಉರುಳಿಗೆ ಸಿಕ್ಕಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಕನಿಷ್ಠ 20 ಕಡೆ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಹುಲಿ ಕಾಣಿಸಿಲ್ಲ. ಇನ್ನೊಂದು ವಿಶೇಷವೆಂದರೆ ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮೆರಾ ಇರುವ ಭಾಗದಲ್ಲಿಯೇ ಹುಲಿ ಕಡವೆಯೊಂದನ್ನು ಬೇಟೆಯಾಡಿ ತಿಂದಿರುವ ಕುರುಹುಗಳು ಲಭ್ಯವಾಗಿವೆ. ಹೀಗಿರುವಾಗ ಹುಲಿ ಉರುಳಿಗೆ ಸಿಲುಕಿದೆಯೋ ಅಥವಾ ಇದೆಲ್ಲ ವದಂತಿಯೇ ಎಂಬ ಗೊಂದಲ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಉಂಟಾಗಿದೆ.

---ಬಾಕ್ಸ್...

ಅಸ್ಸಾಂ, ಪಶ್ಚಿಮ ಬಂಗಾಳ ಕಾರ್ಮಿಕರಿಂದ ಹುಲಿಗಳಿಗೆ ಉರುಳು?

ಮಲೆನಾಡು ಭಾಗದಲ್ಲಿ ಭದ್ರಾ ಅಭಯಾರಣ್ಯ ಹುಲಿಗಳ ಆವಾಸಸ್ಥಾನಕ್ಕೆ ಹೆಸರುವಾಸಿ. ಮುತ್ತೋಡಿ, ಪಂಡರವಳ್ಳಿ ಸೇರಿದಂತೆ ಅಕ್ಕ ಪಕ್ಕದ ಎಲ್ಲ ಪ್ರದೇಶಗಳು ಹುಲಿಯ ಆವಾಸಸ್ಥಾನಕ್ಕೆ ಹೆಸರುವಾಸಿ. ಈ ಹಿಂದೆ ಪಂಡರವಳ್ಳಿಯಲ್ಲಿ ಹುಲಿಯೊಂದು ಮಹಿಳೆ ಮೇಲೆ ದಾಳಿ ಮಾಡಿ ಕೊಂದಿತ್ತು.

ಆಗ ಆ ಹುಲಿಯನ್ನು ಬೆಳಗಾವಿಗೆ ಕೊಂಡೊಯ್ದು ಬಿಡಲಾಗಿತ್ತು. ಅಂದು ಆ ಹುಲಿ ಮನುಷ್ಯರ ಮೇಲೆ ದಾಳಿ ಮಾಡಿದ ಹಿನ್ನೆಲೆಯಲ್ಲಿ ಕೊಲ್ಲಲಾಗಿತ್ತು. ಇದೆಲ್ಲವೂ ಹತ್ತು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹುಲಿಗಳನ್ನು ಅವುಗಳ ಆವಾಸಸ್ಥಾನದಲ್ಲಿಯೇ ಬಿಟ್ಟು ಅವುಗಳನ್ನು ಸಂರಕ್ಷಿಸುವ ಹೊರತಾಗಿ ಮಲೆನಾಡಿ ನಲ್ಲಿಯೇ ಹುಲಿಗಳನ್ನು ಕೊಲ್ಲುವ ಸಂಚು ನಡೆದಿದೆಯೇ ಎಂಬ ಅನುಮಾನವೂ ಮೂಡಿದೆ.

ಪ್ರಸ್ತುತ ಉರುಳಿಗೆ ಸಿಕ್ಕಿದೆ ಎನ್ನಲಾದ ಹುಲಿ ಇರುವುದು ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ. ಇಲ್ಲಿ ರೆಸಾರ್ಟ್ ಗಳ ನಿರ್ಮಾಣಕ್ಕಾಗಿ ಅಸ್ಸಾಂ, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳ ಕಾರ್ಮಿಕರು ಆಗಮಿಸಿದ್ದಾರೆ. ಹೀಗೆ ಆಗಮಿಸುವ ಕಾರ್ಮಿಕರು ಕಾಡುಪ್ರಾಣಿಗಳಿಗೆ ಉರುಳು ಹಾಕುವುದು ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಈ ಬಗ್ಗೆ ಹತ್ತು ಹಲವು ಪ್ರಕರಣಗಳು ದಾಖಲಾಗಿವೆ. ಇದರ ಮಧ್ಯೆ ಹುಲಿ ಉರುಳಿಗೆ ಸಿಕ್ಕಿದೆ ಎನ್ನುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ....ಬಾಕ್ಸ್‌‌‌‌....

ಪ್ರಕರಣ ದಾಖಲಿಸದ ಅಧಿಕಾರಿಗಳು

ಉರುಳಿಗೆ ಸಿಕ್ಕಿಕೊಂಡ ಹುಲಿ ಒಂದು ಹೊರಬಂದು ಉರುಳನ್ನು ಸುತ್ತಿಕೊಂಡು ಓಡಾಡುತ್ತಿದೆ ಎಂಬ ದೂರು ಬಂದ ಕೂಡಲೇ ಅರಣ್ಯ ಇಲಾಖೆ ಸುಮೋಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಬೇಕಿತ್ತು. ಆದರೆ ಇದುವರೆಗೆ ಅರಣ್ಯ ಇಲಾಖೆ ಯಾವುದೇ ತನಗೆ ಆರಂಭಿಸಿಲ್ಲ. ರಾಷ್ಟ್ರೀಯ ಪ್ರಾಣಿ ಹುಲಿ ಉರುಳಿ ನೊಂದಿಗೆ ಹೋರಾಡುತ್ತಿದೆ ಎಂದಾಗ ಅರಣ್ಯ ಇಲಾಖೆ ಹೆಚ್ಚಿನ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಹುಲಿ ಉರುಳಿಗೆ ಸಿಕ್ಕಿದೆ ಎನ್ನುವ ಪ್ರದೇಶದಲ್ಲೆ ಪ್ರಭಾವಿಗಳ ಎಸ್ಟೇಟ್ ಇರುವ ಕಾರಣಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪ ಕೇಳಿ ಬಂದಿವೆ... ಕೋಟ್...

ಉರುಳು ಸುತ್ತಿಕೊಂಡು ಹುಲಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ 20ಕ್ಕೂ ಹೆಚ್ಚು ಕ್ಯಾಮರಾ ಅಳವಡಿಸಿದ್ದೇವೆ. ಇದುವರೆಗೆ ಹುಲಿ ಪತ್ತೆಯಾಗಿಲ್ಲ. ಹುಲಿ ಉರುಳು ಸುತ್ತಿಕೊಂಡು ಓಡಾಡುತ್ತಿದ್ದರೆ ಸೆರೆಹಿಡಿದು ರಕ್ಷಿಸುವ ಕಾರ್ಯ ಮಾಡಲಾಗುವುದು.

- ಕೆ.ಟಿ.ಬೋರಯ್ಯ, ಡಿಎಫ್ಓ ಚಿಕ್ಕಮಗಳೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂಪ್ಲಾಂಟ್ ಗರ್ಭ ತಡೆ ಸುಲಭ ವಿಧಾನ
ಪ್ರಧಾನ ಮಂತ್ರಿ ಯೋಜನೆಗಳ ಜಾರಿಯಲ್ಲಿ ಚಿತ್ರದುರ್ಗ ಕಡೇ ಸ್ಥಾನ