ಕನ್ನಡಪ್ರಭ ವಾರ್ತೆ ಮೈಸೂರು
ಭಾರತದಲ್ಲಿ ಪ್ರತಿವರ್ಷ 90 ಲಕ್ಷ ಜನರಿಗೆ ನಾಯಿಗಳು ಕಚ್ಚುತ್ತಿರುವುದು ಆತಂಕಕಾರಿಯಾಗಿದ್ದು, ಈ ನಾಯಿಗಳ ಜನನ ನಿಯಂತ್ರಣಕ್ಕೆಸಂಸತ್ತಿನಲ್ಲಿ ವಿಧೇಯಕ ಮಂಡಿಸಿ ಕಾನೂನಿನಲ್ಲಿ ತಿದ್ದುಪಡಿ ತರಬೇಕು ಎಂಬುದು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯರಾದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.ನಗರದ ಜಯದೇವ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಾಯಿ ಕಚ್ಚಿ ಪ್ರತಿ ವರ್ಷ 10 ರಿಂದ 15 ಸಾವಿರ ಜನರು ಸಾಯುತ್ತಿದ್ದಾರೆ. ನಾಯಿಗಳ ಸಂಖ್ಯೆಯು ಹೆಚ್ಚಾಗುತ್ತದೆ. ಹಳೇ ಮಾಹಿತಿಯ ಪ್ರಕಾರ ದೇಶದಲ್ಲಿ ಬೀದಿ ನಾಯಿಗಳ ಸಂಖ್ಯೆ 1.5 ಕೋಟಿ ಇದೆ. 20 ಲಕ್ಷ ಸಾಕು ನಾಯಿಗಳಿವೆ. ಸಿನಿಮಾ ನಟರು, ಸೆಲೆಬ್ರಿಟಿಗಳು ರಸ್ತೆಗಳಲ್ಲಿ ತಿರುಗಾಡುವುದಿಲ್ಲ. ಆದರೂ ವಿರೋಧ ಮಾಡುತ್ತಾರೆ. ಸಾಕು ನಾಯಿಗಳ ಮಾಲೀಕರು ಗಲಾಟೆ ಮಾಡುತ್ತಾರೆ. ಪ್ರಾಣಿಗಳನ್ನು ಪ್ರೀತಿಸಬೇಕು, ಮಾನವೀಯತೆಯಿಂದ ನೋಡಿಕೊಳ್ಳಬೇಕು. ಆದರೆ ಬೀದಿಗಳಲ್ಲಿ ಮಕ್ಕಳು, ವೃದ್ದರನ್ನು ನಾಯಿಗಳು ಕಚ್ಚಿ ತಿನ್ನುವಾಗ ಹೃದಯಕಿತ್ತು ಬರುತ್ತದೆ. ಆದ್ದರಿಂದ ಪಾರ್ಲಿಮೆಂಟ್ ನಲ್ಲಿ ಸ್ಪೀಕರ್ ಜೊತೆಗೂ ಮಾತನಾಡಿದ್ದೇನೆ. ಕೇಂದ್ರ ಆರೋಗ್ಯ ಸಮಿತಿಯಲ್ಲಿಯೂ ಒತ್ತಾಯ ಮಾಡಿದ್ದೇನೆ. ಇದಕ್ಕೆ ಕಾನೂನಿನಲ್ಲಿಯೇ ತಿದ್ದುಪಡಿ ತರಬೇಕು ಎಂದರು.
ಜಯದೇವ ಆಸ್ಪತ್ರೆ ಈ ಭಾಗದ ಜನರಿಗೆ ಸಂಜೀವಿನಿಜಯದೇವ ಹೃದ್ರೋಗ ಸಂಸ್ಥೆ, ಈ ಭಾಗದ ಜನರಿಗೆ ಸಂಜೀವಿನಿ ಆಗಿರುವ ಪಾತ್ರೆಯಾಗಿದ್ದು, ಇಲ್ಲಿನ ವೈದ್ಯರು ಸಿಬ್ಬಂದಿ ತುಂಬಾಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಲ್ಲಿಯೂ ಆಸ್ಪತ್ರೆಯ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ 4 ಕಂದಾಯ ವಿಭಾಗಗಳಲ್ಲಿಯೂ ಜಯದೇವ ಆಸ್ಪತ್ರೆ ನಿರ್ಮಿಸಿದ್ದು, ಹುಬ್ಬಳ್ಳಿ ಜಯದೇವ ಆಸ್ಪತ್ರೆ 435 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾರೆಯಾಗಿ ಭಾರತದಲ್ಲಿಯೇ 2,300 ಹಾಸಿಗೆ ಸಾಮರ್ಥ್ಯವುಳ್ಳ ಹೃದ್ರೋಗ ಆಸ್ಪತ್ರೆ ಇದ್ದರೆ ಅದು ಜಯದೇವ ಆಸ್ಪತ್ರೆ ಮಾತ್ರ ಎಂದರು.
ಹೃದಯಘಾತವಾದ ರೋಗಿಗೆ ತಾಲೂಕು ಮಟ್ಟದಲ್ಲೇ ಪ್ರಥಮ ಚಿಕಿತ್ಸೆ ನೀಡಿ ನಂತರ ಬೇರೆ ಆಸ್ಪತ್ರೆಗೆ ಸೇರಿಸುವ ವಿಧಾನ ಈಗ ರಾಜ್ಯದಲ್ಲಿ 110 ತಾಲೂಕಿನಲ್ಲಿದೆ, ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಂಚೂಣಿಯಲ್ಲಿದ್ದು 230 ತಾಲೂಕಿಗೆ ವಿಸ್ತರಣೆ ಮಾಡಲು ನಿರ್ಧರಿಸಿದ್ದಾರೆ. ಈ ರೀತಿ ಚಿಕಿತ್ಸಾ ವ್ಯವಸ್ಥೆ ಮಾಡಿದ ಮೇಲೆ ಸಾವಿನ ಪ್ರಮಾಣ ಶೇ. 25 ರಿಂದ ಶೇ. 8 ಕ್ಕೆ ಇಳಿದಿದೆ. ಈ ಮಾದರಿಯನ್ನು ದೇಶಾದ್ಯಂತ ಮಾಡಲು ತೀರ್ಮಾನಿಸಿದ್ದೇವೆ ಎಂದ ಅವರು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಕೆಲಸ ಮಾಡುವ ವೈದ್ಯರಿಗೆ ಸಂಬಳವನ್ನು 60 ಸಾವಿರದಿಂದ 75 ಸಾವಿರಕ್ಕೆ, ದಾದಿಯರಿಗೆ 12 ಸಾವಿರವಿದ್ದುದನ್ನು 22 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು.ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಕೆ.ಎಸ್. ಸದಾನಂದ್, ಡಾ. ಸಂತೋಷ್, ಡಾ. ರಂಜಿತ್, ಡಾ. ವೀಣಾ ನಂಜಪ್ಪ, ಡಾ. ಸ್ನೇಹಿಲ್, ಡಾ. ಶಶಿಕಾಂತ್, ಡಾ. ವಿಶ್ವನಾಥ್, ಡಾ. ದೇವರಾಜ್, ಪಿಆರ್ಒಗಳಾದ ವಾಣಿ ಮೋಹನ್, ಚಂಪಕಮಾಲ ಇದ್ದರು.