ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಜೈನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕನ್ನಡಪ್ರಭ ಯುವ ಆವೃತ್ತಿ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಆರ್ ಟಿಒ ಮಲ್ಲಿಕಾರ್ಜುನ್ ಸೇವಾ ಟ್ರಸ್ಟ್ ವತಿಯಿಂದ ತಾಲೂಕಿನಲ್ಲಿ ದೇವಾಲಯ ನಿರ್ಮಾಣ, ಕ್ರೀಡೆ, ಹಬ್ಬ- ಹರಿದಿನಗಳು, ಯೋಗ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರಗಳಂಥ ಹತ್ತು ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ನಮ್ಮ ಸೇವಾ ಕಾರ್ಯ ಚಟುವಟಿಕೆಗಳಲ್ಲಿ ಕನ್ನಡಪ್ರಭ ಯುವ ಆವೃತ್ತಿಗೆ ಪ್ರಾಯೋಜಕರಾಗಿ ತಾಲೂಕಿನ 520 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಿತ್ಯ ಕನ್ನಡಪ್ರಭ ಯುವ ಆವೃತ್ತಿ ತಲುಪುವಂತೆ ಮಾಡುತ್ತಿರುವುದು ನನಗೆ ಹೆಚ್ಚು ಸಂತಸ ನೀಡುತ್ತಿದೆ ಎಂದು ಹೇಳಿದರು.ಯುವ ಆವೃತ್ತಿ ಪತ್ರಿಕೆಯ ಮುದ್ರಣಕ್ಕೆ ಕನ್ನಡಪ್ರಭ ಒಂದು ಪತ್ರಿಕೆಗೆ ಐದು ರು. ವ್ಯಯಿಸಿ ಅದನ್ನು ಕೇವಲ ಒಂದು ರು.ಗಳಿಗೆ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಪತ್ರಿಕೆಯ ಮುದ್ರಣಕ್ಕಾಗಿ 24 ಜನರ ತಂಡ ಕೆಲಸ ಮಾಡುತ್ತಿದೆ. ಪ್ರಾಯೋಜಕನಾಗಿ ನಾನು ಕೇವಲ ಒಂದು ರು. ನೀಡಿದರೆ ಕನ್ನಡಪ್ರಭ 4 ರು. ವ್ಯಯ ಮಾಡುತ್ತಿದೆ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಶಿಕ್ಷಕರ ಬೋಧನೆ ಹಾಲಿನಂತಿದ್ದರೆ, ಕನ್ನಡಪ್ರಭ ಯುವ ಆವೃತ್ತಿ ಹಾಲಿಗೆ ಹಾರ್ಲಿಕ್ಸ್ ಹಾಕಿ ಕೊಟ್ಟಂತ್ತಿದ್ದು, ಅದು ವಿದ್ಯಾರ್ಥಿಗಳ ಕಲಿಕೆಯ ರುಚಿಯನ್ನು ಹೆಚ್ಚಿಸುವಂತಿದೆ. ಮಕ್ಕಳು ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ಐಎಎಸ್, ಐಪಿಎಸ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಸುಲಭ ಎಂದು ಹೇಳಿದರು.
ಸಮಾರಂಭದಲ್ಲಿ ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕನ್ನಡಪ್ರಭ ಪತ್ರಿಕೆ ಜಿಲ್ಲಾ ಪ್ರಸರಣ ವ್ಯವಸ್ಥಾಪಕ ಗಿರೀಶ್, ತಾಲೂಕು ವರದಿಗಾರ ಎಂ.ಕೆ.ಹರಿಚರಣತಿಲಕ್, ಶಿಕ್ಷಕರಾದ ರವಿಶಿವಕುಮಾರ, ರೋಹಿತ್, ಮಮತಾ, ಪವಿತ್ರಾ, ಮಲ್ಲಿಕಾರ್ಜುನ್ ಅಭಿಮಾನಿ ಬಳಗದ ಅಧ್ಯಕ್ಷ ಗಂಜೀಗೆರೆ ಮಹೇಶ್, ಬೀರವಳ್ಳಿ ದಿನೇಶ್ ಇದ್ದರು.