ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ಬಸವ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಶನಿವಾರ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಕದಳಿ ವೇದಿಕೆ ಹಾಗೂ ಯುವ ಘಟಕ ಮುದ್ದೇಬಿಹಾಳ ಆಯೋಜಿಸಿದ ಶರಣ ಬೆಳಗು ಹುಣ್ಣಿಮೆಯ ಅನುಭಾವ ಮಾಲೆ-51 ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ತಿಂಗಳು ಪ್ರತಿಯೊಬ್ಬ ಶರಣರ ವಚನಗಳ ಅನುಭಾವವನ್ನು ತಿಳಿಸುವ ಸಲುವಾಗಿ ಶರಣ ಬೆಳಗು ಹುಣ್ಣಿಮೆಯ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಸರ್ವರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸಲಾಗುತ್ತಿದೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅನ್ನಪೂರ್ಣ ಕಿತ್ತೂರ ಅವರು ನಿಜಶರಣ ಅಂಬಿಗರ ಚೌಡಯ್ಯನವರ ಅನುಭಾವ ವಿಷಯ ಬಗ್ಗೆ ಮಾತನಾಡಿ, ಚೌಡಯ್ಯನವರು ಕಾಯಕ ದಾಸೋಹ ಶಿವಯೋಗ ಸಾಧನೆ ಆಚರಿಸುತ್ತ ಸಾವಿರಾರು ವಚನಗಳನ್ನು ಬರೆದಿದ್ದು, ಕಲ್ಯಾಣ ಕ್ರಾಂತಿಯಲ್ಲಿ ಎಲ್ಲವೂ ನಾಶವಾಗಿ ಕೇವಲ 330 ವಚನಗಳು ಮಾತ್ರ ನಮಗೆ ದೊರೆತಿವೆ. ಇನ್ನೂ ಹೆಚ್ಚಿನ ಸಂಶೋಧನೆಗಳು ಆಗಬೇಕಿದೆ ಎಂದು ತಿಳಿಸಿದರು.ಕಲ್ಯಾಣ ಕ್ರಾಂತಿಯಲ್ಲಿ ವಚನ ಸಾಹಿತ್ಯ ಹಾಗೂ ಶರಣ ಧರ್ಮ ರಕ್ಷಣೆ ಉಳಿವಿನಲ್ಲಿ ಅಂಬಿಗರ ಚೌಡಯ್ಯನವರ ಪಾತ್ರ ಪ್ರಮುಖವಾದದ್ದು. ನದಿಯಲ್ಲಿ ದೋಣಿ ಕಾಯಕ ಮಾಡುವುದರೊಂದಿಗೆ ಕಂದಾಚಾರ, ಮೂಢನಂಬಿಕೆ ವಿರೋಧಿಸಿ ಶರಣ ತತ್ವ ಪ್ರಚಾರಗೊಳಿಸಿ ವಚನಗಳ ಚಿಂತನೆ ಹಾಗೂ ಶಿವಾನುಭವವನ್ನು ವಚನಗಳ ಮೂಲಕ ಹಂಚಿದ್ದಾರೆ ಎಂದರು.ಅಂಬಿಗರ ಚೌಡಯ್ಯನವರ ವಚನಗಳು ಅಧರಕ್ಕೆ ಕಹಿಯಾದರೇ ಉದರಕ್ಕೆ ಸಿಹಿ ಎಂಬುವಂತೆ ಹಾಗೆಯೇ ನುಡಿದರೆ ಏಟೊಂದು ತುಂಡೆರಡು ಎನ್ನುವ ಹಾಗೆ ನುಡಿದಂತೆ ನಡೆದ, ನಡೆದಂತೆ ನುಡಿದವರು ಅಂಬಿಗರ ಚೌಡಯ್ಯನವರು. ಅಂಬಿಗರ ಚೌಡಯ್ಯನವ ವಚನಗಳಲ್ಲಿ ಇಷ್ಟಲಿಂಗ ನಿಷ್ಠೆ, ವೈಚಾರಿಕತೆ, ನೈತಿಕ ಮೌಲ್ಯಗಳನ್ನು ಕಾಣಬಹುದಾಗಿದ್ದಲ್ಲದೇ ಆಧ್ಯಾತ್ಮಿಕತೆ, ವಿಡಂಬನೆಗಳೊಂದಿಗೆ ಅಪಾರ ಅನುಭಾವದ ಅಮೃತವನ್ನು ಚಾಟಿಯೇಟಿನೊಂದಿಗೆ ಕೊಟ್ಟು ಹೊಡೆದೆಬ್ಬಿಸಿದ್ದಾರೆ ಎಂದು ತಿಳಿಸಿದರು.ವಿಜಯಪುರ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಾ.ಗುರುದೇವಿ ಎಸ್.ಹಳ್ಳೂರ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ಮುದ್ದೇಬಿಹಾಳ ತಾ.ಶ.ಸಾ.ಪ ನಿಕಟಪೂರ್ವ ಅಧ್ಯಕ್ಷ ಬಸವರಾಜ ನಾಲತವಾಡ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ನಾಗರಾಳ ಮಾತನಾಡಿದರು. ಪ್ರಭಾ ಚಿನಿವಾರ(ಹರ್ಲಾಪೂರ), ಬಸವ ಮಹಾಮನೆ ಬಳಗ, ಕದಳಿ ವೇದಿಕೆ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು ಭಾಗವಹಿಸಿದ್ದರು.