ಕನ್ನಡಪ್ರಭ ವಾರ್ತೆ ಗುಡಿಬಂಡೆ
ದೇಶದ ವಿಚಾರ ಬಂದಾಗ ಎಲ್ಲರೂ ಜಾತಿ, ಧರ್ಮ ಎಲ್ಲವನ್ನೂ ಮರೆತು ಐಕ್ಯತೆಯಿಂದ ಒಂದಾಗಿರಬೇಕು ಎಂದು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾಡೋಜ ಗೊ.ರು. ಚನ್ನಬಸಪ್ಪ ತಿಳಿಸಿದರು.ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ನಮ್ಮ ಶಾಲೆ ನಮ್ಮ ಹೆಮ್ಮೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಮೂಹ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಲ್ಲಕ್ಕಿಂತ ದೇಶವೇ ಮೊದಲುದೇಶದ ವಿಚಾರ ಬಂದಾಗ ನಾವೆಲ್ಲರೂ ಒಂದಾಗಬೇಕು. ಆ ಸಮಯದಲ್ಲಿ ಯಾರೂ ಜಾತಿ ಧರ್ಮ ಎಂದು ಹಿಂದೆ ಸರಿಯಬಾರದು. ಎಲ್ಲಕ್ಕಿಂತ ದೇಶವೆ ಮೊದಲು ಎಂಬು ಭಾವಿಸಬೇಕು. ನಮ್ಮ ದೇಶ, ನಮ್ಮ ಜಲ ಎಂಬ ಅಭಿಪ್ರಾಯವನ್ನಿಟ್ಟುಕೊಂಡು ಭಾರತೀಯರಾದ ನಾವೆಲ್ಲರೂ ಐಕ್ಯತೆಯಿಂದ ಬದುಕಬೇಕು ಎಂದರು.
ಇಂದು ಕನ್ನಡ ಶಾಲೆಗಳು ಅವನತಿಯ ಅಂಚಿನಲ್ಲಿವೆ. ನಾವೆಲ್ಲರೂ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವಂತಹ ಕೆಲಸ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಬೀಚಗಾನಹಳ್ಳಿ ಸರ್ಕಾರಿ ಶಾಲೆಯ ಹಳೇಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವಂತಹ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಬೇಕು. ಈ ಕಾರ್ಯಕ್ರಮದಲ್ಲಿ ವಿವಿಧ ಕಡೆಯಿಂದ ಬಂದಂತಹ ಮಕ್ಕಳು ಸಾಮೂಹಿಕವಾಗಿ ಹಾಡಿದ್ದು, ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿರುವುದು ಇತರರಿಗೆ ಮೇಲ್ಪಂಕ್ತಿ ಎಂದರು.ಭಾಷಣಕ್ಕೆ ಸೀಮಿತಲಾಗದಿರಲಿ
ಬಳಿಕ ಶಾಲೆಯ ಹಳೇಯ ವಿದ್ಯಾರ್ಥಿ ಹಾಗೂ ಗುಡಿಬಂಡೆ ತಾಲೂಕಿನ ಕಸಾಪ ನಿಕಟಪೂರ್ವ ಅಧ್ಯಕ್ಷ ಪ್ರೆಸ್ ಸುಬ್ಬರಾಯಪ್ಪ ಮಾತನಾಡಿ, ಇಂದಿನ ರಾಜಕಾರಣಿಗಳು ಅಥವಾ ಇತರರು ವಿವಿಧ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಮಾತ್ರ ಕನ್ನಡ ಶಾಲೆಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಉದಾಸೀನ ತೋರುತ್ತಾರೆ. ಬೀಚಗಾನಹಳ್ಳಿ ಶಾಲೆಯ ಹಳೇಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಮಾಡಬೇಕೆಂದು ಯೋಜನೆ ರೂಪಿಸಿ, ಕಾರ್ಯಕ್ರಮವನ್ನು ನಡೆಸಿದ್ದೇವೆ. ಈ ಕಾರ್ಯಕ್ರಮ ಉತ್ತಮವಾಗಿ ನೆರವೇರಿದೆ ಎಂದರು.ಮಕ್ಕಳಿಂದ ಸಾಮೂಹಿಕ ಗಾಯನ
ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲೆಗಳ ಮಕ್ಕಳು ಸಾಮೂಹಿಕ ಗಾಯನ ಕಾರ್ಯಕ್ರಮ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಗ್ರಾಮದ ಮುಖ್ಯ ಬೀದಿಯಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ, ಹಳೇಯ ವಿದ್ಯಾರ್ಥಿ ಡಾ. ವಿಜಯ್ ಕುಮಾರ್, ಬೀಚಗಾನಹಳ್ಳಿ ಗ್ರಾಪಂ ಅಧ್ಯಕ್ಷರು, ಸದಸ್ಯರುಗಳು ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.