ಭಟ್ಕಳ ಜನತಾ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ, ಸಿಬ್ಬಂದಿಗಳಿಂದ ಗೌರವ
ಇಲ್ಲಿಯ ಜನತಾ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿಂದ ಸಂಘದ ಅಧ್ಯಕ್ಷ ಹಾಗೂ ವಿಧಾನಸಭೆಯ ಉಪ ಸಭಾಧ್ಯಕ್ಷ ಮಂಕಾಳ ಎಸ್. ವೈದ್ಯರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಕಾಳ ವೈದ್ಯರು, ನನಗೆ ಸಚಿವ ಸ್ಥಾನ ಸಿಗುವುದಾಗಿತ್ತು. ಆದರೆ ನನಗೆ ವಿಧಾನಸಭೆಯ ಉಪ ಸಭಾಧ್ಯಕ್ಷ ಹುದ್ದೆ ಸಿಕ್ಕಿರುವುದು ದೇವರ ಇಚ್ಛೆಯಾಗಿದೆ. ದೇವರ ಇಚ್ಛೆಯಂತೆ ಎಲ್ಲವೂ ನಡೆದಿದೆ. ಇದರಲ್ಲಿ ಯಾರದ್ದೂ ಪಾತ್ರವಿಲ್ಲ. ಯಾವ ಸಮಯಕ್ಕೆ ಯಾವ ಹುದ್ದೆ ಸಿಗಬೇಕು ಎನ್ನುವುದು ದೇವರ ಇಚ್ಛೆಯೇ ಆಗಿದೆ. ಯಾವುದೂ ಕೂಡ ನಮ್ಮ ಕೈಯಲ್ಲಿ ಇರುವುದಿಲ್ಲ. ಯಾರು ಏನಾಗಬೇಕು ಎನ್ನುವುದು ದೇವರ ಇಚ್ಛೆಯಾಗಿದೆ ಎಂದ ಅವರು, ನಾನು ಈ ಮಟ್ಟಕ್ಕೆ ಬೆಳೆಯಲು ಜನತಾ ಬ್ಯಾಂಕೇ ಕಾರಣವಾಗಿದೆ. ಜನತಾ ಬ್ಯಾಂಕಿನ ನಿರ್ದೇಶಕನಾದ ಬಳಿಕವೇ ನಾನು ರಾಜಕಾರಣಕ್ಕೆ ಬಂದಿದ್ದೇನೆ. ಜನತಾ ಬ್ಯಾಂಕು ನನಗೆ ಜನರ ಪರಿಚಯ ಮಾಡಿಸಿದೆ. ಕಳೆದ 30 ವರ್ಷಗಳಿಂದ ನಾನು ಜನತಾ ಬ್ಯಾಂಕಿನ ನಿರ್ದೇಶಕ ಮತ್ತು ಅಧ್ಯಕ್ಷ ಸ್ಥಾನದಲ್ಲಿದ್ದು, ಬ್ಯಾಂಕಿನಲ್ಲಿ ಸುಮಾರು 100 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಬ್ಯಾಂಕು ₹500 ಕೋಟಿಗೂ ಅಧಿಕ ವಹಿವಾಟು ಹೊಂದಿದೆ. ಹಿರಿಯರು ಕಟ್ಟಿದ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಬೇಕಾಗಿದೆ ಎಂದರು.ಉಪಾಧ್ಯಕ್ಷ ಪರಮೇಶ್ವರ ದೇವಡಿಗ ಪ್ರಸ್ತಾವಿಕ ಮಾತನಾಡಿದರು.
---------