ಗದಗ: ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಉಚಿತ ಆಸ್ಪತ್ರೆ ನಿರ್ಮಾಣದ ಯೋಜನೆ ಜಾರಿಗೊಳಿಸಲು ಇನ್ನೂ ಮೂರ್ನಾಲ್ಕು ವರ್ಷಗಳ ಕಾಲವಕಾಶ ಬೇಕಾಗಬಹುದು. ಹತ್ತು ವರ್ಷ ಸಮಯ ಕೊಡಿ. ಕರ್ನಾಟವನ್ನು ಬದಲಿಸುತ್ತೇನೆ ಎಂದು ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ತಂತ್ರಜ್ಞಾನವು ಮಾಹಿತಿ ಮತ್ತು ಜ್ಞಾನವನ್ನು ನೀಡಬಹುದೇ ಹೊರತು, ವ್ಯಕ್ತಿಯಲ್ಲಿ ನಿಜವಾದ ಪರಿವರ್ತನೆ ತರಲು ಸಾಧ್ಯವಿಲ್ಲ. ನಮ್ಮ ದೇಶದ ಗುರುಶಿಷ್ಯ ಪರಂಪರೆಯು ಜ್ಞಾನ ಮತ್ತು ಸಂಸ್ಕಾರವನ್ನೇ ಆಧರಿಸಿದೆ. ಗುರುವಿನ ಸಾನ್ನಿಧ್ಯಕ್ಕೆ ಪರ್ಯಾಯವಿಲ್ಲ. ಪುಸ್ತಕಗಳು ಮತ್ತು ತಾಂತ್ರಿಕ ಸಾಧನಗಳ ಮೂಲಕ ಕಲಿಯಬಹುದಾದರೂ, ಗುರುವಿನ ಸಾನ್ನಿಧ್ಯದಲ್ಲಿದ್ದಾಗ ವ್ಯಕ್ತಿಯೊಳಗಿನ ಶಕ್ತಿ ಜಾಗ್ರತವಾಗುತ್ತದೆ ಎಂದರು.
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ. ಬಿ.ಎನ್. ನರಸಿಂಹಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವನ ಅಂತರಂಗದ ತುಡಿತಕ್ಕೆ ಭೌತಿಕ ಸುಖ, ಸಂಪತ್ತು ಅಥವಾ ಕೀರ್ತಿ ತೃಪ್ತಿ ನೀಡಲಾರದು. ನಿಸ್ವಾರ್ಥ ಸೇವೆಯಿಂದ ಜೀವಕಾರುಣ್ಯ ಅರಳಿ, ಮನುಷ್ಯನು ಪರಮಾತ್ಮನ ಸನ್ನಿಧಾನವನ್ನು ಸೇರುವ ದಾರಿಯನ್ನು ಕಂಡುಕೊಳ್ಳುತ್ತಾನೆ ಎಂದರು.ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ 3ನೇ ವರ್ಷದ ಲೈಫ್ ಸೈನ್ಸ್ ವಿದ್ಯಾರ್ಥಿನಿ ಸೃಷ್ಟಿ ಪಲ್ಲೆ ಹಾಗೂ ಶ್ರೀ ಸತ್ಯ ಸಾಯಿ ವಾಣಿ ನಿಕೇತನಂ ಗುರುಕುಲದ ಗೌರವಾಧ್ಯಕ್ಷ ಬಿ.ಎಸ್. ಗೋಣಿ ಮಾತನಾಡಿದರು. ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ವೇದಪಾರಾಯಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಸತ್ಯ ಸಾಯಿ ಲೋಕ ಸೇವಾ ಗುರುಕುಲಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಅತ್ಯಾಕರ್ಷಕ ಸ್ವರಮೇಳ (ಸಾಯಿ ಸಿಂಫನಿ ಆರ್ಕೆಸ್ಟ್ರಾ) ಪ್ರಸ್ತುತಪಡಿಸಿದರು.
ರಾಜಕಾರಣಿಗಳು ನಿಸ್ವಾರ್ಥ ಸೇವೆಗೆ ಮನಸ್ಸು ಮಾಡಿದರೆ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು. ಇದು ಸಾಧ್ಯವಾಗಲು ರಾಜಕೀಯದಲ್ಲಿರುವವರ ಮನಸ್ಸು ಬದಲಾಗಬೇಕು ಎಂದು ಮಾಜಿ ಶಾಸಕ ಡಿ.ಆರ್. ಪಾಟೀಲ ಹೇಳಿದರು.