ದೇಗುಲಗಳು ಶಾಂತಿ, ನೆಮ್ಮದಿ ನೀಡುವ ಪವಿತ್ರ ಕೇಂದ್ರಗಳು: ಫಕೀರ ಸಿದ್ಧರಾಮ ಸ್ವಾಮೀಜಿ

KannadaprabhaNewsNetwork |  
Published : Aug 23, 2026, 02:15 AM IST
ಶಿರಹಟ್ಟಿಯಲ್ಲಿ ಶ್ರೀ ಬೆಂಚಮ್ಮ ದೇವಿ ದೇವಸ್ಥಾನ ಉದ್ಘಾಟಿಸಿದ ಶ್ರೀ ಫಕೀರ ಸಿದ್ದರಾಮ ಶ್ರೀಗಳು ಭಕ್ತರನ್ನು ಆಶೀರ್ವದಿಸಿದರು. | Kannada Prabha

ಸಾರಾಂಶ

ಶಿರಹಟ್ಟಿ ಪಟ್ಟಣದ ಹೊರ ವಲಯದ ದೇವಪ್ಪ ಬಜನಿ ಅವರ ಜಮೀನಿನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಬೆಂಚಮ್ಮ ದೇವಿ ದೇವಸ್ಥಾನ ಉದ್ಘಾಟಿಸಿ, ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ೧೩ನೇ ಪೀಠಾಧಿಪತಿ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಿರಹಟ್ಟಿ: ದೇಗುಲಗಳು ಕೇವಲ ಧಾರ್ಮಿಕ ಆಚರಣೆಗಳ ಸ್ಥಳಗಳಲ್ಲ. ಅವು ಮನುಷ್ಯನಿಗೆ ಶಾಂತಿ, ನೆಮ್ಮದಿ ಹಾಗೂ ಆತ್ಮಸ್ಥೈರ್ಯ ನೀಡುವ ಪವಿತ್ರ ಕೇಂದ್ರಗಳಾಗಿವೆ ಎಂದು ಶ್ರೀ ಜಗದ್ಗುರು ಫಕೀರೇಶ್ವರ ಸಂಸ್ಥಾನ ಮಠದ ೧೩ನೇ ಪೀಠಾಧಿಪತಿ ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಪಟ್ಟಣದ ಹೊರ ವಲಯದ ದೇವಪ್ಪ ಬಜನಿ ಅವರ ಜಮೀನಿನಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಬೆಂಚಮ್ಮ ದೇವಿ ದೇವಸ್ಥಾನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಮನುಷ್ಯ ನೆಮ್ಮದಿಗಾಗಿ ಹಾತೊರೆಯುತ್ತಿದ್ದಾನೆ. ಭೌತಿಕ ಸಂಪತ್ತು, ಆಧುನಿಕ ಸೌಲಭ್ಯಗಳು ಹೆಚ್ಚಾದರೂ ಮನಸ್ಸಿಗೆ ನೆಮ್ಮದಿ ದೊರೆಯುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ದೇಗುಲಗಳು ಮನಸ್ಸಿಗೆ ನೆಮ್ಮದಿ ನೀಡುವ ತಾಣಗಳಾಗಿವೆ ಎಂದರು.

ದೇಗುಲಗಳಿಗೆ ತೆರಳಿ ಕೆಲಕಾಲ ಧ್ಯಾನ, ಪ್ರಾರ್ಥನೆ ಹಾಗೂ ಭಜನೆಗಳಲ್ಲಿ ತೊಡಗುವುದರಿಂದ ಮನಸ್ಸಿನ ಚಂಚಲತೆ ಕಡಿಮೆಯಾಗುತ್ತದೆ. ದೇವರ ಮೇಲಿನ ಭಕ್ತಿ ಮನುಷ್ಯನಲ್ಲಿ ಸಾತ್ವಿಕ ಚಿಂತನೆ, ಸಹನೆ, ಕರುಣೆ ಹಾಗೂ ಪರೋಪಕಾರದ ಗುಣಗಳನ್ನು ಬೆಳೆಸುತ್ತದೆ. ಆದ್ದರಿಂದ ದೇಗುಲಗಳ ಪಾವಿತ್ರ‍್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ದೇವರು ತೋರಿಸಿದ ಸನ್ಮಾರ್ಗದಲ್ಲಿ ನಡೆಯುವುದು ಅಗತ್ಯ. ಹಸಿದವರಿಗೆ ಅನ್ನ ನೀಡುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು, ಹಿರಿಯರನ್ನು ಗೌರವಿಸುವುದು, ಸತ್ಯ ಮತ್ತು ಧರ್ಮವನ್ನು ಪಾಲಿಸುವುದೇ ನಿಜವಾದ ಭಕ್ತಿಯ ಪ್ರತೀಕ. ಆಡಂಬರಕ್ಕಿಂತ ಆತ್ಮಶುದ್ಧಿ, ತೋರಿಕೆಗಿಂತ ಸೇವೆ, ಮಾತಿಗಿಂತ ಸತ್ಕಾರ್ಯಕ್ಕೆ ಆದ್ಯತೆ ನೀಡಬೇಕು ಎಂದರು. ಅಂತೂರ ಬೆಂತೂರ ಗ್ರಾಮದ ಬೂದೀಶ್ವರ ಮಠದ ರಾಚೋಟೇಶ್ವರ ಶ್ರೀಗಳು ಮಾತನಾಡಿ, ದೇಗುಲಗಳು ಧಾರ್ಮಿಕ ಭಾವನೆಗಳನ್ನು ಬೆಳೆಸುವ ಜತೆಗೆ ಸಮಾಜದಲ್ಲಿ ಸೌಹಾರ್ದತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಕೇಂದ್ರಗಳಾಗಬೇಕು. ಜಾತಿ, ಮತ, ಪಂಥದ ಭೇದ ಮರೆತು ಎಲ್ಲರೂ ಒಂದಾಗಿ ಸೇರುವ ವಾತಾವರಣ ದೇಗುಲಗಳಲ್ಲಿ ನಿರ್ಮಾಣವಾಗಬೇಕು. ಯುವಜನತೆ ಧಾರ್ಮಿಕ ಆಚರಣೆಗಳ ಜತೆಗೆ ಉತ್ತಮ ಸಂಸ್ಕಾರ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಉಮೇಶ ಗಾಣಗೇರ, ದೇವಪ್ಪ ಬಜನಿ, ಬಸವರಾಜ ಚಿಕ್ಕತೋಟದ, ಯಲ್ಲಪ್ಪ ಬಂಗಾರಿ, ನಿಂಗಪ್ಪ ಬಜನಿ, ವಿಶ್ವನಾಥ ಕಪ್ಪತ್ತನವರ, ರಮೇಶ ಕಪ್ಪತ್ತನವರ, ಶಿವಾನಂದ ಬಜನಿ, ಶರಣಪ್ಪ ಹೂರಾರ, ನಿಂಗಪ್ಪ ಬಜನಿ, ನೀಲಪ್ಪ ಚಕ್ರಸಾಲಿ, ಚಂದ್ರು ತಳವಾರ, ಪರಶುರಾಮ ಡೊಂಕಬಳ್ಳಿ, ಚಂದ್ರು ಅಕ್ಕಿ, ಮಂಜುನಾಥ ಘಂಟಿ, ಚಂದ್ರಕಾಂತ ಸ್ವಾಮಿ, ಮಂಜು ಬಂತಿ, ಹನುಮಂತ ಕೊಡ್ಲಿ, ವಾಸು ಕಲಘಟಗಿ, ಈರಣ್ಣ ಸಜ್ಜನ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಡರಗಿ: ಬಿಸಿಯೂಟದ ಉಪ್ಪಿಟ್ಟಿನಲ್ಲಿ ಹಲ್ಲಿ ಪತ್ತೆ, 160 ವಿದ್ಯಾರ್ಥಿಗಳು ಅಸ್ವಸ್ಥ
ವಿಧಾನಸಭಾಧ್ಯಕ್ಷ ಜಿ.ಎಸ್.ಪಾಟೀಲ್‌ಗೆ ಗಜೇಂದ್ರಗಡದಲ್ಲಿ ಭವ್ಯ ಸ್ವಾಗತ, ಮೆರವಣಿಗೆ