ಪಟ್ಟಣದಲ್ಲಿ ₹1174.10 ಲಕ್ಷ ಅನುದಾನದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ
ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಲಭ್ಯತೆ, ಉತ್ತಮ ಕಾನೂನು ಸುವ್ಯವಸ್ಥೆ, ಅಗ್ಗದ ಜೀವನ ನಿರ್ವಹಣೆ, ಗುಣಮಟ್ಟದ ತಾಜಾ ತರಕಾರಿ ಹಾಗೂ ಇತರ ಸೌಲಭ್ಯಗಳಿಂದಾಗಿ ಇಂದು ಹಳಿಯಾಳ ಪಟ್ಟಣದಲ್ಲಿ ನೆಲೆಸುವರ ಸಂಖ್ಯೆಯು ಪ್ರತಿವರ್ಷವೂ ಹೆಚ್ಚಾಗುತ್ತಿದ್ದು, ಹಳಿಯಾಳ ನಿರೀಕ್ಷೆಗೂ ಬೆಳೆಯಲಾರಂಭಿಸಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹರ್ಷ ವ್ಯಕ್ತಪಡಿಸಿದರು.
ಸೋಮವಾರ ಪಟ್ಟಣದ ಕೆ.ಎಚ್.ಬಿ. ಬಡಾವಣೆಯಲ್ಲಿ ಪುರಸಭೆಯವರು ಆಯೋಜಿಸಿದ ₹1174.10ಲಕ್ಷ ವೆಚ್ಚದ ಅನುದಾನದಲ್ಲಿ ಕೈಗೊಳ್ಳಲಾಗುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೆರಿಸಿ ಮಾತನಾಡಿದರು.ಐವತ್ತು ವರ್ಷಗಳ ಹಿಂದೇ ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಇಲ್ಲಿನ ಜನ ಬೇರೆಡೆ ವಲಸೆ ಹೋಗುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಹಳಿಯಾಳ ತಾಲೂಕಿಗೆ ಸೇವೆ ಸಲ್ಲಿಸಲು ಬಂದವರೆಲ್ಲರೂ ಇಲ್ಲಿಯೇ ಮನೆ ಕಟ್ಟಿಕೊಂಡು ನೆಲೆಸಿದ್ದಾರೆ. ಹಳಿಯಾಳ ಪಟ್ಟಣದಲ್ಲಿ ಶೈಕ್ಷಣಿಕ ವ್ಯವಸ್ಥೆ, ಶಿಕ್ಷಣ ಕೇಂದ್ರಗಳು, ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ಉತ್ತಮವಾಗಿವೆ. ನನ್ನ ರಾಜಕೀಯ ಜೀವನ ಈ ಮಟ್ಟಕ್ಕೇರಲು ನನ್ನ ಮತದಾರರು ನೀಡಿದ ಆಶೀರ್ವಾದ, ಸಹಕಾರದ ಋಣ ತೀರಿಸಲು ಅಸಾಧ್ಯ ಎಂದು ದೇಶಪಾಂಡೆ ಭಾವುಕರಾದರು.ಪ್ರತಿ ಚುನಾವಣೆಯಲ್ಲೂ ಹಳಿಯಾಳ ಮತ್ತು ದಾಂಡೇಲಿ ನಗರದ ಮತದಾರರು ನನ್ನ ಬೆನ್ನಿಗೆ ನಿಂತು ನನ್ನ ಕೈಡಿದು ಗೆಲ್ಲಿಸಿದ್ದಾರೆ. ಅದಕ್ಕಾಗಿ ನಾನು ಹಳಿಯಾಳ, ದಾಂಡೇಲಿ ಅಭಿವೃದ್ಧಿಗಾಗಿ ಎಷ್ಟೂ ಮಾಡಿದರೂ ಕಡಿಮೆಯೇ ಎಂದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾದ ಅನುದಾನ ಮತ್ತು ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ನೀಡಿದ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ₹837.10ಲಕ್ಷ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ 23 ಕಾಮಗಾರಿಗಳು ಮತ್ತು 2025-26ನೇ ಸಾಲಿನ ವಿಶೇಷ ಯೋಜನೆಯಡಿಯಲ್ಲಿ ₹337ಲಕ್ಷ ವೆಚ್ಚದಲ್ಲಿ ಪುರಸಭೆಯ ವ್ಯಾಪ್ತಿಯ ಮುಖ್ಯರಸ್ತೆಗಳಿಗೆ ಅಲಂಕಾರಿಕ ಬೀದಿ ದೀಪ ಅಳವಡಿಸಲಾಗುವುದೆಂದರು.ಕಾರ್ಯಕ್ರಮದಲ್ಲಿ ನಗರೋತ್ಥಾನ ಹಂತ 4ರ ಅಡಿಯಲ್ಲಿ ವಿದ್ಯುತ್ ಚಾಲಿತ ತ್ರಿಚಕ್ರ ವಾಹನಗಳನ್ನು ಶಾಸಕರು ವಿತರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಮಾಜಿ ಉಪಾಧ್ಯಕ್ಷ ಫಯಾಜ್ ಶೇಖ್, ಸುವರ್ಣ ಮಾದರ, ರಾಜೇಶ್ವರಿ ಶೆಟವಣ್ಣನವರ, ಪೂಜಾ ದೂಳಿ ಹಾಗೂ ಪುರಸಭಾ ಎಂಜಿನಿಯರ್ ಹರೀಶ ಜಿ.ಆರ್. ಹಾಗೂ ಸಿಬ್ಬಂದಿ ಇದ್ದರು.