ದೊಡ್ಡಬಳ್ಳಾಪುರ: ಸಾವಿರಾರು ವರ್ಷಗಳಿಂದ ಮನುಷ್ಯನ ಮನಸ್ಸಿನ ಮೇಲೆ ನಿರಂತರ ದೌರ್ಜನ್ಯ ನಡೆದಿದೆ. ಮಾನಸಿಕ ಸ್ವಾತಂತ್ರ್ಯದ ಅಗತ್ಯತೆಯನ್ನು ಅರ್ಥ ಮಾಡಿಕೊಂಡು ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮತ್ತು ಸಮಸ್ಯೆಗಳನ್ನು ನಿವಾರಣೆ ಮಾಡುವ ಸ್ವಾತಂತ್ರ್ಯವನ್ನು ಕಂಡುಕೊಂಡವರೇ ಭಗವಾನ್ ಬುದ್ಧ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಪ್ರಕಾಶ್ ಮಂಟೇದ ಅಭಿಪ್ರಾಯ ಪಟ್ಟರು.
ತಾಲೂಕಿನ ಹಣಬೆ ಗ್ರಾಮದಲ್ಲಿ ನಡೆದ ಭಗವಾನ್ ಬುದ್ಧರ 2568ನೇ ಜಯಂತಿ ಹಾಗೂ 2ನೇ ವರ್ಷದ ಪೌರ್ಣಮಿ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಗತ್ತಿನಲ್ಲಿ ಸ್ಪೃಶ್ಯ, ಅಸ್ಪೃಶ್ಯ ಎಂಬುದು ಇಲ್ಲ ಎಂಬ ಸತ್ಯವನ್ನು ಭಗವಾನ್ ಬುದ್ಧ ಜಗತ್ತಿಗೆ ತೋರಿಸಿಕೊಟ್ಟರು. ಭ್ರಮೆಗಳನ್ನು ಓಡಿಸಿ ನಿನಗೆ ನೀನೇ ಚೈತನ್ಯ ಎಂಬ ಸತ್ಯವನ್ನು ತಿಳಿಸಿದರು ಎಂದ ಅವರು, ಬುದ್ಧನ ಮಾರ್ಗವನ್ನೇ ಮುಂದುವರೆಸಿಕೊಂಡು ಬಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಆಧುನಿಕ ಬುದ್ಧ ಎಂದರೆ ತಪ್ಪಲ್ಲ. ಬುದ್ಧನೆಡೆಗೆ ಎಲ್ಲರೂ ಸಾಗಬೇಕಿದೆ ಎಂದರು.ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಗುರುರಾಜಪ್ಪ ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ವೈಜ್ಞಾನಿಕ ಆಶಯಗಳಿಗೆ ಅನುರೂಪವಾದ ಧರ್ಮ ಯಾವುದಾದರೂ ಇದ್ದರೆ ಅದುವೇ ಬುದ್ಧ ಧರ್ಮ. ರಾಜಕೀಯ ಅಧಿಕಾರ ಸಂತೋಷವನ್ನು ತರುವುದಿಲ್ಲ. ಆದರೆ ಮನುಷ್ಯ ಅನ್ನ, ನೀರು, ನೆರಳು, ಗೌರವ ಇವುಗಳಿಂದ ದೂರವಿರಲು ಸಾಧ್ಯವಿಲ್ಲ. ಇವುಗಳೆಲ್ಲವೂ ಎಲ್ಲರಿಗೂ ಸಿಗಬೇಕಾದರೆ ರಾಜಕೀಯ ವ್ಯವಸ್ಥೆ ಮತ್ತು ಹೊಣೆಗಾರಿಕೆ ಅತ್ಯಂತ ಅಗತ್ಯ ಎಂಬ ಭಗವಾನ್ ಬುದ್ಧರು ಹೇಳಿದ ಈ ಸತ್ಯಗಳ ಆಧಾರದ ಮೇಲೆಯೇ ಅಂಬೇಡ್ಕರ್ ರವರು ನಮ್ಮ ರಾಷ್ಟ್ರದ ಸಂವಿಧಾನ ರಚನೆ ಮಾಡಿದ್ದಾರೆ. ಧರ್ಮ ಮತ್ತು ರಾಜಕೀಯ ವ್ಯವಸ್ಥೆಯನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಪ್ರಯತ್ನ ಮುಲಭೂತವಾದಿ ರಾಜಕೀಯ ನಾಯಕರು ಮಾಡುತ್ತಿದ್ದಾರೆ. ಇದು ಮುಂದುವರೆದರೆ ಜನಸಾಮಾನ್ಯರ ಬದುಕು ಅಪಾಯಕ್ಕೆ ಒಳಗಾಗುತ್ತದೆ ಎಂದರು.
ಸರ್ಕಾರಿ ಆಸ್ಪತ್ರೆಯ ತಾಂತ್ರಿಕ ಅಧಿಕಾರಿ ರಾಜೇಂದ್ರ ಮಾತನಾಡಿ, ಬುದ್ಧಧರ್ಮದಲ್ಲಿ ಮಾತ್ರ ವೈಜ್ಞಾನಿಕ ಮನೋ ಧರ್ಮ ಅಡಗಿದೆ ಎಂದು ವಿಶ್ವ ಸಂಸ್ಥೆ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಇಡೀ ವಿಶ್ವವೇ ಬುದ್ಧಮಯವಾಗುವ ಎಲ್ಲಾ ಲಕ್ಷಣಗಳಿವೆ ಎಂದರು.ಕುಂದಾಣ ಬುದ್ಧವಿಹಾರದ ಅನಿರುದ್ಧ ಬಂತೇಜಿ ಮತ್ತು ಉಪಾಸಕ ಸಿದ್ದಾರ್ಥ, ಭಗವಾನ್ ಬುದ್ಧರ ತ್ರಿಸರಣ ಬೋಧಿಸಿದರು.
ನಿವೃತ್ತ ಪ್ರಾಧ್ಯಾಪಕ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡರಂಗಪ್ಪ, ಮುಖಂಡರಾದ ರಾಜಗೋಪಾಲ, ನಾರಾಯಣಸ್ವಾಮಿ, ರಮೇಶ್, ಗಂಗಪ್ಪ, ಜಗಧೀಶ್, ರಾಮಕೃಷ್ಣಪ್ಪ, ಮುನಿಯಪ್ಪ, ಮುನೇಗೌಡ, ಸುರೇಶ್, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.24ಕೆಡಿಬಿಪಿ7-ದೊಡ್ಡಬಳ್ಳಾಪುರ ತಾಲೂಕಿನ ಹಣಬೆ ಗ್ರಾಮದಲ್ಲಿ ಭಗವಾನ್ ಬುದ್ಧರ 2568ನೇ ಜಯಂತಿ ಹಾಗೂ 2ನೇ ವರ್ಷದ ಪೌರ್ಣಮಿ ಆಚರಣಾ ಕಾರ್ಯಕ್ರಮ ನಡೆಯಿತು.