ಸವಣೂರು: ಪ್ರತಿಯೊಂದು ಮನೆ, ಮನಗಳಲ್ಲಿ ಧರ್ಮದ ದೀಪವನ್ನು ಹಚ್ಚುವ ಮೂಲಕ ಧರ್ಮ ಉಳಿಸಿಕೊಂಡು ಸಂಸ್ಕೃತಿ ಬೆಳೆಸುವದು ಅವಶ್ಯವಾಗಿದೆ ಎಂದು ನರಗುಂದ, ಇಂಚಿಗೇರಿ ಪುಣ್ಯಾರಣ್ಯ ಪತ್ರಿವನ ಮಠ, ಅಣ್ಣಿಗೇರಿ, ಸೀತಾಗೇರಿಯ ಆಧ್ಯಾತ್ಮ ಸಾಂಪ್ರದಾಯದ ಎ.ಸಿ. ವಾಲಿ ಗುರೂಜಿ ಹೇಳಿದರು.
ಪರಸ್ಪರ ಪ್ರೀತಿಸುವುದನ್ನು ಹೇಳಿ ಕೊಟ್ಟಿರುವುದು ಹಿಂದು ಧರ್ಮ. ನಾವೆಲ್ಲ ಧರ್ಮಕ್ಕೆ ಬೆಲೆ ಬರುವಂತೆ ನಡೆದುಕೊಳ್ಳಬೇಕೆ ವಿನಃ ಕಿಮ್ಮತ್ತು ಕಳೆಯುವಂತಹ ಕೆಲಸ ಮಾಡಬಾರದು. ಜಗತ್ತು ಒಂದು ಹಳ್ಳಿಯಂತೆ. ಹುಟ್ಟು ಮತ್ತು ಸಾವು ಇವೆರಡರ ಮಧ್ಯದಲ್ಲಿನ ಬದುಕನ್ನು ರೂಪಿಸಿಕೊಳ್ಳಲು ಧರ್ಮ ಸಹಾಯ ಮಾಡುತ್ತದೆ. ಜೀವನದ ಪಾಠವನ್ನು ಕಲಿಸಿ ಧರ್ಮದ ಹಾದಿಯಲ್ಲಿ ನಡೆದರೆ ಜೀವನ ಸಾರ್ಥಕತೆ ಕಾಣುತ್ತದೆ. ಹಂಚಿ ತಿನ್ನುವುದನ್ನು ಹೇಳಿ ಕೊಟ್ಟಿರುವುದು ಹಿಂದೂ ಧರ್ಮ. ಹಂಚಿ ಉಂಡವನಿಗೆ ಇಂದು ಸಂಚಕಾರ ಬಂದಿದ್ದು, ಕೊಂಚ ಆಲೋಚನೆ ಮಾಡುವ ಸಂದರ್ಭ ಬಂದಿದೆ. ಪ್ರತಿಯೊಬ್ಬ ಹಿಂದೂಗಳು ಆಲೋಚನೆ ಮಾಡುವುದು ಅವಶ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಟೋಳಿ ಸದಸ್ಯರು, ಪ್ರಜ್ಞಾ ಪ್ರವಾಹ ರಘುನಂದನ ಜೀ ಭಾಗವಹಿಸಿ ದಿಕ್ಸೂಚಿ ನುಡಿಗಳನ್ನಾಡಿದರು. ದೇವನೊಬ್ಬ ನಾಮ ಹಲವು, ಸಕಲ ಚರಾಚರ ಸೃಷ್ಟಿಯಲ್ಲಿ ದೈವತ್ವವನ್ನು ಒಪ್ಪಿಕೊಳ್ಳುತ್ತಾನೋ ಅವನೇ ಹಿಂದೂ. ಭಾರತ ಮಾತೆಯನ್ನು ತಾಯಿ, ದೇವಿಗೆ ಹೋಲಿಸಿ ಭಾರತ ಮಾತಾ ಕೀ ಜೈ ಎನ್ನುವಂತ ವ್ಯಕ್ತಿ ಹಿಂದೂ. ಅದನ್ನು ಒಪ್ಪಿಕೊಳ್ಳದಂತಹ ವ್ಯಕ್ತಿ ಹಿಂದೂವಲ್ಲ. ಇಂತಹ ವ್ಯಕ್ತಿಗಳು ತಮ್ಮನ್ನು ತಾವು ಕಾಪಾಡಿಕೊಳ್ಳಲು, ಜಗತ್ತಿನ ಕಲ್ಯಾಣ ಬಯಸಲು ಒಂದಾಗುವುದು ಅವಶ್ಯವಾಗಿದೆ. ಆ ಪವಿತ್ರ ಸಂಕಲ್ಪದಿಂದ ಹಿಂದೂ ಸಮ್ಮೇಳನ ಆಯೋಜನೆ ಮಾಡಲಾಗಿದೆ ಎಂದರು.ವಿರಾಟ ಹಿಂದೂ ಸಮ್ಮೇಳನ ಸಮಿತಿ ಸವಣೂರು ಹೋಬಳಿ ಅಧ್ಯಕ್ಷ ಮಹೇಶ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾನ್ನಿಧ್ಯ ವಹಿಸಿ ಅಡವಿಸ್ವಾಮಿ ಮಠದ ಕುಮಾರ ಶ್ರೀಗಳು, ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿರಾಟ ಹಿಂದೂ ಸಮ್ಮೇಳನ ಸಮಿತಿ ಯಲವಿಗಿ ಹೋಬಳಿ ಅಧ್ಯಕ್ಷ ಸಿದ್ದಣ್ಣ ಡೊಳ್ಳಿನ, ಹೆಸರೂರ ಹೋಬಳಿ ಅಧ್ಯಕ್ಷ ಬಸನಗೌಡ ಅರಳಿಹಳ್ಳಿ ಹಾಗೂ ಸವಣೂರು ಹೋಬಳಿಯ ವಿವಿಧ ಗ್ರಾಮಗಳಿಂದ ಆಗಮಿಸಿದ ಜನರು ಇದ್ದರು. ಕಿರಣ ವಿವೇಕವಂಶಿ ಹಾಗೂ ಶ್ರೀನಿವಾಸ ಗಿತ್ತೆ ಕಾರ್ಯಕ್ರಮ ನಿರ್ವಹಿಸಿದರು.