ಶರಣ ಚಳವಳಿಗೆ ಪುನರ್ ಚಾಲನೆ ಕೊಡುವುದು ಅಗತ್ಯ

KannadaprabhaNewsNetwork |  
Published : Sep 17, 2025, 01:05 AM IST
ಚಿತ್ರದುರ್ಗ ಎರಡನೇ ಪುಟದ ಲೀಡ್  | Kannada Prabha

ಸಾರಾಂಶ

ಬಸವ ಸಂಸ್ಕೃತಿ ಅಭಿಯಾನದ ಅಂಗಾಗಿ ಮುರುಘಾಮಠದಲ್ಲಿ ಆಯೋಜಿಸಿದ್ದ ಪೂರ್ವ ಸಿದ್ದತಾ ಸಭೆಯಲ್ಲಿ ವಿಪ ಸದಸ್ಯ ಕೆ.ಎಸ್. ನವೀನ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

12ನೇ ಶತಮಾನದ ಶರಣ ಚಳವಳಿಗೆ ಪುನರ್ ಚಾಲನೆ ಕೊಡುವುದು ಅಗತ್ಯವೆಂದು ಹಿರಿಯೂರು ವೀರಶೈವ ಸಮಾಜದ ಮುಖಂಡ ಶಶಿಕಲಾ ರವಿಶಂಕರ್ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪದಲ್ಲಿ ಶರಣಸಂಸ್ಕೃತಿ ಉತ್ಸವ ಹಾಗೂ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಲಿಂಗಾಯತ, ವೀರಶೈವ, ಇತರ ಸರ್ವ ಸಮಾಜ ಬಾಂಧವರ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಿಶ್ವದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಹೆಣ್ಣಿಗೆ ಸರ್ವ ಸಮಾನತೆಯನ್ನು ನೀಡಿದ ಹಿರಿಮೆ ವಚನ ಚಳವಳಿಯದ್ದು ಎಂದರು.

ಭೋಗದ ವಸ್ತುವಾಗಿ, ಗೇಯುವ ಸರಕಾಗಿ ಪರಿಗಣಿಸಿದ್ದ ಕಾಲದಲ್ಲಿ ಪುರುಷನಷ್ಟೆ ಮಹಿಳೆ ಸರ್ವಶಕ್ತಳು, ಸರಿ ಸಮಾನಳು ಎನ್ನುವುದನ್ನು ಮನಗಂಡವರು ಬಸವಣ್ಣ. ಹಾಗಾಗಿ ಅವರನ್ನು ಯುಗದ ಉತ್ಸಾಹ ಎಂದು ಅಲ್ಲಮಪ್ರಭುದೇವರು ಬಣ್ಣಿಸಿದ್ದಾರೆ.

ಅವರ ಹೆಸರಿನ ಬಸವ ಸಂಸ್ಕೃತಿ ಅಭಿಯಾನ ಲಿಂಗಭೇದ, ಜಾತಿ, ವರ್ಗ, ವರ್ಣ, ಎಲ್ಲ ಮಿತಿಗಳನ್ನು ಮೀರಿ ನಡೆಯಬೇಕಿದೆ. ಅದರಲ್ಲಿ ಸರ್ವರೂ ಭಾಗವಹಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಈಗಾಗಲೇ ಸೆ.1ರಿಂದ ಆರಂಭವಾಗಿರುವ ಬಸವಸಂಸ್ಕೃತಿ ಅಭಿಯಾನ 15 ದಿನಗಳಿಂದ ಎಡೆಬಿಡದೆ ನಡೆದಿದೆ. ಎಲ್ಲಾ ಕಡೆಯೂ ತುಂಬಾ ಅರ್ಥಪೂರ್ಣವಾಗಿ ನಡೆದು ಸಾರ್ಥಕತೆ ಪಡೆದಿದೆ. ಬಸವತತ್ವ ಸಾಮೂಹಿಕ ಅನುಷ್ಠಾನಕ್ಕೆ ಬರಲು ಪರಸ್ಪರ ಸಹಕಾರ ಅಗತ್ಯ. ಅಂತಹ ಕೆಲಸ ಮುರುಘಾಮಠ ಮಾಡುತ್ತಿದೆ. ಅದರೊಂದಿಗೆ ಈಗ ಚಿತ್ರದುರ್ಗವು ಮಠಗಳ ರಾಜಧಾನಿ ಆಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹ ಕಾರ್ಯಕ್ಕೆ ಒಬ್ಬೊಬ್ಬರು ಹತ್ತು ಜನರನ್ನು ಕರೆತಂದರೆ ಸಾಕು ಯಶಸ್ವಿಯಾಗಲು ಸಾಧ್ಯವಿದೆ ಎಂದರು.

ಮುಖಂಡ ಜಿ.ಎಸ್ ಅನಿತ್‌ಕುಮಾರ್ ಮಾತನಾಡಿ, ಚಿತ್ರದುರ್ಗದಲ್ಲಿ ಒಂದು ಅಪರೂಪದ ಬಸವ ಸಂಸ್ಕೃತಿ ಅಭಿಯಾನ ಶರಣಸಂಸ್ಕೃತಿ ಉತ್ಸವ ಸಂದರ್ಭದಲ್ಲಿ ನಡೆಸಲು ತಯಾರಿ ನಡೆದಿದೆ. ಇಂತಹ ಸಂಸ್ಕೃತಿ ಬಿಂಬಿಸುವ ಉತ್ಸವಗಳ ಅಗತ್ಯವಿದೆ. ಅದಕ್ಕಾಗಿ ನನ್ನ ಸಹಕಾರವೂ ಇದೆ ಎಂದರು. ವರ್ತಕರಾದ ಶಂಕರಮೂರ್ತಿ, ಡಿ.ಎಸ್. ಸುರೇಶ್‌ಬಾಬು, ಲೇಖಕ ಆನಂದಕುಮಾರ್ ಮಾತನಾಡಿದರು.

ಹೊಸದುರ್ಗದಿಂದ ಆಗಮಿಸಿದ್ದ ಒಪ್ಪತ್ತಿನಸ್ವಾಮಿ ಮಠದ ಟ್ರಸ್ಟ್ ಹಾಗೂ ಎಸ್.ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಪದಾಧಿಕಾರಿ ಕೆ.ಎಸ್ ಕಲ್ಮಠ ಅವರು ಹೊಸದುರ್ಗದಿಂದ ಒಂದು ಸಾವಿರದಷ್ಟು ಜನರನ್ನು ಹೊರಡಿಸಲು ಪ್ರಯತ್ನ ನಡೆದಿದೆ. ಅದಕ್ಕಾಗಿ ಇದೇ 21 ರಂದು ಮತ್ತೆ ಸಭೆ ಕರೆಯಲಾಗಿದೆ ಎಂದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಅವರು, ಇದೇ ತಿಂಗಳ 20 ರಿಂದ ಅಕ್ಟೋಬರ್ 5 ರವರೆಗೆ ಹತ್ತಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆರೋಗ್ಯದ ಹಿತದೃಷ್ಟಿಯಿಂದ ಖ್ಯಾತ ಯೋಗಗುರು ಚೆನ್ನಬಸವಣ್ಣ ಅವರಿಂದ ಯೋಗ, ವಿವಿಧ ಮಠಗಳ ಶ್ರೀಗಳಿಂದ ಶಿವಯೋಗ, ಕೃಷಿ, ಮಹಿಳಾ, ಯುಜಜನ ಸಾಹಿತ್ಯ ಮತ್ತು ಜಾನಪದ ಗೋಷ್ಠಿಗಳು ಸೇರಿದಂತೆ ಅಥಣಿ ಮುರುಘೇಂದ್ರ ಶಿವಯೋಗಿಗಳ ಕಾರ್ಯಸಾಧನೆ, ಮುರುಘಾಮಠದ ಕತೃ ಸೇರಿದಂತೆ ಇನ್ನುಳಿದ ಶ್ರೀಗಳವರ ಜೀವನಸಾಧನೆ ಕುರಿತ ವಿಚಾರಸಂಕಿರಣ, ಮಕ್ಕಳಗೋಷ್ಠಿ, ಕುಸ್ತಿ, ಪಾರಂಪರಿಕ ಕಾರ್ಯಕ್ರಮಗಳ ಜತೆ ೨೮ರಂದು ವಿಶೇಷವಾಗಿ ಬಸವಸಂಸ್ಕೃತಿ ಅಭಿಯಾನ ನಡೆಯಲಿದೆ. ಅದಕ್ಕಾಗಿ ಜಿಲ್ಲೆಯ ಪ್ರತಿಷ್ಠೆಯ ಕಾರಣಕ್ಕಾಗಿ ಅರ್ಥಪೂರ್ಣವಾಗಿಸಲು ತಯಾರಿ ನಡೆದಿದೆ. 5 ಸಾವಿರ ಶರಣ-ಶರಣೆಯರು ಏಕಕಾಲಕ್ಕೆ ಹಾಡಿನ ವಚನ ಗಾನಸುಧೆ ವಚನ ಝೇಂಕಾರ ಏರ್ಪಡಿಸಲಾಗಿದೆ ಎಂದು ಹೇಳಿದರು.

ವಿವಿಧ ಸಮಾಜಗಳ ಮುಖಂಡರಾದ ಮಹಮ್ಮದ್ ನದಾಫ್, ಪೈಲ್ವಾನ್ ತಿಪ್ಪೇಸ್ವಾಮಿ, ಶ್ರೀನಿವಾಸ್, ಎಸ್. ಷಣ್ಮುಖಪ್ಪ, ಡಿ.ಎಸ್. ಮಲ್ಲಿಕಾರ್ಜುನ್, ಕೆಂಚವೀರಪ್ಪ, ಎಸ್.ವಿ. ನಾಗರಾಜಪ್ಪ, ಜಿ.ಎಸ್. ಉಜ್ಜಿನಪ್ಪ, ಇಂದಿರಾ ಜಯದೇವಮೂರ್ತಿ, ಅನಿತಾ ಮುರುಗೇಶ್, ಜಯಶೀಲ ವೀರಣ್ಣ ಸೇರಿದಂತೆ ವಿವಿಧ ಮಹಿಳಾ ಹಾಗೂ ಪುರುಷ ಸಂಘಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ