ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ವವೊ ಗೊತ್ತಿಲ್ಲ. ನಾವೂ ಯಾವ ಬದಲಾವಣೆ ಆಗಲಿದೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುವ ಆಸೆ ಇದೆ ಅಂದಿದ್ದಾರೆ, ಮೇ 4ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ವವೊ ಗೊತ್ತಿಲ್ಲ. ನಾವೂ ಯಾವ ಬದಲಾವಣೆ ಆಗಲಿದೆ ಎಂದು ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಪಂಚರಾಜ್ಯ ಚುನಾವಣೆಗಳ ಎಕ್ಸಿಟ್ ಪೋಲ್ ಕುರಿತು ಪ್ರತಿಕ್ರಿಯಿಸಿದ ಅವರು, ಆಸ್ಸಾಂನಲ್ಲಿ ಮೂರನೇ ಎರಡರಷ್ಟು ಬಹುಮತ ನಮಗೆ ಬರಲಿದೆ. ನಮ್ಮ ನಿರೀಕ್ಷೆಯಂತೆ ಎಕ್ಸಿಟ್ ಪೋಲ್ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯವರು ಎಷ್ಟೇ ಸಮಸ್ಯೆ ಮಾಡಲಿ, ಏನೇ ಹಿಂಸೆ ಕೊಡಲಿ, ಜನ ಬದಲಾವಣೆ ಬಯಸಿದ್ದಾರೆ. ಅಲ್ಲಿನ ಜನ ಶೇ. 90ರಷ್ಟು ಮತದಾನ ಮಾಡಿದ್ದಾರೆ. ಪಶ್ಚಿಮ ಬಂಗಾಳ ಫಲಿತಾಂಶ ದೇಶಕ್ಕೆ ದಿಕ್ಸೂಚಿ ಆಗಲಿದೆ. ಪಂಚರಾಜ್ಯ ಫಲಿತಾಂಶ ದೇಶಾದ್ಯಂತ ಬಿಜೆಪಿ ಸಾಧನೆಯ ಹೆಜ್ಜೆ ಆಗಿದೆ ಎಂದು ಹೇಳಿದರು.
ಸರ್ಕಾರ ಸತ್ತಿದೆ
ಬೆಂಗಳೂರಿನಲ್ಲಿ ಭಾರಿ ಮಳೆಗೆ ಸಾವು-ನೋವು ಸಂಭವಿಸಿದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ ಇವರು ಯಾವ ತಯಾರಿಯನ್ನೂ ಮಾಡಿಲ್ಲ. ಭಾರಿ ಮಳೆ ಆಗಬಹುದು ಅಂತ ಹವಾಮಾನ ಇಲಾಖೆ ಹೇಳುತ್ತಲೇ ಬಂದಿದೆ. ಆದರೂ ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ. ಈ ಸರ್ಕಾರ ಜನರ ಪಾಲಿಗೆ ಸತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬದಲಾವಣೆ ಗಾಳಿ
ಇನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವದ ಮೂಲಕ ರಾಜ್ಯದ ಮೂಲೆ ಮೂಲೆಗೂ ಸಂದೇಶ ಕೊಡುತ್ತೇವೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಬಹಳ ದೊಡ್ಡ ರಾಜಕೀಯ ಬದಲಾವಣೆ ಆಗಲಿದೆ. ಈ ಕಾರ್ಯಕ್ರಮ ಬಿಜೆಪಿ ಆಕಾಶದೆತ್ತರಕ್ಕೆ ಹಾರುವ ಕಾರ್ಯಕ್ರಮ. ಬಿ.ಎಸ್ ಯಡಿಯೂರಪ್ಪ ಅಭಿಮಾನೋತ್ಸವಕ್ಕೆ 10 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ದಾಖಲೆ ಪ್ರಮಾಣದಲ್ಲಿ ಕಾರ್ಯಕ್ರಮ ಆಗಲಿದೆ ಎಂದು ಹೇಳಿದರು.ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ.ರಾಘವೇಂದ್ರ
ಹಾವೇರಿ:
ಈಗಾಗಲೇ ಪಂಚ ರಾಜ್ಯ ಚುನಾವಣೆ ಎಕ್ಸಿಟ್ ಫೋಲ್ ನೋಡಿದ್ದೇವೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಕರ್ನಾಟಕದಲ್ಲಿ ಯಾವಾಗ ಚುನಾವಣೆ ಬರುತ್ತೆ ಅಂತ ಜನ ಕಾಯ್ತಿದ್ದಾರೆ. ಅಮಿತ್ ಶಾ ಅವರ ಮುಂದಿನ ದೃಷ್ಟಿ ಕರ್ನಾಟಕ ರಾಜ್ಯವಾಗಲಿದೆ ಎಂದರು.
ಹಾವೇರಿ ನಮ್ಮ ಪಕ್ಷಕ್ಕೆ ಶಕ್ತಿ ಕೊಟ್ಟ ಜಿಲ್ಲೆ, ಮೇ 9ರಂದು ಚಿತ್ರದುರ್ಗದಲ್ಲಿ ಯಡಿಯೂರಪ್ಪನವರ ರಾಜಕೀಯ ಜೀವನ 50 ವರ್ಷ ತುಂಬಿದ ಹಿನ್ನೆಲೆ ಅಭಿಮಾನೋತ್ಸವ ಮಾಡಲಾಗುತ್ತಿದೆ. ರಾಷ್ಟ್ರದಲ್ಲೇ ಮೊದಲ ಬಾರಿಗೆ ರೈತ ಬಜೆಟ್ ಕೊಟ್ಟವರು ಯಡಿಯೂರಪ್ಪನವರು. ಹುಟ್ಟಿನಿಂದ ಸಾವಿನವರೆಗೆ ಯೋಜನೆ, ಕಾರ್ಯಕ್ರಮ ಕೊಟ್ಟಿದ್ದಾರೆ. ಹೀಗಾಗಿ ಅವರ ಅಭಿಮಾನೋತ್ಸವ ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ. ಯುವಕರಿಗೆ ಇದು ದೊಡ್ಡ ಪ್ರೇರಣೆ ಆಗಲಿದ್ದು, ಜೊತೆಗೆ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಆಗಲಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.