ಕನ್ನಡಪ್ರಭ ವಾರ್ತೆ ಬೀಳಗಿ
ಇತ್ತೀಚೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆದೇಶವನ್ನು ಹೊರಡಿಸಿ ಕಡಿಮೆ ಫಲಿತಾಂಶ ಕೊಟ್ಟ ಶಿಕ್ಷಕರಿಗೆ ಹಾಗೂ ಶೇ.60ಕ್ಕೂ ಫಲಿತಾಂಶ ಕಡಿಮೆಯಾದರೆ ಅಂತಹ ಶಾಲೆಯ ಶಿಕ್ಷಕರಿಗೆ ಮುಂಬಡ್ತಿ ಇಲ್ಲ. ಅನುದಾನ ನೀಡುವುದಿಲ್ಲ ಎಂಬ ಅನೇಕ ವಿಚಾರಗಳನ್ನು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಎಸ್ಸೆಸ್ಸೆಲ್ಸಿ ಕಡಿಮೆ ಫಲಿತಾಂಶಕ್ಕೆ ನೇರವಾಗಿ ಶಿಕ್ಷಕರನ್ನೇ ಮಾತ್ರ ಹೊಣೆ ಮಾಡುವ ಸರ್ಕಾರದ ನಿಲುವು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ತಿಳಿಸಿದ್ದಾರೆ.ಫಲಿತಾಂಶ ಕಡಿಮೆ ಆಗಲು ಸರ್ಕಾರದ ಹಲವಾರು ನೀತಿ ನಿಯಮ ಕಾರಣವಾಗಿವೆ. ಪ್ರಸ್ತುತ ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಪೂ ಸೇರಿದಂತೆ ಒಟ್ಟಾರೆ 29,000 ಶಿಕ್ಷಕರ ಕೊರತೆ ಇದೆ. ಅನುದಾನಿತ ಶಾಲೆಗಳಲ್ಲಿ 10 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಶಿಕ್ಷಕರ ನೇಮಕಾತಿ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ ಹಾಗೂ ನಿಧನದಿಂದ ತೆರವಾಗಿರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡದೇ ಇರುವುದರಿಂದ ವಿಜ್ಞಾನ, ಗಣಿತ, ಇಂಗ್ಲೀಷ್ ಭಾಷೆ ಹಾಗೂ ಇತರ ವಿಷಯ ಬೋಧನೆ ಮಾಡಲು ಶಿಕ್ಷಕರ ಕೊರತೆಯಾಗಿ ಫಲಿತಾಂಶ ಕುಂಠಿತಗೊಂಡಿದೆ. ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗಲು ಮೂಲ ಕಾರಣ ಶಿಕ್ಷಕರನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳುವುದು, ಚುನಾವಣೆ ಸಂದರ್ಭ, ಜಾತಿಗಣತಿ, ಜನಗಣತಿ, ಹಾಲು, ಬಿಸಿಊಟ ಮತ್ತು ಬಟ್ಟೆ ಪೂರೈಕೆಯಂತಹ ಅನೇಕ ಸಂದರ್ಭಗಳಲ್ಲಿ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸುಧಾರಣೆ ಆಗುತ್ತಿಲ್ಲ. ಇವೆಲ್ಲ ಬೇರೆ ಬೇರೆ ಕೆಲಸಗಳಿಂದ ಶಿಕ್ಷಕರನ್ನು ಮುಕ್ತಿಗೊಳಿಸಿದಾಗ ಮಾತ್ರ ಶಿಕ್ಷಣದಲ್ಲಿ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರ ಆರ್.ಟಿ.ಇ 2009ರ ಕಾಯಿದೆ ತಿದ್ದುಪಡಿ ತಂದು 5 ಮತ್ತು 8ನೇ ತರಗತಿಗಳ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದವರಿಗೆ ಕಡ್ಡಾಯವಾಗಿ ಅದೇ ವರ್ಗದಲ್ಲಿ ಅಧ್ಯಯನ ಮಾಡುವಂತೆ ಸೂಚಿಸಿದೆ. ಈ ನಿಯಮವನ್ನು ಕೇಂದ್ರೀಯ ಮಹಾವಿದ್ಯಾಲಯ ಮತ್ತು ನವೋದಯ ವಿದ್ಯಾಲಯಗಳಲ್ಲಿ ಹಾಗೂ ಮುಂತಾದ ಶಾಲೆಗಳಲ್ಲಿ ಜಾರಿಗೆ ತರಲಾಗಿದೆ. ಇದೇ ರೀತಿಯ ನಿಯಮ ರಾಜ್ಯ ಸರ್ಕಾರ ರೂಪಿಸಬೇಕೆಂದು ಒತ್ತಾಯಿಸಿದ್ದಾರೆ. ಆದ್ದರಿಂದ ಫಲಿತಾಂಶ ಕಡಿಮೆ ಆದಂತಹ ಶಾಲೆಗಳ ಶಿಕ್ಷಕರ ಮೇಲೆ ವಾರ್ಷಿಕ ಬಡ್ತಿಯನ್ನು ತಡೆಹಿಡಿಯುವುದು ಮತ್ತು ನಿರಂತರ ನಾಲ್ಕೈದು ವರ್ಷಗಳವರೆಗೆ ಶೇ.60ಕ್ಕಿಂತ ಕಡಿಮೆ ಫಲಿತಾಂಶ ನೀಡಿದ ಶಾಲೆಗಳಿಗೆ ಅನುದಾನ ಕಡಿತ ಮಾಡುವ ವಿಚಾರವನ್ನು ಸರ್ಕಾರ ಸಂಪೂರ್ಣವಾಗಿ ಕೈಬಿಡಬೇಕೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಿಗೆ ಮತ್ತು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಆಗ್ರಹಿಸಿದ್ದಾರೆ.