ಹೊಸಪೇಟೆ : ವಿಶೇಷ ಚೇತನ ಮಕ್ಕಳಿಗಾಗಿ ಇರುವ ಸೌಲಭ್ಯಗಳ ಕುರಿತು ಸಮುದಾಯದ ಮಟ್ಟದಲ್ಲಿ ಸಾರ್ವಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ವಿಶೇಷ ಚೇತನ ಮಕ್ಕಳೊಂದಿಗೆ ಮಕ್ಕಳ ಜಾಥಾವನ್ನು ಹಂಪಿಯಲ್ಲಿ ನಡೆಸಲಾಯಿತು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸುಬ್ರಮಣ್ಯ ಎನ್., ಸಾಧ್ಯ ಸಂಸ್ಥೆಯ ಆರತಿ ಕೆ.ಟಿ. ಹಸಿರು ನಿಶಾನೆ ತೋರಿಸುವುದರ ಮೂಲಕ ಜಾಥಾಗೆ ಚಾಲನೆ ನೀಡಿದರು.
ಈ ಜಾಥಾ ಹಂಪಿ ಗ್ರಾಪಂ ಆವರಣದಿಂದ ಪ್ರಾರಂಭವಾಗಿ ಹಂಪಿಯ ಬೀದಿಗಳಲ್ಲಿ ಸಂಚರಿಸಿತು.ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಹಾಗೂ ನ್ಯಾಯಾಧೀಶ ಸುಬ್ರಮಣ್ಯ ಎನ್. ಮಾತನಾಡಿ, ವಿಶೇಷ ಚೇತನ ಮಕ್ಕಳಿಗೋಸ್ಕರ ಹಲವಾರು ಯೋಜನೆ ಹಮ್ಮಿಕೊಳ್ಳಲಾಗಿದೆ. ಯಾವುದೇ ಒಂದು ಸಮಸ್ಯೆಗೆ ಸಂಬಂಧಿಸಿದಂತೆ ವ್ಯಾಜ್ಯಗಳಿದ್ದರೆ, ನಮ್ಮ ಸಮಿತಿಗೆ ದೂರು ನೀಡಬಹುದು ಎಂದರು.ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಶಾಂತ್ ನಾಗಲಾಪುರ್ ಮಾತನಾಡಿ, 1919ರ ನ್ಯಾಷನಲ್ ಟ್ರಸ್ಟ್ ಕಾಯ್ದೆಯು ವಿಶೇಷ ಚೇತನ ಮಕ್ಕಳಿಗೋಸ್ಕರ ಹಲವಾರು ರೀತಿಯ ಯೋಜನೆಗಳನ್ನು ರೂಪಿಸಿಕೊಂಡು ಅವುಗಳನ್ನು ಕಾರ್ಯಗತಗೊಳಿಸಲು ಸೂಚಿಸುತ್ತದೆ ಎಂದರು.
ಸಾಧ್ಯ ಸಂಸ್ಥೆಯ ಆರತಿ ಕೆ.ಟಿ. ಮಾತನಾಡಿ, ಸಾಧ್ಯ ಸಂಸ್ಥೆಯು ಕಳೆದ 10 ವರ್ಷಗಳಿಂದ ವಿಶೇಷಚೇತನ ಮಕ್ಕಳಿಗೋಸ್ಕರ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದೆ. ನ್ಯಾಷನಲ್ ಟ್ರಸ್ಟ್ ನ ಅಡಿಯಲ್ಲಿ ನೋಂದಣಿಯಾಗಿರುವ ಉತ್ತರ ಕರ್ನಾಟಕದ ಕೆಲವೇ ಕೆಲವು ಸಂಸ್ಥೆಗಳಲ್ಲಿ ನಮ್ಮ ಸಾಧ್ಯ ಸಂಸ್ಥೆಯು ಒಂದಾಗಿದೆ. ನ್ಯಾಷನಲ್ ಟ್ರಸ್ಟ್ ನ ಹಲವಾರು ಸೇವೆಗಳಲ್ಲಿ ಸಮುದಾಯದ ಜನರಲ್ಲಿ ವಿಶೇಷ ಚೇತನರಿಗೋಸ್ಕರ ಇರುವ ಸೌಲಭ್ಯಗಳನ್ನು ಕುರಿತು ಮಾಹಿತಿ ನೀಡುವುದು ಸಹ ಒಂದಾಗಿದ್ದು, ಅದರ ಪ್ರಯುಕ್ತ ಈ ದಿನ ಬಡ್ತೆ ಕದಂ ಕಾರ್ಯಕ್ರವನ್ನು ಆಯೋಜಿಸಲಾಗಿದೆ ಎಂದರು.
ವಕೀಲೆ ಶ್ವೇತಾಂಬರಿ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರಾಮಾಂಜನೇಯ, ಹಂಪಿ ಗ್ರಾಪಂ ಅಧ್ಯಕ್ಷೆ ರಜನಿ ಷಣ್ಮುಖಗೌಡ, ಹಂಪಿ ಗ್ರಾಪಂ ಕಾರ್ಯದರ್ಶಿ ಕೆ.ಕೊಟ್ರೇಶ್, ಸಂಧ್ಯಾ ಕುಲಕರ್ಣಿ, ಹುಲಿಗೆಮ್ಮ ಎನ್., ಸಾವಿತ್ರಿ ಮತ್ತಿತರರಿದ್ದರು.
ತಾಲೂಕು ಕಾನೂನು ಸೇವಾ ಸಮಿತಿ ಹೊಸಪೇಟೆ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ನಗರದ ಸಾಧ್ಯ ಟ್ರಸ್ಟ್ ಫಾರ್ ಸೋಷಿಯಲ್ ಡೆವೆಲಪ್ಮೆಂಟ್, ನ್ಯಾಷನಲ್ ಟ್ರಸ್ಟ್ ನವದೆಹಲಿ, ಗ್ರಾಪಂ ಹಂಪಿ, ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ ಇವುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.