ಮೆಣಸೆ ಸರ್ಕಾರಿ ಕ ಶಾಲಾವರಣದಲ್ಲಿ ಮಕ್ಕಳ ದಿನಾಚರಣೆ
ಮಕ್ಕಳು ದೇಶದ ನಿಜವಾದ ಭವಿಷ್ಯದ ರೂವಾರಿಗಳು. ಮಕ್ಕಳನ್ನು ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟು ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯ ರೂಪಿಸುವುದು ನಮ್ಮೆಲ್ಲರ ಹೊಣೆ ಎಂದು ಮೆಣಸೆ ಶಾಲೆ ಮುಖ್ಯ ಶಿಕ್ಷಕ ಡಾ.ಬಿ.ಆರ್.ಗಂಗಾಧರಪ್ಪ ಹೇಳಿದರು.
ತಾಲೂಕಿನ ಮೆಣಸೆ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೆಹರು ಮಕ್ಕಳ ಬಗ್ಗೆ ಅಪಾರವಾದ ಪ್ರೀತಿ, ವಾತ್ಸಲ್ಯ ಹೊಂದಿದ್ದರು. ಅವರು ಮಕ್ಕಳನ್ನು ದೇಶದ ನಿಜವಾದ ಆಸ್ತಿ ಹಾಗೂ ಸಮಾಜದ ಅಡಿಪಾಯ ಎಂದು ಪರಿಗಣಿಸಿದ್ದರು. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣ ಪೋರೈಸಬೇಕೆಂಬುದು ನೆಹರು ಅವರ ಮುಖ್ಯ ಧ್ಯೇಯವಾಗಿತ್ತು. ಆದ್ದರಿಂದ ಅವರ ಸವಿನೆನಪಿಗೆ ನ.14 ರಂದು ಪ್ರತಿ ವರ್ಷ ಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ.ಮಕ್ಕಳಲ್ಲಿ ನೈತಿಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಬಾಲಕಾರ್ಮಿಕ ಪದ್ಧತಿಯಿಂದ ಮಕ್ಕಳನ್ನು ರಕ್ಷಿಸುವುದು. ಅವರಿಗೆ ಉತ್ತಮ ಶಿಕ್ಷಣ ಕೊಡಿಸುವುದು, ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದು, ಎಲ್ಲಾ ವರ್ಗದ ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಿಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.
ಶೃಂಗೇರಿ ಮೆಣಸೆ ಶಾಸಕರ ಮಾದರಿ ಶಾಲೆಯಲ್ಲಿ ಮಕ್ಕಳ ದಿನಾಚಾರಣೆ ಕಾರ್ಯಕ್ರಮ ಆಚರಿಸಲಾಯಿತು.