ಗದಗ: ಬದಲಾಗುತ್ತಿರುವ ಕುಟುಂಬ ರಚನೆಗಳು, ಜೀವನ ಶೈಲಿ, ಆಧುನಿಕರಣದತ್ತ ಒಲವು, ಹಿರಿಯರ ಬಗ್ಗೆ ನಿರ್ಲಕ್ಷ್ಯ ಭಾವನೆ ಇವುಗಳಿಂದಾಗಿ ವೃದ್ಧಾಶ್ರಮಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ವಿಷಾದನೀಯ ಎಂದು ಜೇಂಟ್ಸ್ ಗ್ರೂಪ್ ಆಫ್ ಸಖಿ ಸಹೇಲಿ ಅಧ್ಯಕ್ಷೆ ಸುಮಾ ಪಾಟೀಲ ಹೇಳಿದರು.
ವಿದ್ಯಾ ಶಿವನಗುತ್ತಿ ಮಾತನಾಡಿ, ಆರ್ಥಿಕ ಬೆಂಬಲದ ಕೊರತೆ ಹಾಗೂ ಸಾಂಪ್ರದಾಯಿಕ ಅವಿಭಕ್ತ ಕುಟುಂಬ ವ್ಯವಸ್ಥೆ ಮುರಿದು ಬೀಳುವುದು ವೃದ್ಧರನ್ನು ಪ್ರತ್ಯೇಕವಾಗಿಸುತ್ತದೆ. ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಬದಲು ತಮ್ಮ ಮನೆಯಲ್ಲಿಯೇ ಅವರಿಗೆ ಪ್ರೀತಿ ತೋರಿಸಿದರೆ ಇಳಿ ವಯಸ್ಸಿನಲ್ಲಿ ಅವರಿಗೆ ನೆಮ್ಮದಿ ಸಿಗುವುದು ಎಂದರು.
ಚಂದ್ರಕಲಾ ಸ್ಥಾವರಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದೆ ವಯಸ್ಕ ಮಕ್ಕಳು ತಮ್ಮ ವಯಸ್ಸಾದ ತಂದೆ ತಾಯಿಗಳನ್ನು ಪೋಷಿಸುವ, ಗೌರವಿಸುವ ಹಾಗೂ ಯಜಮಾನಿಕೆ ನೀಡಿ ಅವರ ಆಜ್ಞೆ ಪಾಲಿಸುವ ಕಾಲವಿತ್ತು. ಯುವ ಪೀಳಿಗೆ ಹೆಚ್ಚು ಸ್ವತಂತ್ರ ಆಗುತ್ತಿದ್ದಂತೆಯೇ ಹಿರಿಯರ ಬಗೆಗಿನ ಚಿಂತನೆಗಳು ಬದಲಾಗಿವೆ ಎಂದರು.ಸುಗ್ಗಲಾ ಯಳಮಲಿ ಮಾತನಾಡಿ, ಹಿರಿಯರು ಮನೆಯಲ್ಲಿದ್ದರೆ ಆ ಮನೆ ನೆಮ್ಮದಿಯ ತಾಣ. ಮಕ್ಕಳಿಗೆ ಪಾಲಕರಾಗಿ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜ-ಅಜ್ಜಿಯಾಗಿ ಇರುವ ಅವರು, ನಾವೆಲ್ಲರೂ ಮನೆಯ ಕಾರ್ಯಗಳನ್ನು ಹಾಗೂ ಬದುಕನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ತಿದ್ದಿ ತೀಡುವ ಗುರುಗಳು ಎಂದರು.
ಶಶಿಕಲಾ ಮಾಲೀಪಾಟೀಲ, ಮಂಜುಳಾ ಲಕ್ಕುಂಡಿ, ನಿರ್ಮಲಾ ಪಾಟೀಲ ಉಪಸ್ಥಿತರಿದ್ದರು. ಅಶ್ವಿನಿ ಮಾದಗುಂಡಿ ಪ್ರಾರ್ಥಿಸಿದರು. ಶಾಂತಾ ತುಪ್ಪದ ಸ್ವಾಗತಿಸಿದರು. ರೇಖಾ ರೊಟ್ಟಿ ಪರಿಚಯಿಸಿದರು. ಶ್ರೀದೇವಿ ಮಹೇಂದ್ರಕರ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಿತಾ ವೆರ್ಣೇಕರ ವಂದಿಸಿದರು.