ಕನ್ನಡಪ್ರಭ ವಾರ್ತೆ ಬೈಲಹೊಂಗಲ
ನಗರದ ಕಾರ್ಮೆಲ್ ವಿದ್ಯಾ ವಿಕಾಸ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬುದ್ಧಿಮಾಂದ್ಯತೆ ಹೊಂದಿದ ಮಕ್ಕಳಿಗೆ ಓದು ಬರಹ, ಶಿಸ್ತು ಮತ್ತು ಸಾಮಾಜಿಕ ಕೌಶಲ್ಯ, ದೈನಂದಿನ ಕೆಲಸ ಮಾಡುವ ಬಗೆ, ಈ ಎಲ್ಲವನ್ನೂ ತಾಳ್ಮೆಯಿಂದ ಕಲಿಸಿಕೊಡುವುದು ಅತ್ಯವಶ್ಯಕ ಎಂದು ಹೇಳಿದರು.
ಕಳೆದ 25 ವರ್ಷದಿಂದ ಸಾರ್ಥಕ ಸೇವೆ ಮಾಡುತ್ತಿರುವ ಶಾಲೆಯ ಸಾಧನೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ವಿಶೇಷ ಚೇತನ ಮಕ್ಕಳಿಗೆ ಧೈರ್ಯ ತುಂಬಿ ಸಾಮಾನ್ಯರೊಂದಿಗೆ ಸ್ಪರ್ಧಿಸುವ ಮಟ್ಟಿಗೆ ಬೆಳೆಸುವುದು ಸುಲಭದ ಮಾತಲ್ಲ. ಇಂಥ ಮಹಾನ್ ಕಾರ್ಯ ಮಾಡುತ್ತಿರುವ ಶಾಲೆಯ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.ಮದರ್ ತೇರೆಸಾ ವಿಶೇಷ ಚೇತನರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಸಂಗೊಳ್ಳಿ ರಾಯಣ್ಣ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮನಂಥ ಸಾಧಕರ ಸಾಧನೆ ಪರಿಚಯಿಸುವ ಮೂಲಕ ವಿಶೇಷ ಚೇತನರಿಗೆ ಧೈರ್ಯ ತುಂಬಬೇಕಿದೆ. ಕ್ರೈಸ್ತ್ ಮಿಷನರಿ ಸಂಸ್ಥೆಗಳು ಶಿಸ್ತು ಹಾಗೂ ಸಮಯ ಪಾಲನೆಗೆ ಹೆಸರುವಾಸಿಯಾಗಿದ್ದು, ಭಾರತದಲ್ಲಿ ಶಿಕ್ಷಣ ವ್ಯವಸ್ಥೆಗೆ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿವೆ ಎಂದರು.
ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಮಹಾಂತೇಶ ಕೌಜಲಗಿ, ಕಾಂಗ್ರೆಸ್ ಮುಖಂಡ ಮಹಾಂತೇಶ ಮತ್ತಿಕೊಪ್ಪ, ಶಾಲೆಯ ಮುಖ್ಯಶಿಕ್ಷಕಿ ಭಗಿನಿ ರೀಟಾ ಪಿಂಟೂ ಎ.ಸಿ, ಭಗಿನಿ ಪ್ಲಾವಿನಾ ಎ.ಸಿ, ಭಗಿನಿ ಸುದೀಪಾ ಎ.ಸಿ, ಫಾದರ್ ರಿಚರ್ಡ್, ಬೈಲಹೊಂಗಲ ಪುರಸಭೆ ಮಾಜಿ ಅಧ್ಯಕ್ಷ ರಾಜು ಜನ್ಮಟ್ಟಿ, ಪುರಸಭೆ ಸದಸ್ಯ ಅರ್ಜುನ ಕಲಕುಟಕರ್ ಹಾಗೂ ಶಾಲಾ ಸಿಬ್ಬಂದಿ ಇದ್ದರು.