ವಿಶೇಷ ವರದಿ
ರಸ್ತೆಯಲ್ಲಿ ಆಳವಾದ ಹೊಂಡಗಳು ಮತ್ತು ಕೆಸರು ತುಂಬಿದ್ದು, ವಾಹನ ಸಂಚಾರಕ್ಕೆ ಅಸಾಧ್ಯವಾದ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಪರದಾಡುತ್ತಿದ್ದಾರೆ.
ಇತ್ತೀಚೆಗೆ ಜಿಲ್ಲಾದ್ಯಂತ ಮಳೆ ಸುರಿದ ಕಾರಣ ನರಸಾಪುರ ಗ್ರಾಮದ ಮುಖ್ಯ ರಸ್ತೆಯು ಕೆಸರುಮಯವಾಗಿ, ದೊಡ್ಡ ಗಾತ್ರದ ಹಳ್ಳಗಳಿಂದ ತುಂಬಿದೆ. ನರಸಾಪುರ ಗ್ರಾಮಕ್ಕೆ ನಿತ್ಯವೂ ಶಾಲೆಗೆ ತೆರಳುವ ಮಕ್ಕಳನ್ನು ಕರೆ ತರುವ ಶಾಲಾ ಬಸ್ ಕೆಸರಿನಲ್ಲಿ ಆಳವಾಗಿ ಸಿಲುಕಿಕೊಂಡು ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ.ಅದರಲ್ಲಿಯೂ ಕಳೆದ ಎರಡೂ ದಿನಗಳಿಂದ ಗ್ರಾಮಕ್ಕೆ ತೆರಳಿದ ಶಾಲಾ ಬಸ್ ಅಲ್ಲಿಯೇ ಸಿಕ್ಕಿ ಹಾಕಿಕೊಂಡು ಹೊರತೆಗೆಯಲು ಪರದಾಡಿದರು. ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ಬಸ್ನಲ್ಲಿದ್ದ ಶಾಲಾ ಮಕ್ಕಳನ್ನು ಕೆಳಗಿಳಿಸಿ ಬಸ್ ಹೊರತೆಗೆಯಲು ದಿನಗಟ್ಟಲೇ ಕಷ್ಟ ಪಟ್ಟಿದ್ದಾರೆ.
ನರಸಾಪುರ ಗ್ರಾಮದ ಸಾರ್ವಜನಿಕರು ಈ ಕುರಿತು ಹಾತಲಗೇರಿ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಪ್ರತಿದಿನ ಈ ರಸ್ತೆಯಲ್ಲಿ ಭಯದಿಂದ ಓಡಾಡಬೇಕು. ಶಾಲಾ ಮಕ್ಕಳಿಗೆ ಆಗುತ್ತಿರುವ ತೊಂದರೆ ನೋಡಿದರೆ ಅಧಿಕಾರಿಗಳಿಗೆ ನಮ್ಮ ಮೇಲೆ ಯಾವುದೇ ಕಾಳಜಿ ಇಲ್ಲವೇ ಎಂದು ಸ್ಥಳೀಯ ನಿವಾಸಿ ರವಿರಾಜ ತಳವಾರ ತಿಳಿಸಿದರು.