ಹಾಲಿ, ಮಾಜಿ ಸಂಸದರು ಇತಿಹಾಸ ತಿಳಿಯಲಿ

KannadaprabhaNewsNetwork |  
Published : Aug 05, 2025, 12:30 AM IST
48 | Kannada Prabha

ಸಾರಾಂಶ

ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಜನಪರ ಅಭಿವೃದ್ಧಿಗಾಗಿ ಅವಿರತವಾಗಿ ಕೆಲಸ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಲೋಚನೆಗಳಿಗೂ, ಸದಾ ಮೀಸಲಾತಿ ವಿರೋಧಿ ಧೋರಣೆ

ಕನ್ನಡಪ್ರಭ ವಾರ್ತೆ ಮೈಸೂರುಸುಳ್ಳಿನ ಪಕ್ಷವೆಂದೇ ಹೆಸರಾಗಿರುವ ಬಿಜೆಪಿಗರು ಮತ್ತು ಇದೀಗ ಬಿಜೆಪಿ ಪಕ್ಷದ ಒಳಗೆ ವಿಲೀನಗೊಳ್ಳುವ ಎಲ್ಲಾ ಲಕ್ಷಣಗಳೊಂದಿಗೆ ಮುನ್ನಡೆಯುತ್ತಿರುವ ಜೆಡಿಎಸ್ ಪಕ್ಷದವರು ಇತಿಹಾಸದ ವಿವರಣೆಯ ವಿಷಯದಲ್ಲಿ ಅತ್ಯಂತ ಅವಸರದಿಂದ ಪ್ರತಿಕ್ರಿಯೆ ನೀಡುತ್ತಿರುವುದನ್ನು ನೋಡಿದರೆ ನಿಜಕ್ಕೂ ಇವರ ಪ್ರಜ್ಞೆಗೆ ಏನಾಗಿದೆ ಎಂದು ನನಗೆ ಗೊಂದಲವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.ಕಾವೇರಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಟಿಪ್ಪು ಸುಲ್ತಾನ್ ಅವರಿಗಿದ್ದ ಆಲೋಚನೆಯನ್ನು ಶಾಸನ ರೂಪದಲ್ಲಿ ಕೆ.ಆರ್.ಎಸ್ ನಲ್ಲೇ ಹಾಕಲಾಗಿದೆ. ಆ ಫಲಕವನ್ನು ಹಾಕಿದ್ದು ಅಂದಿನ ಅರಸರ ಕಾಲದಲ್ಲೇ ಹೊರತು ಅದನ್ನು ಹಾಕಿದ್ದು ಕಾಂಗ್ರೆಸ್ ಸರ್ಕಾರ ಅಲ್ಲ ಎಂಬ ಸಣ್ಣ ಜ್ಞಾನ ಇಲ್ಲದೇ ಬಿಜೆಪಿಗರು ವರ್ತಿಸುತ್ತಿರುವುದು ಹಾಸ್ಯಾಸ್ಪದ ಎಂದಿದ್ದಾರೆ.ಸಾಮಾಜಿಕ ನ್ಯಾಯಕ್ಕಾಗಿ ಮತ್ತು ಜನಪರ ಅಭಿವೃದ್ಧಿಗಾಗಿ ಅವಿರತವಾಗಿ ಕೆಲಸ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಲೋಚನೆಗಳಿಗೂ, ಸದಾ ಮೀಸಲಾತಿ ವಿರೋಧಿ ಧೋರಣೆ ಅನುಸರಿಸುತ್ತಾ, ಬಾಬಾ ಸಾಹೇಬರ ಆಶಯಗಳನ್ನು ಗಾಳಿಗೆ ತೂರಿರುವ ಬಿಜೆಪಿಯವರಿಗೂ ಯಾವ ಕಾಲಕ್ಕೂ ಹೋಲಿಕೆ ಇಲ್ಲ. ಹೀಗಿರುವಾಗ ಅಂತಹ ಬಿಜೆಪಿ ಪಕ್ಷದ ಭಾಗವಾಗಿಯೇ ಇದ್ದುಕೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ಮಾತನಾಡುತ್ತಿರುವ ಮೈಸೂರಿನ ಹಾಲಿ ಮತ್ತು ಮಾಜಿ ಸಂಸದರು ಮೊದಲು ಇತಿಹಾಸ ಓದುವುದನ್ನು ಕಲಿಯಲಿ ಎಂದಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ಒಂದು ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಆಲೋಚನೆ ಹೊಂದಿದ್ದರು ಮತ್ತು ಕೆಲಸವನ್ನು ಪೂರ್ಣಗೊಳಿಸಿದರು ಎಂಬ ಮಾತಿನ ನಡುವೆ ಇರುವ ಸುಲಭವಾದ ವ್ಯತ್ಯಾಸವನ್ನು ಬಿಜೆಪಿ ಮತ್ತು ಜೆಡಿಎಸ್ ನವರು ಅರ್ಥ ಮಾಡಿಕೊಳ್ಳಬೇಕು. ಈ ವಿಷಯದಲ್ಲಿ ಇವರು ಅನಗತ್ಯ ರಾಜಕೀಯ ಮಾಡುತ್ತಿರುವುದು ಮೇಲ್ನೋಟಕ್ಕೇ ಕಾಣ ಬರುತ್ತಿರುವುದರಿಂದ ಘನತೆಯಿಲ್ಲದ ರಾಜಕಾರಣ ಮಾಡುವುದಕ್ಕಾಗಿಯೇ ಇವರು ಹೀಗೆಲ್ಲಾ ಮಾಡುತ್ತಿದ್ದಾರೆ ಎಂಬುದು ಅತ್ಯಂತ ಸತ್ಯ.ಜನಪರವಾಗಿ ಹಲವಾರು ಕೆಲಸ ಮಾಡಿದ ರಾಜರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಗ್ರಗಣ್ಯರು. ಟಿಪ್ಪು ಸುಲ್ತಾನ್ ಒಳಗೊಂಡಂತೆ ಜನಪರವಾಗಿದ್ದ ಯಾವುದೇ ಜನರ ವಿಷಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅತ್ಯಂತ ಪ್ರೀತಿ ಮತ್ತು ಗೌರವದ ಭಾವನೆ ಹೊಂದಿದ್ದರು.ಈ ಕಾರಣಕ್ಕಾಗಿಯೇ ಒಡೆಯರ ಕಾಲದಿಂದಲೂ ಆ ಫಲಕವು ಅಲ್ಲೇ ಇದೆ. ಜಾತಿ, ಧರ್ಮ ನೋಡದೇ ಎಲ್ಲರ ಜನಪರತೆಯನ್ನು ಗೌರವಿಸುತ್ತಿದ್ದ ಮತ್ತು ಬದುಕಿನಲ್ಲೂ ಸಾಮಾಜಿಕ ನ್ಯಾಯಕ್ಕಾಗಿ ದುಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ, ರಾಜಕೀಯ ಮಾಡಲೆಂದೇ ವಿಷಯವನ್ನು ತಿರುಚಿ ಮಾತನಾಡುತ್ತಿರುವ ಬಿಜೆಪಿ ಸಂಸದ ಒಡೆಯರ್ ಅವರಿಗೂ ಸಾಕಷ್ಟು ವ್ಯತ್ಯಾಸ ಇದೆ ಎಂಬುದಕ್ಕೆ ಅವರ ನಡವಳಿಕೆಯೇ ಉದಾಹರಣೆ ಎಂದಿದ್ದಾರೆ.ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿಯ ಉದ್ದೇಶವನ್ನು ಮತ್ತು ಅವರ ಸಾಧನೆಗಳನ್ನು ಜಾತಿ ಧರ್ಮದ ಮಾನದಂಡದಲ್ಲಿ ಅಳೆಯುವ ಕೆಲಸಕ್ಕೆ ಪ್ರಜ್ಞಾವಂತರೇ ಇಳಿದಿರುವುದು ಮತ್ತು ಮಾತಿನ ಅರ್ಥವನ್ನು ಅರಿಯದೇ ರೋಚಕ ಸುದ್ದಿ ಮಾಡುವ ಅವಸರದಲ್ಲಿ ವಿಷಯ ತಿರುಚುವವರು ಕೂಡಾ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ