ಕನ್ನಡಪ್ರಭ ವಾರ್ತೆ ಹಾಸನ
ಯುವ ಜನತೆ ಪ್ರಸ್ತುತದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಲಿಯುವ ವಯಸ್ಸಿನಲ್ಲಿ ಸಮಯ ವ್ಯರ್ಥ ಮಾಡುತ್ತಾ ದೇಶಕ್ಕೆ ಹೊರೆಯಾಗುತ್ತಿದ್ದಾರೆ. ಮಕ್ಕಳು ಮೊಬೈಲ್ಗಳಿಗೆ ಬಲಿಯಾಗದೇ ಉದ್ದೇಶವನ್ನರಿತು ತಮ್ಮ ಗುರಿಸಾಧನೆ ಕಡೆಗೆ ಮುನ್ನಡೆಯಬೇಕು ಎಂದು ಜಿಲ್ಲಾ ಪ್ರಧಾನ ಹಾಗೂ ಹಿರಿಯ ಸತ್ರ ನ್ಯಾಯಾಧೀಶರಾದ ಹೇಮಲತಾ ತಿಳಿಸಿದರು.ನಗರದ ಎವಿಕೆ ಕಾಲೇಜು ಸಭಾಂಗಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಇತರೆ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಬಾಲ್ಯವಿವಾಹ ನಿಷೇಧ, ಪೋಕ್ಸೋ ಕಾಯಿದೆಗಳ ಸಂರಕ್ಷಣೆ ಬಗ್ಗೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮ ದೇಶ ಅತಿ ಹೆಚ್ಚು ಮಾನವ ಸಂಪನ್ಮೂಲವನ್ನು ಹೊಂದಿದ ದೇಶ. ಶೇ. ೪೦ರಷ್ಟು ಮಹಿಳೆಯರು ತುಂಬಿದ್ದಾರೆ. ಇವರು ಉತ್ತಮ ಶಿಕ್ಷಣ, ಕೌಶಲ್ಯಗಳಿಸಿದರೆ ಆ ದೇಶ ಮತ್ತು ಸಮಾಜಕ್ಕೆ ಅಮೂಲ್ಯ ಸಂಪನ್ಮೂಲವಾಗುತ್ತಾರೆ. ಆದರೆ ಯುವ ಜನತೆ ಮೊಬೈಲ್ಗಳಿಗೆ ಬಲೆಯಾದ ಸಂಪನ್ಮೂಲವಾಗುವ ಬದಲು ದುಶ್ಚಟಗಳು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತಮ್ಮ ಅಮೂಲ್ಯ ಕಲಿಯುವ ವಯಸ್ಸಿನಲ್ಲಿ ಸಮಯ ವ್ಯರ್ಥಮಾಡುತ್ತಾ ದೇಶಕ್ಕೆ ಹೊರೆಯಾಗುತ್ತಿದ್ದಾರೆ. ಹಾಗಾಗಿ ಹರಿಹರೆಯದ ಮಕ್ಕಳು ಸಾಮಾಜಿಕ ಜಾಲತಾಣ, ಮೊಬೈಲ್ಗಳಿಗೆ ಬಲಿಯಾಗದೆ ತಮ್ಮ ಗುರಿ ಸಾಧನೆಯಡೆಗೆ ಮುನ್ನೆಡೆಯಿರಿ ಎಂದು ಸಲಹೆ ನೀಡಿದರು.
ಮಕ್ಕಳು ನಮ್ಮ ಅಮೂಲ್ಯ ಆಸ್ತಿ, ನಿಮಗೆ ಸಮಾಜ, ಕುಟುಂಬ ಹಾಗೂ ದೇಶ ಉತ್ತಮ ಅವಕಾಶಗಳನ್ನು ಕಲ್ಪಿಸಿದೆ, ಉತ್ತಮ ಪೌಷ್ಠಿಕ ಆಹಾರ ಸಿಗುತ್ತದೆ. ಈ ಅವಕಾಶ ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯಿರಿ, ಹೊಸ-ಹೊಸ ಅನ್ವೇಷಣೆಯಲ್ಲಿ ತೊಡಗಿ ಸಾಧಿಸಿ, ದೇಶ ಮುನ್ನೆಡನೆ ಎಂದು ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಬಿ.ಕೆ. ದಾಕ್ಷಾಯಣಿ ಮಾತನಾಡುತ್ತಾ, ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿಯೂ ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಹರಿಹರೆಯದ ಮಕ್ಕಳು ತಮ್ಮ ವಯಸ್ಸಿನಲ್ಲಿ ಆಗುವ ಬದಲಾವಣೆ, ಬೆಳವಣಿಗೆಯಿಂದ ಆಕರ್ಷಣೆಗಳಿಗೆ ಒಳಗಾಗುತ್ತಾರೆ. ಸಣ್ಣ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿಹೋಗುವುದು, ಬಾಲ್ಯವಿವಾಹಕ್ಕೆ ಒಳಾಗಾಗುವುದು, ತದನಂತರ ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುತ್ತಾರೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗಿ ತಮ್ಮ ಅಮೂಲ್ಯ ಜೀವನ ಹಾಳುಮಾಡಿಕೊಳ್ಳಬಾರದು, ಜೀವನದಲ್ಲಿ ಉತ್ತಮ ಆಲೋಚನೆ, ನಡವಳಿಕೆ ಬೆಳೆಸಿಕೊಳ್ಳಿ ಉತ್ತಮ ಪ್ರಜೆಗಳಾಗಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ಜಿ. ದಿಲೀಪ್ ಮಾತನಾಡುತ್ತಾ, ಜಿಲ್ಲೆಯಲ್ಲಿ ಕಂಡು ಬರುವ ಅನಾಥ, ಪರಿತ್ಯಕ್ತ, ಸಂಕಷ್ಟ ಹಾಗೂ ಹಿಂಸೆ ದೌರ್ಜನ್ಯಗಳಿಗೆ ಒಳಗಾಗಿ ಬರುವ ಮಕ್ಕಳಿಗೆ ರಕ್ಷಣೆ, ಆಪ್ತ ಸಮಾಲೋಚನೆ, ಶಿಕ್ಷಣ ಹಾಗೂ ವಸತಿಯುತ ಪುನರ್ವಸತಿ ಕಲ್ಪಿಸಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಶ್ರಮಿಸುತ್ತಿದೆ. ಯಾವುದೇ ಸಂಕಷ್ಟ ಪರಿಸ್ಥಿತಿಯಲ್ಲಿನ ಮಕ್ಕಳು ಕಂಡುಬಂದರೆ 1098ಕ್ಕೆ ಕರೆ ಮಾಡಿ ಸಹಾಯ ಪಡೆಯುವಂತೆ ತಿಳಿಸಿದರು.ಇದೇ ವೇಳೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕಾಂತರಾಜು ಬಾಲ್ಯವಿವಾಹಕ್ಕೆ ಕಾರಣಗಳು, ಪರಿಣಾಮಗಳು ಹಾಗೂ ಕಾನೂನಿನ ಕುರಿತು ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳಿಗೆ ಪರಿಚಯಿಸಿದರು. ಎ.ವಿ.ಕೆ. ಪಿ ಯು ಕಾಲೇಜು ಹಾಸನ ಇವರು ವಹಿಸಿದ್ದರು, ಉಪನ್ಯಾಸಕರದ ಮುರುಳಿ, ಸುನೀಲ್, ಇತರರು ಉಪಸ್ಥಿತರಿದ್ದರು.