ಗಜೇಂದ್ರಗಡ: ಯಾಜ್ಞವಲ್ಕ್ಯರು ಸಾಕ್ಷಾತ್ ವಿಷ್ಣುಸ್ವರೂಪರು. ಮುಕ್ತಿಮಾರ್ಗದಿಂದ ಅಗ್ರಧೂತನಾಗಿ ಅವತರಿಸಿದ ಅವರಿಗೆ ಸೂರ್ಯ ನಾರಾಯಣನಿಂದ ವೇದೋಪದೇಶವಾಗಿದೆ. ಅಂತಹ ವೇದವನ್ನು ಜಗತ್ತಿಗೆ ಸಾರಿದ ಮಹಾಮಹಿಮರು ಎಂದು ಸಮಾಜದ ಅಧ್ಯಕ್ಷ ರಾಮಚಂದ್ರ ಗಾಡಗೋಳಿ ಹೇಳಿದರು.
ಆದಿ ಶಂಕರಾಚಾರ್ಯರು ಹಾಗೂ ಆನಂದಗಿರಿ ಇವರಿಬ್ಬರು ಯಾಜ್ಞವಲ್ಕ್ಯರು ಚರ್ತುರ್ವೇದವೇತ್ತರು ಹಾಗೂ ಉಪನಿಷತ್ ಭಾಷ್ಯಾದಲ್ಲಿ ಭಗವಾನ ಎಂದು ಸಂಬೋಧಿಸಿ ಅವರ ಶ್ರೇಷ್ಠತೆ ಕೊಂಡಾಡಿದ್ದಾರೆ. ಮನುಕುಲದ ಉದ್ಧಾರಕ್ಕಾಗಿ ಯೋಗೀಶ್ವರ ಯಾಜ್ಞವಲ್ಕ್ಯಮಹರ್ಷಿಗಳ ಕೊಡುಗೆ ಅಪಾರ. ಈ ಹಿನ್ನೆಲೆ ಅವರ ತತ್ವ-ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಮುಂದಾಗಬೇಕು ಎಂದರು.
ಸುರೇಶಭಟ್ಟ ಪೂಜಾರ ಮಾತನಾಡಿ, ಯೋಗೀಶ್ವರ ಯಾಜ್ಞವಲ್ಕ್ಯ ಮಹರ್ಷಿಗಳು ವೇದ ಪುರುಷರಾಗಿದ್ದು, ಮಾನವ ಕೋಟಿಯ ಕಲ್ಯಾಣಕ್ಕಾಗಿ ಬ್ರಹ್ಮವಿದ್ಯೆಯನ್ನು ಪಡೆದು ಮಾನವರಾಗಿ ಅವತರಿಸಿ ಹಲವಾರು ಶ್ರುತಿ-ಸ್ಮೃತಿಗಳನ್ನು ಉಲ್ಲೇಖಿಸಿ ತತ್ವ ಪ್ರತಿಪಾದನೆ ಮಾಡುವ ಮೂಲಕ ಲೋಕ ಕಲ್ಯಾಣ ಕಾರ್ಯದಲ್ಲಿ ಶ್ರಮಿಸಿದ ಮಹಾನ್ ವೇದ ಪುರುಷರಾಗಿದ್ದಾರೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ವೆಂಕಟೇಶಆಚಾರ್ಯ ಜೋಶಿ, ಸುರೇಶಭಟ್ಟ ಪೂಜಾರ, ಕೆ. ಸತ್ಯನಾರಾಯಣಭಟ್ಟ, ರಘುನಾಥಭಟ್ಟ ತಾಸಿನ ಅವರ ನೇತೃತ್ವದಲ್ಲಿ ವಿಶೇಷ ಪೂಜೆಯೊಂದಿಗೆ ಅಷ್ಟೋತ್ತರ, ಅಲಂಕಾರ, ರುದ್ರಾಭಿಷೇಕ, ಆನಂತರ ಸುಮಂಗಲೆಯರಿಂದ ಯಾಜ್ಞವಲ್ಕ್ಯರ ತೊಟ್ಟಿಲೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಆನಂತರ ಸಕಲ ಸದ್ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿದರು.
ಈ ವೇಳೆ ಕೃಷ್ಣಾಚಾರ್ಯ ಇಟಗಿ, ಕಲ್ಲಿನಾಥಭಟ್ಟ ಜೀರೆ, ರಾಘವೇಂದ್ರ ಕುಲಕರ್ಣಿ, ಬದರಿಆಚಾರ್ಯ ಜೋಶಿ, ಸಂಜೀವ ಜೋಶಿ, ಸತೀಶ ಕುಲಕರ್ಣಿ, ರವಿ ಕುಲಕರ್ಣಿ, ಅಶೋಕ ತಾಸಿನ, ಸರ್ವತ್ತೋಮ ಜೋಶಿ, ವಿನಾಯಕ ಜೀರೆ, ಸುಧಾಕರ ಕುಲಕರ್ಣಿ, ರಾಕೇಶ ತಾಸಿನ, ಪ್ರವೀಣ ದೇಸಾಯಿ, ಎಸ್.ಬಿ.ಕುಲಕರ್ಣಿ, ಸುರೇಶ ಕುಲಕರ್ಣಿ ಸೇರಿ ಇತರರು ಇದ್ದರು.