ಘಮಸುಬಾಯಿ ತಾಂಡಾದಲ್ಲಿ ಜಗದಂಬಾ ಜಾತ್ರೆ ಸಂಭ್ರಮ

KannadaprabhaNewsNetwork |  
Published : Feb 12, 2024, 01:32 AM IST
ಚಿತ್ರ 11ಬಿಡಿಆರ್57ಎ | Kannada Prabha

ಸಾರಾಂಶ

ಶಾಸಕ ಪ್ರಭು ಬಿ.ಚವ್ಹಾಣ್‌ ನೇತೃತ್ವದಲ್ಲಿ ಹೋಮ, ಹವನ, ಅಭಿಷೇಕ, ಪೂಜಾ ಕಾರ್ಯಕ್ರಮಗಳು ಜರುಗಿತು. ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 100 ಕಲಾ ತಂಡಗಳ ಕಲಾವಿದರು ಕೋಲಾಟ, ತಮಟೆ ವಾದನ, ಬಂಜಾರಾ ಸಂಗೀತ, ಬಂಜಾರಾ ನೃತ್ಯ, ಕೀರ್ತನೆ, ಭಜನೆ, ಜಾನಪದ ಸಂಗೀತ, ಶಿವ ಭಜನೆಯಂತಹ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನಗಳನ್ನು ನೀಡಿದರು.

ಕನ್ನಡಪ್ರಭ ವಾರ್ತೆ ಔರಾದ್

ಶಾಸಕರಾದ ಪ್ರಭು.ಬಿ ಚವ್ಹಾಣ್‌ ಅವರ ಗ್ರಾಮವಾದ ಘಮಸುಬಾಯಿ ತಾಂಡಾ ಬೋಂತಿಯಲ್ಲಿ ಇಚ್ಛಾಪೂರ್ತಿ ಮಾತಾ ಜಗದಂಬಾ ದೇವಸ್ಥಾನದ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರು ಜಾತ್ರೆಯ ಮೆರಗನ್ನು ಹೆಚ್ಚಿಸಿದರು.

ಬೆಳಗ್ಗೆ ದೇವಸ್ಥಾನದಲ್ಲಿ ಶಾಸಕರ ನೇತೃತ್ವದಲ್ಲಿ ಹೋಮ, ಹವನ, ಅಭಿಷೇಕ, ಪೂಜಾ ಕೈಂಕರ್ಯಗಳನ್ನು ಭಕ್ತಿ ಭಾವದಿಂದ ನೆರವೇರಿಸಲಾಯಿತು. ಬಳಿಕ ಮಾತಾ ಜಗದಂಬಾ ದೇವಿ, ಸಂತ ಸೇವಾಲಾಲ್ ಮಹಾರಾಜ ಹಾಗೂ ಸಂತ ರಾಮರಾವ ಮಹಾರಾಜರ ಧ್ವಜಾರೋಹಣ ನೆರವೇರಿಸಿ ಎರಡನೇ ದಿನದ ಜಾತ್ರೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಈ ವೇಳೆ ಪೌರಾದೇವಿಯ ಪೂಜ್ಯರಾದ ಬಾಬುಸಿಂಗ್ ಮಹಾರಾಜರು ನಾಡಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ನಂತರ ದೇವಸ್ಥಾನದ ಆವರಣದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 100 ಕಲಾ ತಂಡಗಳ ಕಲಾವಿದರು ಕೋಲಾಟ, ತಮಟೆ ವಾದನ, ಬಂಜಾರಾ ಸಂಗೀತ, ಬಂಜಾರಾ ನೃತ್ಯ, ಕೀರ್ತನೆ, ಭಜನೆ, ಜಾನಪದ ಸಂಗೀತ, ಶಿವ ಭಜನೆಯಂತಹ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನಗಳನ್ನು ನೀಡಿದರು. ಇದೇ ವೇಳೇ ಶಾಸಕರು ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿ ಗೌರವಿಸಿದರು.

ಜಗದಂಬೆ ದೇವಸ್ಥಾನದಲ್ಲಿ ಬೇಡಿಕೊಂಡಿದೆಲ್ಲವೂ ಈಡೇರಿಕೆ:

ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಪ್ರಭು ಚವ್ಹಾಣ್‌ ಮಾತನಾಡಿ, ಇಚ್ಛಾಪೂರ್ತಿ ಮಾತಾ ಜಗದಂಬೆ ದೇವಸ್ಥಾನದಲ್ಲಿ ಬೇಡಿಕೊಂಡಿದ್ದೆಲ್ಲವೂ ಈಡೇರುತ್ತದೆ. ಹೀಗಾಗಿ ಸಾಕಷ್ಟು ಭಕ್ತರು ಆಗಮಿಸಿ ಹರಕೆಗಳನ್ನು ಹೊತ್ತುಕೊಳ್ಳುತ್ತಾರೆ. ದೇವಿಯ ಮಹಿಮೆ ಅಪಾರ. ದೇವಿಯು ಎಲ್ಲರ ಕಷ್ಟಗಳನ್ನು ಪರಿಹರಿಸುತ್ತಾರೆಂದು ಮಾತಾ ಜಗದಂಬೆಯ ಮಹಿಮೆ ವಿವರಿಸಿದರು.

ಕರ್ನಾಟಕವಲ್ಲದೇ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಭಕ್ತರೂ ತಾಂಡಾಗೆ ಬಂದು ಮಾತೆ ದರ್ಶನ ಪಡೆಯುತ್ತಾರೆ. ದೇವಸ್ಥಾನದ ಪ್ರಚಾರ, ಪ್ರಸಾರವಾಗಬೇಕು. ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಮತ್ತು ಧರ್ಮ, ಪರಂಪರೆಯನ್ನು ಉಳಿಸಬೇಕೆಂಬ ಉದ್ದೇಶದಿಂದ ಈ ಜಾತ್ರೆ ಆಯೋಜಿಸಲಾಗುತ್ತಿದೆ ಎಂದರು.

ಪೌರಾದೇವಿಯ ಪೂಜ್ಯ ಬಾಬುಸಿಂಗ್ ಮಹಾರಾಜರು ಆಶೀರ್ವಚನ ನೀಡಿದರು. ಮಾಜಿ ಶಾಸಕರಾದ ಗುಂಡಪ್ಪ ಬಿರಾದಾರ, ಸುಭಾಷ ಕಲ್ಲೂರ, ಪ್ರಕಾಶ ಖಂಡ್ರೆ ಹಾಗೂ ಹಿರಿಯ ಮುಖಂಡರಾದ ಬಾಬುರಾವ ಮದಕಟ್ಟಿ ಮಾತನಾಡಿದರು.

ಠಾಣಾಕುಶನೂರ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿ, ಗುಡಪಳ್ಳಿಯ ಪೂಜ್ಯ ಚಂದ್ರಶೇಖರ ಶಿವಾಚಾರ್ಯರು, ಮುಖಂಡರಾದ ಮಾರುತಿ ಚವ್ಹಾಣ್‌, ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಸುರೇಶ ಭೋಸ್ಲೆ, ಗುರುನಾಥ ಕೊಳ್ಳೂರ, ವಿಶ್ವನಾಥ ಪಟೀಲ ಮಾಡಗೋಳ, ಪ್ರತಿಕ್ ಚವ್ಹಾಣ್‌, ಸಚಿನ್ ರಾಠೋಡ್ ಇತರರು ಉಪಸ್ಥಿತರಿದ್ದರು.

ಇಂದು ಕುಸ್ತಿ ಪಂದ್ಯಾವಳಿ: ಸೋಮವಾರ ಮಧ್ಯಾಹ್ನ 1 ಗಂಟೆಯಿಂದ ಕುಸ್ತಿ ಪಂದ್ಯಾವಳಿ ನಡೆಯಲಿದ್ದು, ನಾಡಿನ ವಿವಿಧೆಡೆಯಿಂದ ಕುಸ್ತಿಪಟುಗಳು ಆಗಮಿಸುತ್ತಾರೆ. ಶಾಸಕ ಪ್ರಭು ಚವ್ಹಾಣ್‌ ಅವರಿಂದ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ